ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ಸರ್ಕಾರ ಆರಂಭಿಸಿರುವ ಪೈಪ್ ಲೈನ್ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ಈಗಾಗಲೇ ಪ್ರತಿಭಟನೆ ನಡೆಸಿ ಸ್ಥಗಿತಗೊಂಡಿದ್ದ ಕಾಮಗಾರಿ ಪುನರ್ ಆರಂಭ ಮಾಡಿರುವ ಕಾರಣ ಈ ಕಾಮಗಾರಿ ವಿರೋಧಿ ಜಿಲ್ಲಾ ಸಮಿತಿ ಬೃಹತ್ ಪಾದಯಾತ್ರೆಯನ್ನು ಡಿಸೆಂಬರ್ 7 ಮತ್ತು 8 ರಂದು ಸಾವಿರಾರು ರೈತರ ಜೊತೆ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಹೆಜ್ಜೆ ಹಾಕಲು ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಯಿತು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸಲಹೆ ಸೂಚನೆ ನೀಡಿ ಚರ್ಚಿಸಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಜಿಲ್ಲೆಯ ರೈತರನ್ನು ಕಾಪಾಡಿದ ಹೇಮಾವತಿ ಕುಡಿಯುವ ನೀರು ಒದಗಿಸಿ ಜೀವ ಜಲವಾಗಿದೆ. ಮಳೆಗಾಲದ ಹಿನ್ನಲೆ ನೀರಿನ ಅಭಾವ ಕಂಡು ಬಂದಿಲ್ಲ. ರೈತರಲ್ಲಿ ಇನ್ನೂ ಹೋರಾಟದ ಕಿಚ್ಚು ಬಂದಿಲ್ಲ. ಈ ಕಾಮಗಾರಿ ನಡೆದಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಮರಣ ಶಾಸನ ಶತಸಿದ್ಧ. ಈಗಲಾದರೂ ರೈತರು ಎಚ್ಚೆತ್ತು ಹೋರಾಟಕ್ಕೆ ಬೆಂಬಲ ನೀಡಬೇಕು. ಚುನಾವಣೆ ಬಂದಾಗ ರಾಜಕಾರಣ ಮೈಗೂಡಿಸಿಕೊಂಡು ತಮ್ಮ ನಾಯಕನಿಗೆ ಗೆಲುವಿಗೆ ಹೇಗೆ ಹೋರಾಟ ಮಾಡುತ್ತೀರಿ ಅದೇ ಮಾದರಿಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ರೈತರ ಕೊಳವೆಬಾವಿ ಈಗಾಗಲೇ ಕೈ ಕೊಡುತ್ತಿವೆ. ಇರುವ ಹೇಮಾವತಿ ನೀರು ನಿಂತಲ್ಲಿ ಗುಳೆ ಹೋಗುವುದು ಅನಿವಾರ್ಯ ಆಗುತ್ತದೆ. ಅತೀ ಹೆಚ್ಚು ಹೇಮಾವತಿ ನೀರಿನ ಕೊರತೆ ನಮ್ಮ ಗುಬ್ಬಿ ತಾಲ್ಲೂಕಿನ ರೈತರು ಸಾವಿರಾರು ಸಂಖ್ಯೆಯಲ್ಲಿ ಬರಬೇಕಿದೆ. ನಮ್ಮ ಶಾಸಕರು ಈ ಬಗ್ಗೆ ಡಿವೈಎಸ್ಪಿ ಅವರಿಗೆ ಹೇಳಿದ್ದೀನಿ ಅಂತಾರೆ. ಆದರೆ ನಡೆಯುವ ಕೆಲಸಕ್ಕೆ ರಕ್ಷಣೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು ಪಾದಯಾತ್ರೆ ಡಿಸೆಂಬರ್ 7 ರಂದು ಸಾಗರನಹಳ್ಳಿ ಗೇಟ್ ಬಳಿಯಿಂದ ಆರಂಭಿಸಿ ಡಿಸೆಂಬರ್ 8 ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಹೋರಾಟ ನಡೆಯಲಿದೆ. ಡಿಸೆಂಬರ್ 7 ರ ಸಂಜೆ ಗುಬ್ಬಿ ಪಟ್ಟಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಾಗುವುದು. ರಾತ್ರಿ ಕಳ್ಳಿಪಾಳ್ಯ ಬಳಿಯ ಓಂ ಪ್ಯಾಲೇಸ್ ನಲ್ಲಿ ವಾಸ್ತವ್ಯ ಹೂಡಿ ನಂತರ 8 ರಂದು ಸಂಜೆ ವೇಳೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿ ದೊಡ್ಡ ಹೋರಾಟ ನಡೆಯಲಿದೆ ಎಂದು ವಿವರಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ತಾಲ್ಲೂಕಿನ ರೈತರಲ್ಲಿ ಜಾಗೃತಿ ಮೂಡಿಸಿ ಪ್ರತಿ ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ರೈತರನ್ನು ಹೋರಾಟಕ್ಕೆ ಬರಮಾಡಬೇಕು. ಪಕ್ಷಾತೀತ ನಿಲುವು ತಾಳಿ ಕೇವಲ ನಮ್ಮ ನೀರು ಹಕ್ಕು ಎಂದು ಪ್ರತಿಪಾದಿಸಿ ಬೃಹತ್ ಹೋರಾಟ ಸರ್ಕಾರದ ಗಮನಕ್ಕೆ ಹೋಗಬೇಕು. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ರೈತರ ಪಾದಯಾತ್ರೆ ಬಗ್ಗೆ ಚರ್ಚೆ ನಡೆಯುವಂತೆ ಹೋರಾಟ ಮಾಡೋಣ ಎಂದು ಕರೆ ನೀಡಿದ ಅವರು ಎರಡು ದಿನದ ಪಾದಯಾತ್ರೆ ನಂತರ ಪ್ರತಿ ದಿನ ಒಂದೊಂದು ತಾಲ್ಲೂಕು ರೈತರು ಪ್ರತಿಭಟನೆ ನಡೆಸಿ ನಿರಂತರ ಹೋರಾಟದ ಕಾವು ಮುಟ್ಟಿಸಬೇಕಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ರೈತರನ್ನು ಬಲಿ ಕೊಡುವ ಈ ಕೆನಾಲ್ ಕಾಮಗಾರಿ ಅವೈಜ್ಞಾನಿಕ ಎಂಬುದು ಈಗಾಗಲೇ ಚರ್ಚಾ ವಿಷಯ. ಸರ್ಕಾರದ ಓರ್ವ ಪ್ರಭಾವಿ ಸಚಿವರ ವಿರುದ್ಧ ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರು ದನಿ ಮಾಡುತ್ತಿಲ್ಲ. ಪೊಲೀಸ್ ಕೇಸು ಎಂಬುದು ಬದಿಗೊತ್ತಿ ಹೋರಾಟಕ್ಕೆ ದಿಟ್ಟ ನಿಲುವು ತಾಳಬೇಕು. ರೈತ ಸಂಘ ರೈತರ ಕಷ್ಟಕ್ಕೆ ಎಂದಿಗೂ ಸ್ಪಂದಿಸುತ್ತದೆ. ಈ ಹೋರಾಟದಲ್ಲಿ ಸಂಘದ ಸದಸ್ಯರು ಮುಂಚೂಣಿಯಲ್ಲಿ ಇರುತ್ತಾರೆ. ಆದರೆ ಇನ್ನೂ ಮುಂದಿನ ನೋವಿನ ಅರಿಯಿಲ್ಲದ ರೈತರು ಈ ಕೂಡಲೇ ಎಚ್ಚೆತ್ತು ಹೋರಾಟ ನಡೆಸಬೇಕು ಎಂದರು.
ಈ ಸಭೆಯಲ್ಲಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಭೈರಪ್ಪ, ಯೋಗಾನಂದಕುಮಾರ್, ಪಿ.ಬಿ.ಚಂದ್ರಶೇಖರ್, ಸಾಗರನಹಳ್ಳಿ ವಿಜಯ್ ಕುಮಾರ್, ಬಿ.ಎಸ್.ಪಂಚಾಕ್ಷರಿ, ಚಿಕ್ಕವೀರಯ್ಯ ಅಣ್ಣಪ್ಪಸ್ವಾಮಿ, ಗಂಗಣ್ಣ, ಹಿತೇಶ್, ವಕೀಲ ಸದಾಶಿವಯ್ಯ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪರಮಶಿವಯ್ಯ, ವರ್ತಕರ ಸಂಘದ ದಯಾನಂದ್, ರೈತ ಸಂಘದ ಸಿ ಜಿ.ಲೋಕೇಶ್ ಇತರರು ಇದ್ದರು.
