ಗ್ರಾಮೀಣ ಭಾಗದಲ್ಲಿ ಜನರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರು ಮನಸು ಮಾಡಿದರೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬಗೆಗೂ ಜನರಲ್ಲಿ ದೊಡ್ಡ ಜಾಗೃತಿ ಮೂಡಿಸಲು ಸಾಧ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅಭಿಪ್ರಾಯಪಟ್ಟರು.
ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ವಿನ್ ಲೈಫ್, ಡಯಬಿಟಿಸ್ ವೆಲ್ನೆಸ್ ಸೆಂಟರ್, ಮೆಟ್ರೋ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ನಡೆದ ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ ಎಸ್ ನಟರಾಜ್ ಮಾತನಾಡಿ, “ಆರೋಗ್ಯ ಸುಧಾರಣೆಯಲ್ಲಿ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರವಾಗಿದೆ. ಅವರಿಗೆ ಇಂತಹ ತರಬೇತಿ ಅಗತ್ಯವಾಗಿ ಬೇಕಾಗಿತ್ತು. ಆ ನಿಟ್ಟಿನಲ್ಲಿ ವಿನ್ ಲೈಫ್, ಡಯಬಿಟಿಸ್ ವೆಲ್ ನೆಸ್ ಸೆಂಟರ್ ಹಾಗೂ ಮೆಟ್ರೋ ಆಸ್ಪತ್ರೆ ಮಧುಮೇಹ ಮತ್ತು ಸಿಪಿಆರ್ ಕುರಿತು ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಶ್ಲಾಘನೀಯವಾದದ್ದು” ಎಂದರು.
ಕಾರ್ಯಾಗಾರದಲ್ಲಿ ಆಶಾ ಕಾರ್ಯಕರ್ತೆಯರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಈ ಕಾರ್ಯಾಗಾರದಲ್ಲಿ ಮಧುಮೇಹ @360°, ಸಮತೋಲನ ಆಹಾರ ಪದ್ಧತಿ, ಮೆಡಿಕಲ್ ಯೋಗ ಥೆರಪಿ, ತುರ್ತು ಜೀವ ರಕ್ಷಕ ತರಬೇತಿ ಹಾಗೂ ಆಧುನಿಕ ಆವಿಷ್ಕಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸವನ್ನು ಸವಿಸ್ತಾರವಾಗಿ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಬೆಟ್ಟಿಂಗ್ ದಂಧೆ ವಿರುದ್ಧ ಜನಪರ ಸಂಘಟನೆಗಳಿಂದ ಪೋಸ್ಟರ್ ಅಭಿಯಾನ
ಡಾ ಪೃಥ್ವಿ ಬಿ ಸಿಯವರಿಂದ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಡಯಬಿಟಿಸ್ ಕುರಿತು ಸಂಪೂರ್ಣ ಮತ್ತು ನಿರಂತರ ಮಾಹಿತಿಗಾಗಿ ಕ್ಯೂಆರ್ ಸ್ಕ್ಯಾನರ್ ಕೋಡ್ ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ಆರ್ಸಿಹೆಚ್ ಅಧಿಕಾರಿ ಡಾ ಓ ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ನಾಗರಾಜ್ ನಾಯಕ್ ಎಲ್, ಮೆಟ್ರೋ ಆಸ್ಪತ್ರೆಯ ಅಧ್ಯಕ್ಷ ಡಾ ಪಿ ಲಕ್ಷ್ಮೀ ನಾರಾಯಣ ಆಚಾರ್ ಹಾಗೂ ವಿನ್ ಲೈಫ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪೃಥ್ವಿ ಬಿ ಸಿ ಇದ್ದರು.