ವಿದ್ಯಾರ್ಥಿಗಳು ಸಾಧಕರಾಗಿ ರೂಪುಗೊಳ್ಳಬೇಕಾದರೆ ಆ ಸಾಧನೆಗೆ ಮಾನಸಿಕ ಸಿದ್ಧತೆ ಅಗತ್ಯವಾಗಿರುತ್ತದೆ ಎಂದು ನ್ಯಾ. ಅರವಿಂದ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಮೈಸೂರು ನಗರದ ಶ್ರೀ ಶಾರದಾ ಪಬ್ಲಿಕ್ ಶಾಲೆಯ ಎಸ್ ರಾಮನಾಥನ್ ಸ್ಮಾರಕ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
‘‘ನಾನು ಗಮನಿಸಿದ ವಿದ್ಯಾರ್ಥಿಯೊಬ್ಬನಿಗೆ ಚಿಕ್ಕವಯಸ್ಸಿನಲ್ಲಿಯೇ ತಾಯಿ ತೀರಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಆತ ತನಗೆ ಬೋಧನೆ ಮಾಡುವ ಶಿಕ್ಷಕಿಯನ್ನೇ ತಾಯಿಯೆಂದು ಭಾವಿಸಿ ವಿದ್ಯಾರ್ಜನೆ ಮಾಡುತ್ತಾನೆ. ಶಿಕ್ಷಕಿಯ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಪಾಲನೆ ಮಾಡಿದ ವಿದ್ಯಾರ್ಥಿ ದೊಡ್ಡ ಸಾಧನೆ ಮಾಡುತ್ತಾನೆ. ಅಲ್ಲದೇ ತನ್ನ ವಿವಾಹಕ್ಕೆ ತನಗೆ ಅಕ್ಷರ ಕಲಿಸಿದ ಗುರುವನ್ನು ವಿಮಾನದಲ್ಲಿ ಕರೆಸಿಕೊಳ್ಳುತ್ತಾನೆ. ತನ್ಮೂಲಕ ಗುರುಗಳಿಗೆ ಅಗ್ರ ಸ್ಥಾನವನ್ನು ನೀಡಿ ಆರಾಧಿಸುತ್ತಾನೆ. ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರ ಬಗ್ಗೆ ಅತೀವವಾದ ಗೌರವ ಇಟ್ಟುಕೊಳ್ಳಬೇಕು. ಅಲ್ಲದೇ ಅವರು ಹೇಳಿದ್ದನ್ನುಪರಿಪಾಲಿಸುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ” ಎಂದು ಹೇಳಿದರು.
“ಶಾರದಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ವಿಶೇಷವಾಗಿ ನಮ್ಮ ಹಿಂದೂ ಸಂಪ್ರದಾಯದಂತೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ತನ್ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದಲ್ಲದೇ, ನಮ್ಮಆಚಾರ-ವಿಚಾರ, ಸಂಸ್ಕಾರವನ್ನು ಉಳಿಸಿಕೊಂಡು ಮುಂದುವರೆಸಲು ಕೊಡುಗೆ ನೀಡುತ್ತಿದ್ದಾರೆ. ಈ ಪರಿಪಾಠ ಎಲ್ಲ ಕಡೆ ಅನುಸರಣೆಯಾಗಬೇಕು. ಎಳೆಯ ವಯಸ್ಸಿನ ಮಕ್ಕಳಲ್ಲಿ ಬದ್ದತೆ ತುಂಬುವುದು ಸವಾಲಿನ ಕೆಲಸ. ಅದು ನೈಜ ಶಿಕ್ಷಕನಿಂದ ಮಾತ್ರ ಸಾಧ್ಯ” ಎಂದರು.
ಶಾಲಾ ಕಾರ್ಯದರ್ಶಿ ಮಂಜುನಾಥ್ ರಾಮನಾಥನ್ ಮಾತನಾಡಿ, “ಶಾಲೆಯ ಮೂಲಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯಾಧುನಿಕ ಕಲಿಕಾ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಎಸ್ ರಾಮನಾಥನ್ ಸ್ಮಾರಕ ವಿಭಾಗ ನಿರ್ಮಿಸಲಾಗಿದೆ. ಇದರಿಂದ ಶಿಶುವಿಹಾರದ ಮಕ್ಕಳು, ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದೀರಾ? ಮೈಸೂರು | ಕೊಳೆತು ನಾರುತ್ತಿದೆ ಲಕ್ಷ್ಮಣತೀರ್ಥ ನದಿ
“ತಂದೆ ರಾಮನಾಥನ್ ಅವರು 15 ಮಕ್ಕಳಿಂದ ಆರಂಭಿಸಿದ ಈ ಶಾಲೆಯು ಇಂದು 800 ಮಂದಿ ವಿದ್ಯಾರ್ಥಿಗಳು ಅಧ್ಯಯನ ಮಾಡುವಷ್ಟು ಹೆಮ್ಮರವಾಗಿ ಬೆಳೆದಿದೆ. ಅವರು ಹೇಳಿಕೊಟ್ಟ ಮಾರ್ಗದಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ” ಎಂದು ಟ್ರಸ್ಟಿ ಶ್ರೀವತ್ಸ ರಾಮನಾಥನ್ ಸ್ಮರಿಸಿದರು.
ಸಂಸ್ಥೆಯ ಖಜಾಂಚಿ ಕುಸುಮಾ ರಾಮನಾಥನ್, ಆಡಳಿತಾಧಿಕಾರಿ ಗುರುರಾಜ್, ಪ್ರಾಂಶುಪಾಲೆ ಶಾಲಿನಿ ಅಶೋಕ್, ವಿದ್ಯಾರ್ಥಿಗಳು ಹಸೇರಿದಂತೆ ಇತರರು ಇದ್ದರು.