ವೀರ ವನಿತೆ ಓಬವ್ವ ಈ ನಾಡ ಚರಿತ್ರೆಯ ವೀರ, ಶೌರ್ಯ, ಪರಾಕ್ರಮಕ್ಕೆ ಮನುಕುಲಕ್ಕೆ ಸ್ಫೂರ್ತಿದಾಯಕವಾಗಿದ್ದು, ಅಂದು, ಇಂದು, ಮುಂದೆಂದಿಗೂ ಮಹಿಳೆಯರಿಗೆ ಮಾತ್ರವಲ್ಲದೆ ಇಡೀ ಮನುಕುಲಕ್ಕೇ ಆದರ್ಶ ಮಹಿಳೆಯಾಗಿದ್ದಾರೆ. ಇಂದು ಅವರನ್ನು ಸ್ಮರಿಸುವುದು ನಮ್ಮ ಜನುಮದ ಪುಣ್ಯದಾಯಕ ಕೆಲಸವಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅದ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀರ ವನಿತೆ ಓಬವ್ವನ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, “ವೀರ ವನಿತೆ ಓಬವ್ವನ ಜೀವನಗಾಥೆಯನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ನಾವು ಬಾಲ್ಯದಿಂದಲೇ ತಿಳಿಸಬೇಕಾಗಿದೆ. ಸಮಾಜದಲ್ಲಿ ನಡೆವ ಅತ್ಯಾಚಾರ, ದೌರ್ಜನ್ಯ, ಶೋಷಣೆಗಳನ್ನು ಮೆಟ್ಟಿ ನಿಲ್ಲಲು ಓಬವ್ವನ ಚರಿತ್ರೆಯ ಜತೆಗೆ ಇತಿಹಾಸ ಪ್ರಸಿದ್ಧ ಇತರ ವೀರ ವನಿತೆಯರ ಯಶೋಗಾಥೆಯನ್ನೇ ನಾವು ತಿಳಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಚಿತ್ರದುರ್ಗದ ಕೋಟೆಯಲ್ಲಿನ ಓಬವ್ವನ ಕಿಂಡಿ ನೋಡಿದರೆ ಸಾಕು ಹೃದಯದ ಧಮನಿ, ಧಮನಿಗಳ ರಕ್ತವನ್ನು ರೋಮಾಂಚನಗೊಳಿಸುತ್ತದೆ. ಇಂದಿನ ಎಷ್ಟೋ ಮಕ್ಕಳಿಗೆ ಈ ವಿಚಾರವೇ ತಿಳಿದಿಲ್ಲದಿರುವುದು ದುರ್ದೈವದ ಸಂಗತಿ” ಎಂದರು.
“ಇಂದು ಮಕ್ಕಳು ಸಿನಿಮಾ, ಕ್ರಿಕೆಟ್, ರಾಜಕೀಯ ನಾಯಕರೇ ನಮ್ಮ ಆರಾಧ್ಯ ದೈವ. ಅವರೇ ನಿಜ ನಾಯಕರೆಂದು ಭಾವಿಸಿರುವುದು ಸಮಾಜದ ಮೌಲ್ಯಗಳ ಅವನತಿಗೆ ಹಿಡಿದ ಕೈಗನ್ನಡಿಯಾಗಿದೆ. ಪೋಷಕರು ಹಾಗೂ ಶಿಕ್ಷಕರ ಜತೆಗೆ ಮಾಧ್ಯಮಗಳೂ ಕೂಡಾ ವೀರ ವನಿತೆ ಓಬವ್ವನಂತಹ ಇತಿಹಾಸವನ್ನು ತಿಳಿಸಿ ಅವರಲ್ಲಿ ಮರಳಿ ಮೌಲ್ಯ ತುಂಬವಂತಹ ಜವಾಬ್ದಾರಿ ಅತ್ಯಗತ್ಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಣಿಪಾಲ | ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಶಾಲಾ ಮಕ್ಕಳ ರಿಕ್ಷಾ: ಮೂವರಿಗೆ ಗಾಯ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, “ರಾಷ್ಟ್ರೀಯ ಹಬ್ಬಗಳ ಸಮಿತಿ ಇತಿಹಾಸವನ್ನು ಮರೆತು ಹೋಗುವ ಮನುಕುಲಕ್ಕೆ ಪುಣ್ಯ ಪುರುಷರ ಜಯಂತಿಗಳ ಆಚರಣೆಗಳ ಮೂಲಕ ಅವರನ್ನು ಮುಂದಿನ ಪೀಳಿಗೆಯ ಜನರಿಗೂ ಪರಿಚಯಿಸುತ್ತಿರುವುದು ಅಭಿನಂದನಾರ್ಹ. ಅಂದು ಕೋಟೆ ಕಾಯಲು ಪ್ರಾಣತೆತ್ತ ಓಬವ್ವನ ಆತ್ಮ ಕೂಡ ಈ ಆಚರಣೆಯನ್ನು ಕಂಡು ತೃಪ್ತಭಾವ ಹೊಂದಿರುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಸ್ಕರ್, ಭಾಜಪ ಅಧ್ಯಕ್ಷ ಕೆ ಪಿ ಕುಮಾರ್, ಹೋರಾಟಗಾರ ಪರಮೇಶ್, ಸರ್ಕಾರಿ ನೌಕರರಾದ ಪ್ರದೀಪ್, ಯಶೋಧ, ಸಿದ್ದಬಸವಯ್ಯ ಸೇರಿದಂತೆ ಇತರರು ಇದ್ದರು.