ಪದ್ಮಭೂಷಣ ಡಾ.ಎಚ್.ಎನ್.ನರಸಿಂಹಯ್ಯ ಅವರ ಸ್ಮರಣಾರ್ಥ ನಿರ್ಮಿಸಿರುವ ಉದ್ಯಾನವು ಪೂರ್ಣವಾಗಿ ಪಾಳು
ಬಿದ್ದಿದ್ದು, ಅಕ್ಷರಶಃ ಅದ್ವಾನಗಳ ಆಗರವಾಗಿದೆ.
ಉದ್ಯಾನವನದಲ್ಲೆಲ್ಲಾ ಪಾರ್ಥೇನಿಯಂನಂತಹ ಗಿಡಗಂಟೆಗಳು ಬೆಳೆದು ನಿಂತಿದ್ದು, ರಾಶಿ ರಾಶಿ ಕಸಕಡ್ಡಿ ಬಿದ್ದಿದೆ. ಅಲ್ಲಿ ನೆಟ್ಟಿದ್ದ ಗಿಡಗಳು ಬಹುತೇಕ ಮಾಯವಾಗಿವೆ. ಸಂಜೆಯಾದರೆ ಇದು ಪುಂಡ ಪೋಕರಿಗಳ, ಕುಡುಕರ ಅಡ್ಡೆಯಂತಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
2017ರಲ್ಲಿ ಪುರಸಭೆ ವತಿಯಿಂದ ಪಟ್ಟಣದ 20ನೇ ವಾರ್ಡಿನಲ್ಲಿ ಡಾ.ಎಚ್.ಎನ್ ಉದ್ಯಾನವನ್ನು ನಿರ್ಮಿಸಲಾಗಿತ್ತು. ಪಟ್ಟಣದ ಮುಖ್ಯ ರಸ್ತೆಯಿಂದ ಗಂಗಮ್ಮನ ಗುಡಿ ರಸ್ತೆ ಮೂಲಕ ದರ್ಗಾ ವೃತ್ತ ಮೂಲಕ ಆಂಧ್ರ ಪ್ರದೇಶದ ಕೊಡಿಕೊಂಡಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 70 ಗುಂಟೆ ಸರಕಾರಿ ಜಮೀನಿನಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಉದ್ಯಾನವನದ ಹೃದಯ ಭಾಗದಲ್ಲಿರುವ ಎಚ್.ಎನ್ ಅವರ ಎದೆಯುದ್ದದ ಪುತ್ಥಳಿಯನ್ನು ಸ್ಥಾಪನೆ ಮಾಡಲಾಗಿದ್ದು, ಕಿಡಿಗೇಡಿಗಳು ಈ ಪುತ್ಥಳಿಯನ್ನು ವಿರೂಪಗೊಳಿಸಿದ್ದಾರೆ. ಪುತ್ಥಳಿ ಮುಂದೆ ನಾಮಫಲಕವನ್ನೂ ಸಹ ಹಾಕಿಲ್ಲ. ಅದಲ್ಲದೆ ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದ ಕಾರಣಕ್ಕೆ ಆ ಪುತ್ಥಳಿಯೂ ಬಿರುಕುಬಿಟ್ಟು ಶಿಥಿಲಾವಸ್ಥೆ ತಲುಪಿದೆ.

ಭದ್ರತೆ ಮತ್ತು ನಿರ್ವಹಣೆ :
ಉದ್ಯಾನವನಕ್ಕೆ ಸೂಕ್ತ ಭದ್ರತೆ ಹಾಗೂ ನಿರ್ವಹಣೆ ಇಲ್ಲದ ಕಾರಣಕ್ಕೆ ಆ ಪುತ್ಥಳಿಯ ಸುತ್ತಲೂ ಬೀಡಿ-ಸಿಗರೇಟ್ ತುಂಡುಗಳು, ಮದ್ಯದ ಬಾಟಲಿಗಳು ಬಿದ್ದಿರುವುದು ಅನೈತಿಕ ಚಟುವಟಿಕೆಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಂತಾಗಿದೆ.
ವೈಚಾರಿಕ ಪ್ರಜ್ಞೆ ಡಾ.ಎಚ್.ಎನ್ ರವರ ಹೆಸರಿನಲ್ಲಿ ನಿರ್ಮಿಸಿರುವ ಉದ್ಯಾನವನವು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.
ಬಳಕೆಗೆ ಬಾರದಷ್ಟು ಅದ್ವಾನ :
ಉದ್ಯಾನವನಕ್ಕೆ ಸುತ್ತಲೂ ಕಾಂಪೌಂಡ್ ಕೂಡ ಇದೆ. ಕೂರಲು ಆಸನಗಳನ್ನು ಹಾಕಲಾಗಿದೆ. ಅವು ಅನಾಥವಾಗಿ ಅವುಗಳ ಸುತ್ತಲೂ ಗಲೀಜಿನದ್ದೆ ಕಾರುಬಾರಾಗಿದೆ. ವಾಕಿಂಗ್ ಟ್ರ್ಯಾಕ್ ಗಳಿವೆ. ಆದರೆ ನಿರ್ವಹಣೆ ಇಲ್ಲದೆ ಹುಲ್ಲಿನಡಿ ಮುಚ್ಚಿ ಹೋಗಿವೆ. ಅರಣ್ಯ ಇಲಾಖೆಯವರು ಗಿಡ ನೆಟ್ಟಿದ್ದಾರಂತೆ, ಆದರೆ ಅವುಗಳ ಪಾತಿಗಳೂ ಇಲ್ಲವಾಗಿವೆ. ವ್ಯಾಯಾಮ ಮಾಡಲು ಉಪಕರಣಗಳನ್ನು ಜೋಡಿಸಲಾಗಿದ್ದು, ತುಕ್ಕು ಹಿಡಿಯುವ ಹಂತ ತಲುಪಿವೆ. ಕೊಳವೆ ಬಾವಿಯನ್ನೂ ಕೊರೆಸಲಾಗಿದ್ದು, ನೀರಿನ ಸಂಗ್ರಹಗಾರವೂ ಇದೆ. ಇದಾವುದರ ನಿರ್ವಹಣೆ ಇಲ್ಲದೆ ಕಾರಣ ಎಲ್ಲವೂ ಬಳಕೆಗೆ ಬಾರದಷ್ಟು ಅದ್ವಾನವಾಗಿ ಉದ್ಯಾನವನ ಪಾಳು ಬಿದ್ದಿದೆ. ಮಳೆ ನೀರು ಇಂಗುವ ವ್ಯವಸ್ಥೆಯನ್ನೂ ಮಾಡಿಲ್ಲ.

ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರೂ ಪ್ರಯೋಜವಾಗಲಿಲ್ಲ:
ಈ ಉದ್ಯಾನವನವನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಜನತಾದರ್ಶನ ಸೇರಿದಂತೆ ಹಲವು ಬಾರಿ ನಾಗರೀಕರು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ಪುರಸಭೆಯ ಮುಖ್ಯಾಧಿಕಾರಿಗಳಿಗೂ ಮೌಖಿಕವಾಗಿ ಉದ್ಯಾನವನದ ನಿರ್ವಹಣೆ ಮಾಡುವಂತೆ ಸೂಚಿಸಿದ್ದರಾದರೂ, ಯಾವುದೇ ಕ್ರಮಕೈಗೊಳ್ಳದೆ ಮತ್ತಷ್ಟು ಅದ್ವಾನವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭೆಯ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಇರುವವರೊಂದಿಗೆ ಗರಿಷ್ಠ ಪ್ರಮಾಣದಲ್ಲಿ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ತುರ್ತು ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುತ್ತಿದ್ದು, ಹಂತಹಂತವಾಗಿ ಉದ್ಯಾನವನಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತದ ಎನ್ನುತ್ತಾರೆ.
ಉದ್ಯಾವನಗಲ ಅಸಮರ್ಪಕ ನಿರ್ವಹಣೆ ಕುರಿತು ಎಸ್ಎಫ್ಐ ಜಿಲ್ಲಾಧ್ಯಕ್ಷ ಸೋಮಶೇಖರ್ ಪ್ರತಿಕ್ರಿಯಿಸಿ, ಡಾ.ಎಚ್.ಎನ್.ನರಸಿಂಹಯ್ಯ ಉದ್ಯಾನವನವನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯದಿಂದ ಅದ್ವಾನವಾಗಿದೆ. ಇದರ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು. ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಕೂಡಲೇ ನೇಮಕ ಮಾಡಲು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳಬೇಕು. ನಾಗರೀಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಡಬೇಕು. ಇಲ್ಲವಾದರೆ ಪುರಸಭೆಯ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
(ವರದಿ : ರಾ.ನ ಗೋಪಾಲರೆಡ್ಡಿ, ಬಾಗೇಪಲ್ಲಿ)

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.