ಮಕ್ಕಳ ಮನಸ್ಸು ಹಸಿಗೋಡೆಯಂತೆ ಅವರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರ ಬಿತ್ತಿದರೆ ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ ಎಂದು ಬಸವ ಸೇವಾ ಪ್ರತಿಷ್ಠಾನ ಬಸವಗಿರಿಯ ಅಧ್ಯಕ್ಷರಾದ ಡಾ.ಗಂಗಾಂಬಿಕಾ ಪಾಟೀಲ್ ನುಡಿದರು.
ಬೀದರ್ ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ನಡೆದ ಶರಣ ಸಂಗಮ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಜಯಂತ್ಯುತ್ಸವ, ಮಕ್ಕಳ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.
ʼಮಕ್ಕಳಲ್ಲಿ ಬಸವಾದಿ ಶರಣರ ವಚನಗಳ ಮೌಲ್ಯಗಳನ್ನು ಮಕ್ಕಳ ಬಿತ್ತಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡಬೇಕು. ಮಕ್ಕಳಲ್ಲಿ ಅದ್ಬುತವಾದ ಶಕ್ತಿಯಿರುತ್ತದೆ. ಅವರನ್ನು ಕಡೆಗಣಿಸದೆ ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು. ಇಂದಿನ ಮಕ್ಕಳೇ ನಾಳಿನ ಶರಣರಾಗುತ್ತಾರೆ. ನಮ್ಮನ್ನು ನೋಡಿ ಮಕ್ಕಳು ಅನುಕರಿಸುವುದರಿಂದ ನಮ್ಮ ನಡೆ-ನುಡಿ ಒಂದಾಗಿರಬೇಕುʼ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಮಕ್ಕಳ ಪರಿಷತ್ತು ಅಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿ, ʼಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಮತ್ತು ಶಕ್ತಿಯಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಎಳೆಯ ಮಕ್ಕಳಿಗೆ ವಚನಗಳನ್ನು ಮುಟ್ಟಿಸುವಂತಹ ಇಂತಹ ಕಾರ್ಯಗಳು ಶ್ಲಾಘನೀಯʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೀದರ ಸರಕಾರಿ ಬಾಲಕರ ಬಾಲಮಂದಿರದ ಅಧಿಕ್ಷಕರಾದ ರೂಪಾ ಕೋಟೆಗೌಡರ್ ಉದ್ಘಾಟಿಸಿ ಮಾತನಾಡಿ, ʼಸಂಸ್ಕಾರಯುತ ಮಕ್ಕಳೇ ದೇಶದ ನಿಜವಾದ ಆಸ್ತಿ, ಜೀವನ ಸಾರ್ಥಕವಾಗಲು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಚನಗಳು ಮಾನವೀಯ ಮೌಲ್ಯಗಳ ಆಗರವಾಗಿವೆʼ ಎಂದರು.
ಪಾಪನಾಶ ದೇವಸ್ಥಾನ ಮಂದಿರದ ಅಧ್ಯಕ್ಷ ಚಂದ್ರಕಾಂತ ಶೆಟಕಾರ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಬಸವಣಪ್ಪಾ ನೇಳಗೆ, ಅಶೋಕ ಮಾನಕಾರಿ ಉಪಸ್ಥಿತರಿದ್ದರು.
ಮಕ್ಕಳಾದ ಪ್ರಿಶಾ ಕ್ಯಾಸ, ದಕ್ಷೇಶ ಸಾವಲೆ ಧ್ವಜಾರೋಹಣಗೈದರು. ಬಸವಕಿರಣ, ಅರುಣ ಗುರುಪೂಜೆ ನಡೆಸಿಕೊಟ್ಟರು,
ಜಗದೇವಿ ಸಂಜುಕುಮಾರ ಚಾಂಬಳೆ ಭಕ್ತಿ ದಾಸೋಹಗೈದರು. ನೇಹಾ ವೀರಶೆಟ್ಟಿ ನಿರೂಪಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ವೃದ್ಧನ ಬಂಧನ
ಗಮನ ಸೆಳೆದ ಮಕ್ಕಳ ಮಾತು: ಮಕ್ಕಳು ಅಷ್ಠಾವರಣ, ಪಂಚಾಚಾರ, ಷಟಸ್ಥಲ, ಶರಣ ಚರಿತ್ರೆ ಹಾಗೂ ಅನುಭವ ಮಂಟಪ ಕುರಿತು ಮಾತನಾಡಿ ಸಭಿಕರ ಗಮನ ಸೆಳೆದರು. ಮಕ್ಕಳಿಂದಲೇ ವಚನ ಪಠಣ, ವಚನ ನೃತ್ಯಗಳು ಜರುಗಿದವು. ಪ್ರೊ. ಸಂಗ್ರಾಮ ಎಂಗಳೆ ಅವರ ನಿರ್ದೇಶನದಲ್ಲಿ ಮಕ್ಕಳಿಂದ ಮೂಡಿ ಬಂದ ʼಭೂಮಿತಾಯಿʼ ನಾಟಕ ಗಮನ ಸೆಳೆಯಿತು.