ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯ ಅನುಷ್ಠಾನ ಕ್ರಮ ಕುರಿತು ಅಜೀಂ ಪ್ರೇಮ್ಜಿ ಫೌಂಡೇಷನ್ ಇತ್ತೀಚೆಗೆ ಮೌಲ್ಯಮಾಪನ ನಡೆಸಿದ್ದು, 357 ಶಾಲೆಗಳಿಗೆ ಭೇಟಿ ನೀಡಿದಾಗ 66 ಶಾಲೆಗಳಿಗೆ ಈವರೆಗೂ ಮೊಟ್ಟೆಯೇ ವಿತರಣೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಪಿ.ಎಂ. ಪೋಷಣ್ ಯೋಜನೆ ಅಡಿ ರಾಜ್ಯ ಸರ್ಕಾರ ಎರಡು ಹಾಗೂ ಅಜೀಂ ಪ್ರೇಮ್ಜಿ ಫೌಂಡೇಷನ್ನಿಂದ ನಾಲ್ಕು ಸೇರಿ ವಾರಕ್ಕೆ ಆರು ಮೊಟ್ಟೆಗಳನ್ನು 48 ಸಾವಿರಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ.
ಆದರೆ, ಶಾಲಾ ಮಕ್ಕಳಿಗೆ ವಾರಕ್ಕೆ ಆರು ದಿನ ಬೇಯಿಸಿದ ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುವಲ್ಲಿ 98 ಅಧಿಕಾರಿಗಳು ವಿಫಲರಾಗಿದ್ದು, ಶಾಲಾ ಶಿಕ್ಷಣ ಇಲಾಖೆ ಈಗ ಆ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.
ಫೌಂಡೇಷನ್ ಪ್ರತಿನಿಧಿಗಳು ಸಿದ್ದಪಡಿಸಿದ ಅಧ್ಯಯನ ವರದಿ ಆಧರಿಸಿ ಅನುಷ್ಠಾನದ ಹೊಣೆ ಸಮರ್ಪಕವಾಗಿ ನಿಭಾಯಿಸದ 50 ಬಿಇಒಗಳು ಹಾಗೂ ಪಿ.ಎಂ. ಪೋಷಣ್ ಅಭಿಯಾನದ 48 ಸಹಾಯಕ ನಿರ್ದೇಶಕರೂ ಸೇರಿ 98 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್; ಭವಿಷ್ಯದ ಯುವ ಭಾರತಕ್ಕೂ ಮಾರಕ
ಅಜೀಂ ಪ್ರೇಮ್ಜಿ ಫೌಂಡೇಷನ್ ಮೊಟ್ಟೆ ವಿತರಣೆಗೆ ಕೈಜೋಡಿಸಿದ್ದು, ₹1,500 ಕೋಟಿ ನೆರವು ನೀಡಿದೆ. ಸೆ.25ರಿಂದ ಮೊಟ್ಟೆ ವಿತರಣೆ ಕಾರ್ಯಕ್ರಮ ಆರಂಭವಾಗಿದೆ. ಮೊಟ್ಟೆ ತಿನ್ನುವುದಿಲ್ಲ ಎಂದು ಬೇಡಿಕೆ ಸಲ್ಲಿಸುವ ಮಕ್ಕಳಿಗೆ ನಿಯಮದಂತೆ ಚಿಕ್ಕಿ, ಬಾಳೆಹಣ್ಣು ವಿತರಿಸಲಾಗುತ್ತಿದೆ.
ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಈ ಬಗ್ಗೆ ಮಾತನಾಡಿದ್ದು, “ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು, ದೈಹಿಕ ಆರೋಗ್ಯದ ಬೆಳವಣಿಗೆಗೆ ಉತ್ತೇಜಿಸಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಲಾಗಿದೆ. ಅಜೀಂ ಪ್ರೇಮ್ಜಿ ಫೌಂಡೇಷನ್ ನೆರವು ನೀಡುತ್ತಿದೆ. ಇಂತಹ ಮಹತ್ವಕಾಂಕ್ಷಿ ಯೋಜನೆ ಯಶಸ್ಸಿಗೆ ಶ್ರಮಿಸಬೇಕಾದ ಅಧಿಕಾರಿಗಳಿಂದ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಅಂಥವರ ವಿರುದ್ದ ಶಿಸ್ತುಕ್ರಮ ಅನಿವಾರ್ಯ” ಎಂದು ಎಚ್ಚರಿಸಿದ್ದಾರೆ.