ಬಡವರು ತಮ್ಮ ಮಕ್ಕಳ ಮದುವೆಗೆ ಸಾಲ ಮಾಡುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಕಳೆದ 22ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ನನ್ನ ಜೀವ ಇರುವವರೆಗೂ ಕ್ಷೇತ್ರದಲ್ಲಿ ಸಮಾಜ ಸೇವೆ ಮತ್ತು ಉಚಿತ ಸಾಮೂಹಿಕ ವಿವಾಹಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹ ಕಚೇರಿಯ ಆವರಣದಲ್ಲಿ ಡಿಸೆಂಬರ್ 6ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ಹಾಗೂ ಅವರ ಪೋಷಕರಿಗೆ ನೂತನ ವಸ್ತ್ರ ಮತ್ತು ಸೀಮೆ ಹಸುಗಳನ್ನು ಖರೀದಿಸಲು ಮುಂಗಡ ನಗದು ಹಣ ವಿತರಿಸಿ ಮಾತನಾಡಿದರು.
“ಬಾಗೇಪಲ್ಲಿ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಸತತ ಬರಗಾಲದ ಹಿನ್ನಲೆಯಲ್ಲಿ ಈ ಭಾಗದ ಬಡಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಅನಿವಾರ್ಯವಾಗಿ ಸಾಲಮಾಡಿ ತಮ್ಮ ಮಕ್ಕಳ ಮದುವೆಗಳನ್ನು ಮಾಡುವಂತಹ ದುಃಸ್ಥಿತಿಯಲ್ಲಿದ್ದಾರೆ. ಕ್ಷೇತ್ರದ ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ಕಳೆದ 22ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. 23ನೇ ವರ್ಷದಲ್ಲಿಯೂ ಕೂಡಾ ಉಚಿತ ಸಾಮೂಹಿಕ ವಿವಾಹಗಳಲ್ಲಿ ನೂತನ ದಂಪತಿಗಳ ಜೀವನ ನಿರ್ವಹಣೆಗಾಗಿ ಉಚಿತವಾಗಿ ಸೀಮೆ ಹಸುವನ್ನು ಕೊಡುಗೆಯಾಗಿ ನೀಡಲಾಗುವುದು. ಈ ಸೌಲಭ್ಯವನ್ನು ನೂತನ ದಂಪತಿಗಳು ಸದುಪಯೋಗಪಡಿಸಿಕೊಳ್ಳಿ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಗಳ ಗುತ್ತಿಗೆ ಪದ್ಧತಿಯಿಂದ ಕಾರ್ಮಿಕರನ್ನು ಒಕ್ಕಲೆಬ್ಬಿಸುತ್ತಿದ್ದಾರೆ: ಸೈಯದ್ ಮುಜೀಬ್
“ಕಳೆದ 22 ವರ್ಷಗಳ ಉಚಿತ ಸಾಮೂಹಿಕ ವಿವಾಹಗಳಲ್ಲಿ ಸುಮಾರು 8 ಸಾವಿರ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 4 ಸಾವಿರ ಸೀಮೆ ಹಸುಗಳನ್ನು ದಂಪತಿಗಳಿಗೆ ಉಚಿತ ಕೊಡುಗೆಯಾಗಿ ನೀಡಲಾಗಿದೆ. ಉಚಿತ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹ ಅಥವಾ ಕಾನೂನುಬಾಹಿರ ಮದುವೆಗಳಿಗೆ ಅವಕಾಶವಿಲ್ಲ. ಸರ್ಕಾರದ ನಿಯಮಗಳಂತೆಯೇ ನಡೆಸಲಾಗುತ್ತದೆ. ತಪ್ಪು ಮಾಹಿತಿ ನೀಡಿ ಬಾಲ್ಯವಿವಾಹ ಅಥವಾ ಕಾನೂನುಬಾಹಿರ ವಿವಾಹಮಾಡಿಕೊಳ್ಳಲು ಪ್ರಯತ್ನಿಸಿದರೆ ಅಂತಹವರನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಹೊರಗೆ ಕಳುಹಿಸುತ್ತಾರೆ. ಈ ವರ್ಷದ ಉಚಿತ ಸಾಮೂಹಿಕ ವಿವಾಹಗಳಲ್ಲಿ ವಧು-ವರರ ಜೊತೆಯಲ್ಲಿ ಅವರ ಪೋಷಕರನ್ನು ವೇದಿಕೆಯ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಬೆಳಿಗ್ಗೆ 9ರಿಂದಲೇ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಶೀಲ, ಎಸ್ ಎನ್ ಸುಬ್ಬಾರೆಡ್ಡಿ, ಡಾ ಎಸ್ ಅಮೃತ, ಎಸ್ ಎನ್ ಸೂರ್ಯನಾರಾಯಣರೆಡ್ಡಿ, ಭಾಗ್ಯಮ್ಮ, ರಾಮಕೃಷ್ಣಾರೆಡ್ಡಿ, ಸರಸ್ವತಮ್ಮ, ನರಸಿಂಹಪ್ಪ, ಬಿ ವಿ ವೆಂಕಟರಮಣ, ಪೂಜಪ್ಪ ಸೇರಿದಂತೆ ಇತರರು ಇದ್ದರು.