ಇತ್ತೀಚೆಗೆ ಉಡುಪಿ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ಸ್ವಾಮೀಜಿ ಯವರು ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು ಎಂದಿದ್ದಾರೆ. ನಮ್ಮನ್ನು ಎಂದರೆ ಯಾರನ್ನು ವೈದಿಕರನ್ನೋ, ಬ್ರಾಹ್ಮಣ್ಯಾ ಕಾಪಾಡುವವರನ್ನೋ, ಇಲ್ಲ ಪಂಕ್ತಿ ಬೇದ ಮಾಡುವವರನ್ನೋ ವಿವರವಾಗಿ ಹೇಳಿ ಸ್ವಾಮಿಗಳೇ. ಈ ದೇಶದಲ್ಲಿ ಕೇವಲ 3 ಶೇಕಡ ಇರುವವರು ಸಂವಿಧಾನ ದತ್ತವಾಗಿ 10 ಶೇಕಡ ಮೀಸಲಾತಿ ಪಡೆದಕೊಂಡಾಗ ನಿಮಗೆ ನಾಚಿಕೆಯಾಗಲಿಲ್ಲವೇ ಸ್ವಾಮಿಗಳೇ, ಆಗ ಏಕೆ ಇದನ್ನು ವಿರೋಧಿಸಲಿಲ್ಲ ಆಗ ಸಂವಿಧಾನ ದಿಂದ ನಿಮ್ಮ ಗೌರವ ಹೆಚ್ಚಾಗಿತ್ತೇ ಮಠಾದೀಶರೇ, ಎಲ್ಲಕ್ಕಿಂತಲೂ ಮಿಗಿಲಾಗಿ ತಾವು ಧರ್ಮ ಪ್ರಚಾರಕ ಮಠಾಧೀಶರೋ ಇಲ್ಲಾ ಚುನಾವಣಾ ಸೀಟಿಗೋಸ್ಕರ ಸದಾ ಪ್ರಚಾರ ಬಯಸುವ ಒಬ್ಬ ರಾಜಕಾರಣಿಯೋ ದಯವಿಟ್ಟು ಹೇಳಿ ಸ್ವಾಮೀಜಿಯವರೇ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮಾಧ್ಯಮದ ಮೂಲಕ ಪೇಜಾವರ ಶ್ರೀ ಯವರಿಗೆ ಪ್ರಶ್ನಿಸಿದ್ದಾರೆ.
ಭಾರತದ ಸಂವಿಧಾನ ಪ್ರಪಂಚದಲ್ಲೇ ಸರ್ವಶ್ರೇಷ್ಠ ಸಂವಿಧಾನ ಎಂದು ಮನ್ನಣೆ ಪಡೆದಿದೆ. ಇಲ್ಲಿನ ಸಂವಿಧಾನದಲ್ಲಿ ಸಮಾನತೆ, ಸಹೋದರತೆ, ಭ್ರಾತ್ರತ್ವ, ಸ್ವಾತಂತ್ರ್ಯ ಎಲ್ಲವೂ ಅಡಗಿದೆ.
ಈ ದೇಶದ ಮೂಲನಿವಾಸಿಗಳು ಬಹುಸಂಖ್ಯಾತರು ಈ ಸಂವಿಧಾನದ ಅಡಿಯಲ್ಲಿ ನೆಮ್ಮದಿಯಿಂದ ಇದ್ದು ಈ ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ. ಆರ್ಯರು ಈ ದೇಶಕ್ಕೆ ಹೊರಗಿನಿಂದ ಬಂದವರು. ಯಾರಿಗೆ ಈ ಸ್ವತಂತ್ರ ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲವೋ, ಯಾರು ನಮ್ಮ ಸಂವಿಧಾನವನ್ನು ಗೌರವಿಸುವುದಿಲ್ಲವೋ ಅಂತಹವರು ಗೌರವ ಅರಸಿಕೊಂಡು ಪಾಕಿಸ್ತಾನಕ್ಕೆ ಹೋಗಲೀ. ಈ ದೇಶದ ಬಹುಸಂಖ್ಯಾತರಾದ ನಾವಂತೂ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಗಲು ಬಿಡುವುದಿಲ್ಲ. ಜಾತಿ ಪಧ್ಧತಿ, ಅಸ್ಪೃಶ್ಯತೆ, ಮೇಲು ಕೀಳೆಂಬ ಆಚರಣೆಯಲ್ಲಿ ನಂಬಿಕೆ ಇಟ್ಟವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ತಮ್ಮ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
