ಉತ್ತರ ಕರ್ನಾಟಕದಾದ್ಯಂತ ನಾಟಕ ಚಟುವಟಿಕೆಗಳನ್ನು ನಿರಂತರ ನಡೆಸಿ ರಂಗ ಲೋಕವನ್ನು ಜೀವಂತವಾಗಿರಿಸಲು ಬದ್ಧವಾಗಿದ್ದೇನೆ ಎಂದು ಧಾರವಾಡ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಮಕ್ಕಳ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಸಾಂಸ್ಕೃತಿಕ ಚಳುವಳಿಗೆ ಧಾರವಾಡದ ಪರಿಸರ ಫಲವತ್ತಾದ ನೆಲ ಎಂಬುದು ನನ್ನ ಮನವರಿಕೆಗೆ ಬಂದಿದೆ. ನಿರಂತರ ರಂಗಕ್ರಿಯೆಗಳನ್ನು ನಡೆಸಿ, ನಾಟಕೋತ್ಸವ ಮುಂದುವರೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹಡಪದ ಮಾತನಾಡಿ, ಮರಾಠಿ ನಾಟಕಗಳ ವಿಪರೀತ ಹಾವಳಿಯ ವಿರುದ್ಧ ಸಿಡಿದೆದ್ದು ಶೂನ್ಯ ಸ್ಥಿತಿಯಲ್ಲಿದ್ದ ಕನ್ನಡ ರಂಗಭೂಮಿಗೆ ಅಪಾರವಾಗಿ ಶ್ರಮಿಸಿದ ಸಕ್ರಿ ಬಾಳಾಚಾರ್ಯ ಕಷ್ಟಪಟ್ಟ ಪರಿ ಅಮೋಘ ಮತ್ತು ಅವಿಸ್ಮರಣೀಯ ಎಂದರು. ದತ್ತಿದಾನಿಗಳಲ್ಲೊಬ್ಬರಾದ ಹಿರಿಯ ಸಾಹಿತಿ ಡಾ.ಶಶಿಧರ ನರೇಂದ್ರ ಮಾತನಾಡಿ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳ ಸಂಗಮ ಎಂದೇ ಪ್ರಸಿದ್ಧಿಯಾದ ಧಾರವಾಡ ಎಲ್ಲ ಲಲಿತಕಲೆಗಳ ಸಮಾಗಮವಾದ ರಂಗಭೂಮಿಯ ನಿಜವಾದ ತವರೂರು ಸಹ ಹೌದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ರಾಜ್ಯೋತ್ಸವದ ತಿಂಗಳಿನಲ್ಲಿ ಅರ್ಥಗರ್ಭಿತ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿ ಎಲ್ಲರೊಳಗೆ ಕನ್ನಡಜ್ಯೋತಿ ಬೆಳಗುವ ಉದ್ದೇಶವನ್ನು ಕ.ಸಾ.ಪ ಹೊಂದಿದೆ ಎಂದರು.
ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸಿ ಅವರನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆ ಪಾಲಕರದ್ದು. ಸಂಪದ್ಭರಿತ ದೇಶದ ನಾಳಿನ ನಾಗರಿಕರೆಂಬ ಅದಮ್ಯ ವಿಶ್ವಾಸ ಹೊಂದಿದ್ದ ಪಂ.ಜವಾಹರಲಾಲ ನೆಹರೂ ತಮ್ಮ ಜನ್ಮದಿನ ಮಕ್ಕಳ ದಿನವನ್ನಾಗಿಸುವ ನಿರ್ಧಾರವನ್ನು ಅಂದೇ ತೆಗೆದುಕೊಂಡಿದ್ದರೆಂದು ಸನ್ಮಾನ ಸ್ವೀಕರಿಸಿದ ಕಾಂಗ್ರೆಸ್ ಹಿರಿಯ ಧುರೀಣ ರಾಬರ್ಟ್ ದದ್ದಾಪುರಿ ಹೇಳಿದರು.
‘ರಂಗಸಾಮ್ರಾಟ ಅಭಿನಯ ಶಾಲೆ’ ಮಕ್ಕಳು ಸಿಕಂದರ ದಂಡಿನ ನಿರ್ದೇಶನದ ಕಾವ್ಯಾಭಿನಯ ರೂಪಕ ಪ್ರದರ್ಶಿಸಿದರು. “ಮೊಬೈಲ್ ಮಲ್ಲ” ಎಂದು ಖ್ಯಾತಿಯ ಮಲ್ಲಪ್ಪ ಹೊಂಗಲ ಹಾಸ್ಯದ ಹೊನಲು, ಇಮಾಮಸಾಬ ವಲ್ಲೆಪ್ಪನವರ ಭಾವೈಕ್ಯತಾ ಗೀತೆಗಳನ್ನು ಪ್ರದರ್ಶಿಸಿದರು.
ಪ್ರೊ. ಕೆ. ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥನಾ ಗೀತೆ ಹಾಡಿದರು. ಡಾ. ಎಸ್. ಎಸ್. ದೊಡಮನಿ ಉಪಸ್ಥಿತರಿದ್ದರು. ತಾಲೂಕಾ ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ಲ ವಂದಿಸಿದರು.