ಆರೋಪಿಗಳಾಗಲಿ, ತಪ್ಪಿತಸ್ಥರಾಗಿರಲಿ ಯಾರದ್ದೇ ಮನೆಗಳು, ಆಸ್ತಿಗಳನ್ನು ನೆಲಸಮ ಮಾಡಬಾರದು. ಬುಲ್ಡೋಜರ್ ಕಾರ್ಯಾಚರಣೆ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ‘ಬುಲ್ಡೋಜರ್ ಕ್ರಮ’ವನ್ನು ನಿಷೇಧಿಸಿ ಮಹತ್ವದ ತೀರ್ಪು ನೀಡಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದೆ.
‘ಬುಲ್ಡೋಜರ್ ನ್ಯಾಯ’ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶ ಸರ್ಕಾರವು ಅಪರಾಧಿಗಳು, ಆರೋಪಿಗಳ ಮನೆ-ಆಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿತ್ತು. ಬಳಿಕ, ಇದು ದೇಶಾದ್ಯಂತ ಪಸರಿಸಿತ್ತು. ಬುಲ್ಡೋಜರ್ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯೂ ಸಲ್ಲಿಕೆಯಾಗಿತ್ತು. ಈ ಹಿಂದೆ, ಬುಲ್ಡೋಜರ್ ನ್ಯಾಯವನ್ನು ಅನುಮೋದಿಸಲಾಗದು, ಯಾವುದೇ ಕಟ್ಟಡಗಳನ್ನು ಅಧಿಕಾರಿಗಳು ಕೆಡವಬೇಕೆಂದರೆ, ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಮಧ್ಯಂತರ ಆದೇಶ ನೀಡಿತ್ತು.
ಬುಧವಾರ, ಅಂತಿಮ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು, ‘ಬುಲ್ಡೋಜರ್ ನ್ಯಾಯ’ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಬುಲ್ದೋಜರ್ ಕ್ರಮವನ್ನು ನಿಷೇಧಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರ ಒಡೆತನದ ಆಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ವಿರುದ್ಧ ಸುಪ್ರೀಂ ಕೋರ್ಟ್ಗೆ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದವು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬುಲ್ಡೋಜರ್ ನ್ಯಾಯ ಅಸ್ತಿತ್ವದಲ್ಲಿದೆ. ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಇಂತಹ ಕ್ರಮವನ್ನು ಜರುಗಿಸುತ್ತಿದೆ ಎಂದು ಆರೋಪಿಸಲಾಗಿತ್ತು.
ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಮತ್ತು ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಜನರ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ವಿಷಯವನ್ನು ಗಮನಿಸಿದ ಸುಪ್ರೀಂ ಕೋರ್ಟ್, ”ಕ್ರಿಮಿನಲ್ ಪ್ರಕರಣದ ಆರೋಪಿಯ ಒಡೆತನದಲ್ಲಿದೆ ಎಂಬ ಕಾರಣಕ್ಕಾಗಿ ಮನೆಯನ್ನು ಹೇಗೆ ನೆಲಸಮ ಮಾಡಬಹುದು. ಓರ್ವ ಎಸಗಿದ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ಕೊಡುವುದು ನ್ಯಾಯವಲ್ಲ” ಎಂದು ಹೇಳಿದೆ.
ಈ ವರದಿ ಓದಿದ್ದೀರಾ?: ಬುಲ್ಡೋಜರ್ ನ್ಯಾಯ | ಭಾರತವನ್ನು ಆಕ್ರಮಿಸಿಕೊಂಡಿದ್ದು ಹೇಗೆ ಮತ್ತು ಏಕೆ?
ಯಾವುದೇ ಕಟ್ಟಡವು ಅಕ್ರಮವಾಗಿ ನಿರ್ಮಾಣವಾಗಿದ್ದರೆ, ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದರೆ ಮಾತ್ರವೇ ನೆಲಸಮ ಮಾಡಬಹುದು. ಅದಲ್ಲದೆ, ಬೇರೆ ಯಾವುದೇ ಕಾರಣಕ್ಕೂ ‘ಬುಲ್ಡೋಜರ್ ನ್ಯಾಯ’ದ ಹೆಸರಿನಲ್ಲಿ ಯಾವುದೇ ಕಟ್ಟಡವನ್ನು ನೆಲಸಮ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.