ಕೇರಳದ ವಯನಾಡ್ ಕ್ಷೇತ್ರದಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇರಳದಿಂದ ದೆಹಲಿಗೆ ಹಿಂದಿರುಗಿದ್ದಾರೆ. ದೆಹಲಿಗೆ ತಲುಪುತ್ತಿದ್ದಂತೆ ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ,’ಗ್ಯಾಸ್ ಚೇಂಬರ್’ ಪ್ರವೇಶಿಸಿದಂತಿತ್ತು ಎಂದು ಹೇಳಿಕೊಂಡಿದ್ದಾರೆ.
ವಿಶ್ವದಲ್ಲೇ ಅತೀ ಕಲುಷಿತ ಗಾಳಿ ಹೊಂದಿರುವ ನಗರವಾದ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಇನ್ನಷ್ಟು ಕಲುಷಿತಗೊಳ್ಳುತ್ತಿದೆ. ವರ್ಷ ಕಳೆದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ವಯನಾಡ್ ಉಪಚುನಾವಣೆ | ಪ್ರಿಯಾಂಕಾ ಗಾಂಧಿ ರಾಜಕೀಯ ಭವಿಷ್ಯ ಇಂದು ನಿರ್ಧಾರ!
“ಸ್ವಚ್ಛವಾದ ಗಾಳಿ ಇರುವ ಮತ್ತು ಎಕ್ಯೂಐ (ಗಾಳಿಯ ಗುಣಮಟ್ಟ) 35ರಷ್ಟಿರುವ ವಯನಾಡ್ನಿಂದ ದೆಹಲಿಗೆ ಹಿಂತಿರುಗುವುದು ಗ್ಯಾಸ್ ಚೇಂಬರ್ಗೆ ಪ್ರವೇಶಿಸಿದಂತಿದೆ. ಗಾಳಿಯಲ್ಲಿರುವ ಹೊಗೆಯ ಹೊದಿಕೆ ನೋಡಿ ಇನ್ನಷ್ಟು ಆಘಾತವಾಯಿತು” ಎಂದು ಪ್ರಿಯಾಂಕಾ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ದೆಹಲಿಯ ವಾಯುಮಾಲಿನ್ಯವು ಪ್ರತಿ ವರ್ಷವೂ ಹದಗೆಡುತ್ತಿದೆ. ನಾವು ಎಲ್ಲರೂ ಜೊತೆಯಾಗಬೇಕು ಮತ್ತು ಶುದ್ಧ ಗಾಳಿ ಪಡೆಯಲು ಪರಿಹಾರ ಕಂಡುಕೊಳ್ಳಬೇಕು. ಈ ಗಾಳಿಯನ್ನು ಉಸಿರಾಡುವುದು ವಿಶೇಷವಾಗಿ ಮಕ್ಕಳು, ಹಿರಿಯರು ಮತ್ತು ಉಸಿರಾಟದ ತೊಂದರೆ ಇರುವವರಿಗೆ ಅಸಾಧ್ಯವಾಗಿದೆ. ಇದಕ್ಕೆ ಏನಾದರೂ ಪರಿಹಾರವನ್ನು ನಾವು ಕಂಡುಕೊಳ್ಳಲೇಬೇಕು” ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
Coming back to Delhi from Wayanad where the air is beautiful and the AQI is 35, was like entering a gas chamber. The blanket of smog is even more shocking when seen from the air.
— Priyanka Gandhi Vadra (@priyankagandhi) November 14, 2024
Delhi’s pollution gets worse every year. We really should put our heads together and find a solution… pic.twitter.com/dYMtjaVIGB
ಪ್ರಿಯಾಂಕಾ ಗಾಂಧಿ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದ ವಯನಾಡ್ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಯು ಬುಧವಾರ ನಡೆದಿದೆ. ಚುನಾವಣೆ ಮುಗಿಯುತ್ತಿದ್ದಂತೆ ಪ್ರಿಯಾಂಕಾ ವಯನಾಡ್ನಿಂದ ದೆಹಲಿಗೆ ಹಿಂದಿರುಗಿದ್ದಾರೆ.
