ಅರಣ್ಯ ಇಲಾಖೆ ಸತತ ಒಂದು ವಾರದಿಂದ ನಡೆಸಿದ ಕಾರ್ಯಚರಣೆಯಿಂದ ಕರಿಯಮ್ಮ ಅವರನ್ನು ಕೊಂದಿದ್ದ ಚಿರತೆ ಸೆರೆ ಸಿಕ್ಕಿದೆ. ಚಿರತೆ ಸೆರೆಗಾಗಿ ತುಮಕೂರು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಬೋನನ್ನು ಗಮನಿಸಿದಾಗ ಚಿರತೆ ಸೆರೆಯಾಗಿರುವುದು ಗೊತ್ತಾಗಿದೆ. ನ.18ರಂದು ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಡದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಟ್ಟಿಯ ಕರಿಯಮ್ಮ ಅವರನ್ನು ಸಂಜೆ 5ರ ಸಮಯದಲ್ಲಿ ಚಿರತೆ ಕೊಂದು ಎಳೆದುಕೊಂಡು ಹೋಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಇದರಿಂದ ಗ್ರಾಮದ ಜನರು ಭಯಗೊಂಡಿದ್ದರು. ಚಿರತೆ ಹಿಡಿಯಲು ಅರಣ್ಯ ಇಲಾಖೆಯು ಒಂಬತ್ತು ಬೋನುಗಳನ್ನು ಇಟ್ಟಿತ್ತು. ನ. 24ರ ಸಂಜೆ 5 ಗಂಟೆ ವೇಳೆ ಕರಿಯಮ್ಮನನ್ನು ಕೊಂದ ಸ್ಥಳದ 100 ಮೀಟರ್ ದೂರದಲ್ಲಿ ಚಿರತೆ ಬಂಡೆ ಮೇಲೆ ಕಾಣಿಸಿಕೊಂಡಿತ್ತು. ಇದು ಜನರನ್ನು ಇನ್ನಷ್ಟು ಭಯಕ್ಕೆ ದೂಡಿತ್ತು.
ಸೆರೆ ಸಿಕ್ಕಿರುವ ಚಿರತೆಯು ಸುಮಾರು ಮೂರು ವರ್ಷದ್ದಾಗಿದೆ. ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯ 40-50 ಸಿಬ್ಬಂದಿ ಒಂದು ವಾರದಿಂದ ಚಿರತೆ ಸೆರೆ ಹಿಡಿಯಲು ಕಾರ್ಯಚರಣೆ ನಡೆಸಿದ್ದರು. ಶಿವಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಇನ್ನೂ ಚಿರತೆಗಳಿವೆ ಇರುವ ಆತಂಕ ಜನರದ್ದಾಗಿದೆ. ಈಗ ಸೆರೆ ಸಿಕ್ಕಿರುವ ಚಿರತೆ ಕರಿಯಮ್ಮ ಅವರನ್ನು ಕೊಂದ ಚಿರತೆಯೇ ಅಥವಾ ಬೇರೆಯದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.
