ಬಿಜೆಪಿ ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಆಸ್ತಿಗಳ ಬಗ್ಗೆ ಗೊಂದಲ ಸೃಷ್ಟಿಸಿ ಉಪ ಚುನಾವಣೆಗೆ ಅಸ್ತ್ರವಾಗಿ ಬಳಸಿದ್ದಾರೆ. ಭೂಮಿ ವಕ್ಫ್ ಬೋರ್ಡಿಗೆ ಸೇರಿದ್ದೋ ಅಥವಾ ರೈತರಿಗೆ ಸೇರಿದೆಯೋ ಹಾಗೂ ಖರೀದಿ ಮಾಡಿದ್ದಾರೋ ಎಂಬುದನ್ನು ಜಿಲ್ಲಾಧಿಕಾರಿ, ತಹಶೀಲ್ದಾರ್ ರೈತರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೂ ಅನ್ಯಾಯವಾಗದಂತೆ ಸರಕಾರ ನೋಡಿಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ವಕ್ಫ್ ಮಂಡಳಿ ಸದಸ್ಯರ ಆಯ್ಕೆಗಾಗಿ ಮತಯಾಚನೆ ಮಾಡಲು ಬಂದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡಿನ ಆಸ್ತಿಯನ್ನು ಖರೀದಿಸಿದ್ದೀರಿ ಎಂದು ಬಿಜೆಪಿ ಸರಕಾರದ ಯಡಿಯೂರಪ್ಪ ಮತ್ತು ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾಗಲೂ ರೈತರಿಗೆ ನೋಟಿಸ್ ನೀಡಲಾಗಿದೆ. ಆದರೆ ಇವರ ಅವಧಿಯಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಆದರೆ ಈಗಿನ ಸರಕಾರದ ಮಂತ್ರಿಯ ಅನುಭವದ ಕೊರತೆಯಿಂದ ತಕ್ಷಣ ಎಲ್ಲರಿಗೂ ನೋಟಿಸ್ ಜಾರಿ ಮಾಡಿಸಿದ್ದಾರೆ. ಇದರಿಂದ ರೈತರಲ್ಲಿ ಗೊಂದಲವಾಗಿದೆ ಎಂದರು.
ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಕುಮಾರ ಸ್ವಾಮಿಯವರನ್ನು ‘ಕರಿಯ ಕುಮಾರಸ್ವಾಮಿ’ ಎಂದು ಕೀಳಾಗಿ ಮಾತನಾಡಿದ್ದು ಅಕ್ಷಮ್ಯ. ಈ ಹೇಳಿಕೆಯಿಂದ ಒಕ್ಕಲಿಗರ ಸಮಾಜಕ್ಕೆ ನೋವು ಆಗಿದ್ದರೆ ನಾನು ಕ್ಷೇಮೆ ಕೇಳುತ್ತೇನೆ ಎಂದರು.
ಜಮೀರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕೂಡ ತಪ್ಪು ಎಂದು ಹೇಳಿದ್ದಾರೆ. ದೇವೆಗೌಡ್ರ ಹಾಗೂ ಅವರ ಕುಟುಂಬದ ಬಗ್ಗೆ ನನಗೂ ಮತ್ತು ಮುಸ್ಲಿಂ ಸಮಾಜಕ್ಕೆ ಅಪಾರ ಗೌರವವಿದೆ. ದೇವೇಗೌಡ್ರ ಬಿಜೆಪಿ ಜೊತೆಗೆ ಹೋಗಬಾರದಿತ್ತು. ಪುತ್ರ ವಾತ್ಸಲ್ಯದಿಂದ ಹೋಗಿದ್ದಕ್ಕೆ ನಾನು ಜೆಡಿಎಸ್ನಿಂದ ದೂರವಾದೆ ಎಂದು ಮಾಧ್ಯಮಗಾರರ ಬಳಿ ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿ ಇದೇ ರೀತಿ ಎಲ್ಲಾ ರೈತರ ಭೂಮಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಣೆ ಮಾಡಿದ್ದರೆ ರೈತರು ಕಾಂಗ್ರೆಸಿಗರನ್ನು ಒಡಾಡಿಸಿ ಹೊಡೆಯುತ್ತಾರೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರಕಾರಕ್ಕೆ ತಾಕತ್ತು ದಮ್ಮ ಇದ್ದರೆ ಈಶ್ವರಪ್ಪನ ಮೇಲೆ ಕ್ರಮ ಕೈಗೊಳಬೇಕೆಂದರು.
ಇದನ್ನು ಓದಿದ್ದೀರಾ? ಕಿತ್ತೂರು | ಕಾಂಗ್ರೆಸ್ ಶಾಸಕ ಬಾಬಾ ಸಾಹೇಬ್ ಪಾಟೀಲ್ರಿಗೆ ಬಿಜೆಪಿಯಿಂದ ₹100 ಕೋಟಿ ಆಫರ್?
ಈಶ್ವರಪ್ಪನವರಿಗೆ ಯಾವುದೇ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತಿಲ್ಲ, ಮನಸ್ಸಿಗೆ ಬಂದಾ ಹಾಗೇ ಮಾತನಾಡುತ್ತಾ ತಿರುಗುತ್ತಿದ್ದಾರೆಂದರು. ಕೋವಿಡ್ನಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರವಾಗಿದೆ. ಆದರೆ ಕಾಂಗ್ರೆಸ್ ಈಗ ತನಿಖೆ ಮಾಡಲು ಹೊರಟಿದ್ದಾರೆ. ಮೊದಲೇ ಇದನ್ನು ಮಾಡಬೇಕಾಗಿತ್ತು ಎಂದರು.
