ಕಳೆದ 40 ವರ್ಷಗಳಿಂದ ನೌಬಾದ್ನ ಸಮೀಪದ ಚೌಳಿ ಕಮಾನ್ ಹತ್ತಿರ ವಾಸಿಸುತ್ತಿರುವ 50 ಕ್ಕೂ ಹೆಚ್ಚಿನ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ವಿಶ್ವಕ್ರಾಂತಿ ದಿವ್ಯಪೀಠ ಸಂಘಟನೆಯ ನೇತೃತ್ವದಲ್ಲಿ ಅಲೆಮಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼ2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರು 63 ಜನ ಅಲೆಮಾರಿ ಸಮುದಾಯದವರಿಗೆ ತಾಲೂಕಿನ ಗೋರನಳ್ಳಿ ಸಮೀಪ 2 ಎಕರೆ ಸರ್ಕಾರಿ ಜಮೀನಿನಲ್ಲಿ ವಾಸಿಸಲು ನಿವೇಶನ ಮಂಜೂರು ಮಾಡುವಂತೆ ನಗರಸಭೆಗೆ ಸೂಚಿಸಿದರು. ಆದರೆ, ಇಲ್ಲಿಯವರೆಗೆ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆʼ ಎಂದು ದೂರಿದರು.
ʼಶಾಶ್ವತ ನಿವೇಶನ ಇಲ್ಲದೇ ಖಾಸಗಿ ಜಾಗದಲ್ಲಿ ವಾಸಿಸುವ ಅಲೆಮಾರಿಗಳಿಗೆ ಒಕ್ಕಲೆಬ್ಬಿಸುವ ಘಟನೆಗಳು ನಡೆದಿವೆ. ಇತ್ತೀಚೆಗೆ ಕೆಲವರು ಬಂದು ಜಾಗ ಖಾಲಿ ಮಾಡಿ, ಇಲ್ಲವಾದರೆ ಜೆಸಿಬಿಗಳಿಂದ ತೆರವುಗೊಳಿಸಲಾಗುವುದು ಎಂದು ಹೆದರಿಸಿದ್ದಾರೆ. ಇದರಿಂದ ಅಲೆಮಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಅವರ ನೆರವಿಗೆ ಧಾವಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕುʼ ಎಂದು ಆಗ್ರಹಿಸಿದರು.
ʼಕಳೆದ ಹತ್ತಾರು ವರ್ಷಗಳಿಂದ ಬಿಸಿಲು, ಮಳೆ, ಚಳಿ ಎನ್ನದೇ ಕತ್ತಲಲ್ಲಿ ಬಾಣಂತಿಯರು, ಮಹಿಳೆಯರು, ಪುಟ್ಟ ಮಕ್ಕಳು, ವಯಸ್ಸಾದವರು ಅಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಏಕಾಏಕಿ ಅಲ್ಲಿಂದ ತೆರವುಗೊಳಿಸಿದರೆ ಅವರು ಬೀದಿಪಾಲಾಗುತ್ತಾರೆ. ಜಿಲ್ಲಾಡಳಿತ ಅವರಿಗೆ ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಡಿಟಿಐ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 4 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆ!
ಈ ಸಂದರ್ಭದಲ್ಲಿ ವಿಶ್ವ ಕ್ರಾಂತಿ ದಿವ್ಯಪೀಠ ಸಂಘಟನೆಯ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಹಾಗೂ ಅಲೆಮಾರಿ ಸಮುದಾಯದವರು ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.