ಸಿರಿಧಾನ್ಯ ಬಳಕೆಯಿಂದ ಧೀರ್ಘಕಾಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಿಕ್ಕಬಳ್ಳಾಪುರ ಭಾಗದಲ್ಲಿಯೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ರೈತರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ “ಸಿರಿಧಾನ್ಯಗಳ ಪಾಕ ಸ್ಪರ್ಧೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿರಿಧಾನ್ಯಗಳಲ್ಲಿ ಅಗ್ರಸ್ಥಾನದ ಬಳಕೆಯಲ್ಲಿರುವ ರಾಗಿಯ ಧಾನ್ಯಗಳ ಬಳಕೆಯು ಮಧುಮೇಹ ಕಾಯಿಲೆ ಗುಣಪಡಿಸಲು ತುಂಬ ಸಹಕಾರಿಯಾಗಿದೆ. ಆದ್ದರಿಂದ ಮಧುಮೇಹಿಗಳು ಸಿರಿಧಾನ್ಯಗಳ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದ್ದರಿಂದಲೇ ‘ರಾಗಿ ತಿಂದವನು ನಿರೋಗಿ’ ಎಂಬ ಮಾತು ಹೆಚ್ಚು ಜನಜನಿತವಾಗಿದೆ. ಸಿರಿಧಾನ್ಯಗಳಿಂದ ತಯಾರಾಗುವ ಪಾಯಸ, ಲಡ್ಡು, ರಾಗಿ ಮುದ್ದೆ, ಚಕ್ಕುಲಿ, ಶಾವಿಗೆ ಇನ್ನಿತರ ಖಾದ್ಯಗಳನ್ನು ಎಲ್ಲರು ಬಳಸುವ ಮೂಲಕ ಸ್ವಾಸ್ಥ್ಯ ಆರೋಗ್ಯಕರ ಸಮಾಜ ಸೃಷ್ಠಿಸಬೇಕು. ಆ ನಿಟ್ಟಿನಲ್ಲಿ ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳ ಪಾಕ ಸ್ಪರ್ಧೆಯನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಬಾಲಕಿ ಅತ್ಯಾಚಾರ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಮಾತನಾಡಿ, ನಮ್ಮ ಪೂರ್ವಜರು ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿದ್ದರಿಂದ ಅವರು ದಷ್ಟಪುಷ್ಠರಾಗಿ ದೃಢಕಾಯರಾಗಿದ್ದರು. ಉತ್ತಮ ಆರೋಗ್ಯವನ್ನು ಹೊಂದಿದ್ದರು. ಆದರೆ ಕಾಲಾನಂತರದಲ್ಲಿ ಸಿರಿಧಾನ್ಯಗಳ ಬಳಕೆಯ ಆಹಾರದ ಕ್ರಮದಲ್ಲಿ ಕಡಿಮೆಯಾಯಿತು. ಒತ್ತಡದ ಆಧುನಿಕ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳಿಂದ ತುತ್ತಾಗುತ್ತಿರುವ ಈ ಕಾಲಘಟ್ಟದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಮುಖಾಂತರ ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಮನವಿ ಮಾಡಿದರು.
ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಮಾತನಾಡಿ, ಸಿರಿಧಾನ್ಯಗಳ ಕೃಷಿ ಪದ್ದತಿಯು ಅತಿ ಪ್ರಾಚೀನ ಪದ್ಧತಿಯಾಗಿದೆ. ಎಷ್ಟೋ ಸಿರಿಧಾನ್ಯಗಳ ಬಳಕೆಯು ಕಡಿಮೆಯಾಗಿದ್ದು, ಅಳಿವಿನಂಚಿಗೆ ಸಾಗುವಂತಾಗಿದೆ. ಸಿರಿಧಾನ್ಯಗಳಲ್ಲಿ ವಿಟಮಿನ್, ಪ್ರೋಟೀನುಗಳು ಹಾಗೂ ಇತರ ಪೋಷಕಾಂಶಗಳಿವೆ. ಈ ಬೆಳೆಗಳು ಪರಿಸರ ಸ್ನೇಹಿಯಾಗಿದ್ದು ಕಡಿಮೆ ಮಳೆ ಬರುವ ಹಾಗೂ ಕಡಿಮೆ ಫಲವತ್ತತೆಯುಳ್ಳ ಪ್ರದೇಶಗಳಲ್ಲಿ ಬೆಳೆಯಬಹುದು. ಇದನ್ನು ಅರಿತು ಸರ್ಕಾರ 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷವಾಗಿ ಆಚರಿಸಿತು. ಈ ಸಿರಿ ಧಾನ್ಯಗಳ ಬಳಕೆಯ ಮಹತ್ವವನ್ನು ಎಲ್ಲರೂ ಅರಿತು ತಮ್ಮ ಆಹಾರ ಕ್ರಮದಲ್ಲಿ ಸಿರಿಧಾನ್ಯಗಳ ಖ್ಯಾದಗಳನ್ನು ಬಳಸುವಂತೆ ಮನವಿ ಮಾಡಿದರು.
ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಒಟ್ಟು 60 ಜನರು ಭಾಗವಹಿಸಿ, ವಿವಿಧ ಬಗೆಯ ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ಖಾದ್ಯಗಳು ಹಾಗೂ ಮರೆತುಹೋದ ವಿವಿಧ ಖಾದ್ಯಗಳಾದ ರಾಗಿ ಪೇಡ, ರಾಗಿ ಬಿಸ್ಕತ್, ನವಣಕ್ಕಿ ಉಪ್ಪಿಟ್ಟು, ಸಜ್ಜೆ ಕಡಬು, ನವಣೆ ಪೇಡಾ, ಸಾಮೆ ಕಿಚಡಿ, ಉದಲೂ ಪಾಯಸ, ಸಜ್ಜೆ ಲಾಡು, ನವಣಕ್ಕಿ ಪಲಾವ್, ಚಿನ್ನಕುರುಳಿ, ಮಾಲ್ವಿ, ಒತ್ತುಶಾವಿಗೆ, ರಾಗಿ ಹಲ್ವ, ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ಒತ್ತುಶಾವಿಗೆ ಕಾಯಿರಸ, ಸಜ್ಜೆರೊಟ್ಟಿ, ಕುಂಬಳಕಾಯಿ ಕಡಬು, ರಾಗಿ ಕಿಲ್ಸ್, ಸಿಹಿ ಪೊಂಗಲ್, ಸಿರಿಧಾನ್ಯ ಹಲ್ವ, ರಾಗಿ ದೋಸೆ, ನವಣಕ್ಕಿ ತಂಬಿಟ್ಟು, ರಾಗಿ ಬೆಲ್ಲದ ಬರ್ಫಿ, ಸಾಮೆ ಬಿಸಿ ಬೇಳೆಬಾತ್, ನವಣಕ್ಕಿ ಚಕ್ಕುಲಿ, ಸಾಮೆಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್, ಬರಗು, ಅರ್ಕ, ಸಾವಯವ ಬೆಲ್ಲದಿಂದ ತಯಾರಿಸಿದ ಕೇಕ್ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳನ್ನು ಪ್ರದರ್ಶಿಸಿ ಜನರ ಗಮನ ಸೆಳೆದರು.
ಈ ವೇಳೆ ಪ್ರಧಾನ ಮಂತ್ರಿ ಬಿಮಾ ಯೋಜನೆಯ ಕರಪತ್ರಗಳು ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರ ಪಡೆಯಲು ಪ್ರಸ್ತುತ ಲಭ್ಯವಿರುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ವಿಮೆ ಮಾಡಿಸುವಂತೆ ಜಿಲ್ಲಾಧಿಕಾರಿಗಳು ರೈತರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ಚಿಕ್ಕಬಳ್ಳಾಪುರ ಕೃಷಿ ಉಪನಿರ್ದೇಶಕಿ ದೀಪಶ್ರೀ, ಚಿಂತಾಮಣಿ ಕೃಷಿ ಉಪನಿರ್ದೇಶಕಿ ಎಂ.ಎನ್ ಮಂಜುಳ, ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಸೌಮ್ಯ, ಚುನಾವಣಾ ಶಾಖೆಯ ತಹಸಿಲ್ದಾರ್ ಶ್ವೇತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕೃಷಿ ಇಲಾಖೆಯ ಸಿಬ್ಬಂದಿ, ರೈತ ವರ್ಗದ ಮಹಿಳೆಯರು ಮತ್ತಿತ್ತರು ಉಪಸ್ಥಿತರಿದ್ದರು.