ಶಿವಮೊಗ್ಗ ನಗರದ ಬಹುಭಾಗಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವುದರಿಂ ದಿನದಿಂದ ದಿನಕ್ಕೆ ಕಸದ ರಾಶಿ ಹೇರಳವಾಗುತ್ತಲೇ ಇದೆ. ನಗರದ ಗಾಂಧಿ ಬಜಾರ್ ವಾರ್ಡ್ ನಂಬರ್ 22, 23 ಪೂರ್ವ ಮತ್ತು ಪಶ್ಚಿಮ ಪ್ರದೇಶ ವ್ಯಾಪಾರ ಕೇಂದ್ರವೂ ಹೌದು. ಹಾಗಾಗಿ ಇಲ್ಲಿಗೆ ನಿತ್ಯವೂ ಬಹುತೇಕ ಸಾರ್ವಜನಿಕರು, ಗ್ರಾಹಕರು ಅನೇಕ ವಸ್ತುಗಳನ್ನು ಖರೀದಿಸುವುದಕ್ಕಾಗಿ ಆಗಮಿಸುತ್ತಾರೆ.
ಮುಖ್ಯವಾಗಿ ಗಾಂಧಿ ಬಜಾರ್ನಲ್ಲಿ ಬಟ್ಟೆ ವ್ಯಾಪಾರ, ದಿನಸಿ ವ್ಯಾಪಾರ, ಹೋಲ್ಸೇಲ್ ಮತ್ತು ರಿಟೇಲ್ ಅಂಗಡಿಗಳಿದ್ದು, ಹೂವು, ಹಣ್ಣು, ತರಕಾರಿ ಹೀಗೆ ಅನೇಕ ವಸ್ತುಗಳನ್ನು ಕೊಳ್ಳಲು ಹಲವುಕಡೆಯಿಂದ ಸಾವಿರಾರು ಮಂದಿ ಗ್ರಾಹಕರು ನಿತ್ಯವೂ ಬಂದು ಹೋಗುತ್ತಾರೆ.
ಸ್ವಚ್ಛ ನಗರದಲ್ಲಿ ಕಸದ ರಾಶಿ ಹೆಚ್ಚುತ್ತಿರುವ ಕುರಿತು ಮಾಜಿ ಮೇಯರ್ ಸುನಿತಾ ಅಣ್ಣಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮನೆ ಮನೆಗೆ ಹಸಿಕಸ, ಒಣಕಸ ಬಕೆಟ್ ಕೊಟ್ಟಿದ್ದರ ಉದ್ದೇಶವೇ ಜನರಲ್ಲಿ ಕಸ ವಿಲೇವಾರಿ ಜಾಗೃತಿ ಮೂಡಿಸುವ ಸಲುವಾಗಿ. ಕೆಲವು ಪ್ರಜ್ಞಾವಂತರು ಇಂದಿಗೂ ಕೂಡಾ ಸ್ವಚ್ಛತೆ ಮಾಡಿ ಹಸಿಕಸ, ಒಣಕಸ ಬೇರ್ಪಡಿಸಿ ಮಹಾನಗರ ಪಾಲಿಕೆ ಕಸದ ವಾಹನಕ್ಕೆ ನೀಡುತ್ತಾರೆ. ನಗರದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ಸಾರ್ವಜನಿಕರೂ ಕೂಡಾ ಸಹಕಾರ ನೀಡಬೇಕು” ಎಂದು ಹೇಳಿದರು.

“ಒಂದು ವರ್ಷ ಕಳೆದರೂ ಮಹಾನಗರ ಪಾಲಿಕೆ ಚುನಾವಣೆ ನಡೆಯದಿರುವ ಕಾರಣ ಮಹಾನಗರ ಪಾಲಿಕೆ ಅಧಿಕಾರಿಗಳೇ ವಾರ್ಡ್ಗಳ ಕೆಲಸವನ್ನು ವಿಂಗಡಣೆ ಮಾಡಿಕೊಂಡಿದ್ದಾರೆ. ಈಗ ನನ್ನ ಮೇಯರ್ ಅವಧಿ ಮುಗಿದಿರುವುದರಿಂದ ಮಹಾನಗರ ಪಾಲಿಕೆ ಸಭೆಯಲ್ಲಿ ಭಾಗವಹಿಸಿ ಪ್ರಶ್ನಿಸಲು ಆಗುವುದಿಲ್ಲ. ಮುಂಚೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಒಟ್ಟುಗೂಡಿ ಕೆಲಸ ಮಾಡಿ ಸಮಸ್ಯೆ ಬಗೆಹರಿಸಿಕೊಡುವ ಅವಕಾಶವಿತ್ತು. ಹಾಗೆಯೇ ಪೌರಕಾರ್ಮಿಕರು ಕಸ ವಿಲೇವಾರಿ ಮಾಡುತ್ತಿರುವ ಜಾಗದಲ್ಲಿ ಸಾರ್ವಜನಿಕರೂ ಕೂಡಾ ಎಸೆಯುತ್ತಿದ್ದಾರೆ. ಹಾಗೆ ಮಾಡದಂತೆ ತಿಳಿಸಿದ್ದೆವು. ಈಗ ಮಹಾನಗರ ಪಾಲಿಕೆಯಲ್ಲಿ ನೌಕರರ ಸಂಖ್ಯೆಯೂ ಕಡಿಮೆಯಿದೆ. ಎಲ್ಲ ಜವಾಬ್ದಾರಿಯೂ ಅಧಿಕಾರಿಗಳ ಕೈಯಲ್ಲಿದೆ. ಹಾಗಾಗಿ ಇದರ ಸಂಬಂಧ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮ ಜರುಗಿಸುವ ಮುಖಾಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಅರೋಗ್ಯಧಿಕಾರಿ ಶೈಲಜ ಮಾತನಾಡಿ, “ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ವಾಹನದ ಕೊರತೆಯಿತ್ತು. ಈಗ ವಾಹನ ಸಂಖ್ಯೆ ಜಾಸ್ತಿಯಿದೆ. ಪ್ರತಿಯೊಂದು ಮನೆ ಹಾಗೂ ಬಜಾರ್ನಲ್ಲಿರುವ ಅಂಗಡಿಗಳ ಬಳಿ ವಾಹನದಲ್ಲಿ ಕಸ ತೆಗೆದುಕೊಂಡು ಹೋಗುತ್ತಿದ್ದಾರೆ. ಒಣಕಸ, ಹಸಿಕಸ ಬೇರ್ಪಡಿಸಿ ಪೌರಕಾರ್ಮಿಕರು ಕಸವನ್ನು ವಾಹನಕ್ಕೆ ಹಾಕಿಕೊಂಡು ಹೋಗುತ್ತಿದ್ದಾರೆ.
ಈ ಸಮಸ್ಯೆ ಕುರಿತಾಗಿ ಗಾಂಧಿ ಬಜಾರ್ನಲ್ಲಿರುವ ಅಂಗಡಿಗಳಿಗೆ ಶೀಘ್ರದಲ್ಲಿ ನೋಟಿಸ್ ಜಾರಿ ಮಾಡುವ ಮೂಲಕ ಕ್ರಮ ಜರುಗಿಸಿ ಸಮಸ್ಯೆಗೆ ಪರಿಹಾರ ನೀಡುವುದು ಹಾಗೂ ರಾತ್ರಿ ಸಮಯದಲ್ಲಿಯೂ ಒಂದು ಗಂಟೆ ಗಾಡಿಯಲ್ಲಿ ಕಸ ತೆಗೆದುಕೊಂಡು ಬರುವಂತೆ ಸೂಚಿಸುತ್ತೇನೆ. ಹಾಗೆಯೇ ದಂಡ ವಿಧಿಸುವ ಬಗ್ಗೆ ಎಇಇಯೊಂದಿಗೆ ಚರ್ಚಿಸಿ ಕ್ರಮ ಜರುಗಿಸುತ್ತೇನೆ. ಹಾಗೆಯೇ ಎಲ್ಲೆಂದರಲ್ಲಿ ಕಸ ಎಸೆಯುವ ಕೆಲವರಿಗೆ ದಂಡ ವಿಧಿಸಿವುದನ್ನು ಅನಿವಾರ್ಯ ಮಾಡುವುದರಿಂದ ಸಾರ್ವಜನಿಕರು ಮತ್ತು ನಗರಿಕರಲ್ಲಿ ಅರಿವು ಮೂಡಿಸಬಹದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಯುಜಿಡಿ ಸೂಪರ್ವೈಸರ್ ಹಾಗೂ ಪೌರಕಾರ್ಮಿಕ ಸಂಫದ ಅಧ್ಯಕ್ಷ ಗೋವಿಂದಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಶಿವಮೊಗ್ಗ ನಗರದ ಬಹಳಷ್ಟು ಭಾಗಗಳಲ್ಲಿ ಕಸ ವಿಲೇವಾರಿ ಮಾಡುವ ಜಾಗಗಳು ಜಾಸ್ತಿಯಾಗಿದೆ. ಹಾಗಾಗಿ ಇದರಿಂದ ಸಾರ್ವಜನಿಕರೂ ಕೂಡಾ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ದಂಡ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದು ಹೇಳಿದರು.

“ಶಾಲೆ ಹಾಗೂ ಅಂಗನವಾಡಿ ಬಳಿ ಕಸ ಸುರಿಯುತ್ತಿರುವುದರ ಕುರಿತು ನನ್ನ ಗಮನಕ್ಕೆ ಬಂದಿರಲಿಲ್ಲ, ಸರಿಪಡಿಸಿಕೊಡುತ್ತೇವೆ. ಶೀಘ್ರದಲ್ಲಿ ನಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ರೂಪು ರೇಷೆ ಕುರಿತು ಮಾಹಿತಿ ನೀಡುತ್ತೇವೆ. ನಮ್ಮ ಗಮನಕ್ಕೆ ತಂದಿರುವುದಕ್ಕೆ ಧನ್ಯವಾದಗಳು. ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ನಮ್ಮ ನಗರ ನಮ್ಮ ಸ್ವಚ್ಛತೆ ಎಂಬ ಅರಿವು ನಮ್ಮೆಲ್ಲರ ಕರ್ತವ್ಯ. ನಾವು ನಿಮ್ಮ ಮಾಹಿತಿಗೆ ಆದಷ್ಟು ಬೇಗ ಪರಿಹಾರ ಒದಗಿಸಿಕೊಡುವತ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಸಾರ್ವಜನಿಕರಾದ ಮೋಹನ್, ಸಯೇದ್ ಹಶೀಮ್, ಸಂದೀಪ್ ನಮ್ಮೊಂದಿಗೆ ಮಾತನಾಡಿ, “ಪೌರಕಾರ್ಮಿಕರು ನಮ್ಮಂತೆಯೇ ಮನುಷ್ಯರು. ನಮ್ಮ ಹಾಗೆ ಅವರಿಗೂ ಕುಟುಂಬವಿದೆ. ಕೆಲವು ಜನರು ಈ ರೀತಿ ನಡೆದುಕೊಳ್ಳುವುದು ತಪ್ಪು. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ನಮಗೆ ಬೇಕಾಗಿರುವುದು ಸ್ಮಾರ್ಟ್ ಸಿಟಿಯಲ್ಲ, ಸ್ವಚ್ಛ ನಗರ ಮತ್ತು ಆರೋಗ್ಯ ಪೂರ್ಣ ವಾತಾವರಣ” ಎಂದು ಹೇಳಿದರು.

“ಸ್ಮಾರ್ಟ್ ಸಿಟಿ ಮಾಡಿದಂತಹ ಸಮಯದಲ್ಲಿ ತೆರೆದ ಚರಂಡಿಗಳನ್ನು ಮುಚ್ಚಿದ್ದಾರೆ. ಇದರಿಂದ ಕ್ರಿಮಿ ಕೀಟ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಯುಜಿಡಿಯಲ್ಲಿ ಪ್ಲಾಸ್ಟಿಕ್ ಕವರ್ಗಳು ಸೇರಿಕೊಂಡು ಕೆಸರು ತುಂಬಿದೆ. ಒಳಚರಂಡಿಯ ಗುಂಡಿ ತೆಗೆದು ಸ್ವಚ್ಛ ಮಾಡುವ ಪರಿಸ್ಥಿತಿ ಇಲ್ಲದಿರುವ ಕಾರಣ ಸ್ವಚ್ಛವಾಗುತ್ತಿಲ್ಲ. ಅಂದು ಕಾಂಗ್ರೆಸ್ ಶಾಸಕರಾಗಿದ್ದ ಪ್ರಸನ್ನ ಕುಮಾರ್ ಅವರು ಸಾರ್ವಜನಿಕರಿಗೆ, ಪೌರಕಾರ್ಮಿಕರಿಗೆ ಅನುಕೂಲವಾಗುವ ಸಲುವಾಗಿ ನಗರದ ಹಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಿದ್ದರು. ಅವರ ಅಧಿಕಾರದ ನಂತರ ಇಂದಿಗೂ ನೀರು ಕುಡಿಯುವುದಕ್ಕೆ ಯೋಗ್ಯವಲ್ಲದಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಗಾಂಧಿ ಬಜಾರ್ ಬಳಿಯ ಬಸ್ ನಿಲ್ದಾಣದ ಹಿಂಭಾಗವೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದನ್ನು ಈವರೆಗೆ ಸ್ವಚ್ಚ ಮಾಡಿಸಿಲ್ಲ. ಸಾರ್ವಜನಿಕರು, ಪೌರಕಾರ್ಮಿಕರು ಅನಿವಾರ್ಯ ಕಾರಣಕ್ಕೆ ಕೆಲಸದ ಪ್ರಯುಕ್ತ ಬಂದಾಗ ಅದೇ ಕಸ ಗಲೀಜ್ ಮಿಶ್ರಿತ ನೀರನ್ನು ಕುಡಿಯುತ್ತಿದ್ದಾರೆ. ಇದೂ ಕೂಡಾ ಸರಿಯಾಗಬೇಕು” ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

“ಗಾಂಧಿ ಬಜಾರ್ ಪಕ್ಕದಲ್ಲಿರುವ ಸರ್ಕಾರಿ ಶಾಲೆ ಮತ್ತು ಅಂಗನವಾಡಿ, ರವಿ ಟ್ರೇಡರ್ಸ್, ಸಾವರ್ಕರ್ ನಗರ, ಬಿ ಬಿ ಸ್ಟ್ರೀಟ್ ಸರ್ಕಾರಿ ಶಾಲೆ ಮುಂಭಾಗ, ಅಜಾದ್ ಶಾಲೆಯ ಕಾಂಪೌಂಡ್, ಕೆ ಆರ್ ಪುರಂ ಸರ್ಕಾರಿ ಶಾಲೆ ಬಳಿ ಯಾರೂ ಪ್ರಶ್ನಿಸುವುದಿಲ್ಲವೆಂದು ಕಂಡಾಬಟ್ಟ ಕಸ ಸುರಿಯುತ್ತಾರೆ. ʼಇಲ್ಲಿ ಕಸ ಹಾಕಿದಲ್ಲಿ ದಂಡ ವಿಧಿಸಲಾಗುತ್ತದೆʼ ಎಂಬ ನಾಮಫಲಕ ಹಾಕಿದ್ದಾರೆ. ಅಲ್ಲಿಯೇ ಮಹಾನಗರ ಪಾಲಿಕೆಯಿಂದಲೂ ಕಸ ಸುರಿಯುತ್ತಾರೆ. ಶಾಲೆಗೆ ಬರುವ ಮಕ್ಕಳು ಹಾಗೂ ಶಾಲೆಗೆ ಮಕ್ಕಳನ್ನು ಬಿಡಲು ಬರುವ ಪೋಷಕರ ಮನಸ್ಥಿತಿ ಏನಾಗಬಹುದು?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಡಿ.3-4ರಂದು ‘ಬಹುಸಂಸ್ಕೃತಿ ಉತ್ಸವ’: ಲಾಂಛನ ಬಿಡುಗಡೆ
“ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಶಿವಮೊಗ್ಗದ ಪ್ರಜ್ಞಾವಂತ ನಾಗರಿಕರು ಮುಂದಿನ ದಿನಗಳಲ್ಲಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ಕೈ ಜೋಡಿಸುವರೆ? ರಾಷ್ಟ್ರಪತಿಗಳಿಂದ ʼಸ್ವಚ್ಛ ನಗರʼವೆಂದು ಬಿರುದ ಪಡೆದ ಶಿವಮೊಗ್ಗ ಸ್ಮಾರ್ಟ್ ಸಿಟಿ ಮುಂದಕ್ಕೂ ಸಹ ಕ್ಲೀನ್ ಸಿಟಿ ನಂಬರ್ 1 ಪಟ್ಟ ಉಳಿಸಿಕೊಳ್ಳತ್ತದಯೇ ಎಂಬುದನ್ನು ಕಾದು ನೋಡಬೇಕಿದೆ” ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದರು.
