ಊಟ ಬಡಿಸಲು ನಿರಾಕರಿಸಿದ ಪತ್ನಿಯ ಕತ್ತನ್ನು ಟವಲ್ನಲ್ಲಿ ಬಿಗಿದು ಪತಿಯೇ ಕೊಂದಿರುವ ಘಟನೆ ಶಿಕಾರಿಪುರದ ಅಂಬ್ಲಿಗೊಳ ಗ್ರಾಮದಲ್ಲಿ ನಡೆದಿದೆ.
ಅಂಬ್ಲಿಗೊಳ ಗ್ರಾಮದ ಗೌರಮ್ಮ (28) ಕೊಲೆಯಾದ ಮಹಿಳೆ. ಪತಿ ಮನು (35) ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಗೌರಮ್ಮ ಶಿಕಾರಿಪುರದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಗಂಡ ಮನು ಮನೆಗೆ ಬಂದಾಗ ಪತ್ನಿ ಗೌರಮ್ಮನಿಗೆ ಊಟ ಬಡಿಸುವಂತೆ ಕೇಳಿದ್ದ. ಈ ವೇಳೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಪತ್ನಿ ನೀನೇ ಊಟ ಬಡಿಸಿಕೊಳ್ಳುವಂತೆ ಪತಿಗೆ ಹೇಳಿದ್ದಳು. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿ, ಜಗಳ ವಿಕೋಪಕ್ಕೆ ತಿರುಗಿದೆ. ಅದೇ ಕೋಪದಲ್ಲಿ ಪತಿ ಮನು ಟವಲ್ನಿಂದ ಪತ್ನಿಯ ಕುತ್ತಿಗೆಗೆ ಟವಲ್ನಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಅವರು ಹೊರಗೆ ಆಟವಾಡುತ್ತಿದ್ದರು. ಶಿಕಾರಿಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.