ತಮಗೆ ಮಾತ್ರ ಗೌರವ ದೊರಕಿಸುವ ಸಂವಿಧಾನ ಜಾರಿಗೆ ಬರಬೇಕು ಎಂದು ಪೇಜಾವರ ಸ್ವಾಮಿಗಳು ಆಶಿಸುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿದಾರ್ಥ ಸಿಂಗೆ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ನಡೆದ 72ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಸ್ಮೃತಿಯೇ ವೈದಿಕರ ಸಂವಿಧಾನವಾಗಿ ಜಾರಿಯಲ್ಲಿದ್ದ ಕಾಲದಲ್ಲಿ ಶೂದ್ರಾತಿ ಶೂದ್ರರು ಸಮಾಜದ ಮುಖ್ಯ ವಾಹಿನಿಯಿಂದ ದೂರವಾಗಿದ್ದರು. ಮತ್ತು ಪುರೋಹಿತಶಾಹಿ ವರ್ಗದ ಅಟ್ಟಹಾಸ ಮೆರೆದಿತ್ತು. ಆದರೆ ಅಂಬೇಡ್ಕರ್ ಭಾರತದ ಸಂವಿಧಾನದ ಮೂಲಕ ಈ ದೇಶದ ಕಟ್ಟಕಡೆಯ ಜನರನ್ನೂ ಮನುಷ್ಯರಂತೆ ಕಂಡು ಎಲ್ಲರಿಗೂ ವಿದ್ಯೆ, ಆಸ್ತಿ, ಅಧಿಕಾರ ಹೊಂದುವ ಅವಕಾಶವನ್ನು ನೀಡಲು ಅನುವು ಮಾಡಿಕೊಟ್ಟರು. ಅದನ್ನು ಸಹಿಸಲಾಗದ ಪೇಜಾವರ ಸ್ವಾಮೀಜಿ ತಮಗೆ ಗೌರವ ದೊರಕಿಸುವ ಸಂವಿಧಾನ ಜಾರಿಯಾಗಲಿ ಎಂದು ಹೆಳುವ ಮೂಲಕ ಮನುಸ್ಮೃತಿಯನ್ನು ಎತ್ತಿಹಿಡಿದು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಳ ಸಮುದಾಯಕ್ಕೆ ಸೇರಿದವರು ಮಂತ್ರಿ, ಮುಖ್ಯಮಂತ್ರಿ ಅಲ್ಲದೇ ರಾಷ್ಟ್ರಪತಿಗಳೂ ಆದರು. ಇದು ಪೇಜಾವರ ಸ್ವಾಮಿಗಳಿಗೆ ಅಸಹನೀಯವಾಗಿದೆ ತಮಗೆ ಮಾತ್ರ ಸಮಾಜದಲ್ಲಿ ಸಿಗುತ್ತಿದ್ದ ಗೌರವ ಮಾನ ಸನ್ಮಾನಗಳು ಮನುಷ್ಯರಾದ ಎಲ್ಲರಿಗೂ ಸಿಗುತ್ತಿರುವದು ಅವರಿಗೆ ಸಹಿಸಲು ಆಗುತ್ತಿಲ್ಲ. ಆ ಕಾರಣದಿಂದ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಗಬೇಕೆಂದು ಬಯಸುತ್ತಿದ್ದಾರೆ. ಎಲ್ಲರೂ ಅವರ ನಡೆಯನ್ನು ಖಂಡಿಸಲೆಬೇಕು ಎಂದರು.
ಪರಶುರಾಮ ಟೊಣಪೆ ಮಾತನಾಡಿ, ನೂತನವಾಗಿ ರಚನೆಗೊಂಡಿರುವ ಚಿಕ್ಕೋಡಿ ಜಿಲ್ಲೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಿಲ್ಲೆ ಎಂದು ನಾಮಕರಣ ಮಾಡಿ ಜಿಲ್ಲೆಯನ್ನು ಘೋಷಿಸಬೇಕು. ಇಲ್ಲವಾದಲ್ಲಿ ಭೀಮವಾದ ಡಿಎಸ್ಎಸ್ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುಲಾಗುತ್ತದೆ ಎಂದು ಎಚ್ಚರಿಸಿದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತ, ಕಾರ್ಮಿಕರ ಎಚ್ಚರಿಕೆ ಜಾಥಾ
ಈ ಸಂದರ್ಭದಲ್ಲಿ ಚಿದಾನಂದ ತಳಕೇರಿ, ಕೆಂಪಣ್ಣ ಶಿರಹಟ್ಟಿ, ಸಂಗೀತಾ ಕಾಂಬಳೆ, ರೇಖಾ ಬಂಗಾರಿ, ಪ್ರಕಾಶ ಕಾಂಬಳೆ, ಸುಖದೇವ್ ತಳವಾರ್, ಗಣಪತಿ ಮೈಶಾಳೆ, ಮಹಾದೇವ ಕಾಂಬಳೆ, ನಿಕಿತಾ ಗಡಾದೆ, ಕಾಮಣ್ಣ ಕಾಂಬಳೆ, ಸಂತೋಷ್ ಕಾಂಬಳೆ, ರಾಕೇಶ್ ನಸಲಾಪುರ, ಸಿದ್ದಪ್ಪ ರಾಜಂಗಳೆ, ಪ್ರವೀಣ ಕಾಂಬಳೆ, ಗೀತಾ ಕಾಂಬಳೆ, ವಾಸು ದೊಡ್ಡಮನಿ, ಸಚಿನ ಕಾಂಬಳೆ ಹಾಗೂ ಸಂಘಟನಾ ಸದಸ್ಯರು ಉಪಸ್ಥಿತರಿದ್ದರು.