ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಐದು ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಖಂಡಿತವಾಗಿಯೂ ಯಶಸ್ವಿ ಸಾಧಿಸಬಹುದು ಎಂದು ಬರಕಾ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಬಿ ಎಸ್ ಶರ್ಫುದ್ದೀನ್ ಉದಾಹರಣೆಗಳ ಮೂಲಕ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕಾಗೆಯಂತಹ ಚಾಣಾಕ್ಷತೆ, ಕೊಕ್ಕರೆಯಂತಹ ಏಕಾಗ್ರತೆ, ನಾಯಿಯಂತಹ ನಿದ್ರೆ, ಮಿತ ಆಹಾರ ಮತ್ತು ಗೃಹತ್ಯಾಗದಂತಹ ಗುಣವಿಶೇಷತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ವಿದ್ಯಾರ್ಥಿಯು ಜೀವನದಲ್ಲಿ ಯಶಸ್ವಿ ಪಡೆಯುವುದು ಖಂಡಿತ” ಎಂದು ಹೇಳಿದರು.
ಅತಿಥಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ʼಮೀಫ್ʼನ ಅಧ್ಯಕ್ಷ ಜನಾಬ್ ಮೂಸಬ್ಬ ಪಿ ಬ್ಯಾರಿ ಮಾತನಾಡಿ, “ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದರೆ, ಸಮಾಜದಲ್ಲಿ ಅವರಿಗೆ ಬಹಳಷ್ಟು ಅವಕಾಶಗಳಿವೆ. ವಿದ್ಯಾರ್ಥಿನಿಯರಿಗೆ ಕ್ರೀಡೆಗಳಲ್ಲಿ ಹೆಚ್ಚಿನ ಅವಕಾಶ ಓದಗಿಸಬೇಕು” ಎಂದು ತಿಳಿಸಿದರು.
ಜಮಿಯತುಲ್ ಫಲಾಹ್ ಕಾಪು ತಾಲೂಕು ಅಧ್ಯಕ್ಷ ಜನಾಬ್ ಶಬೀಹ್ ಅಹಮದ್ ಖಾಝಿ ಮಾತನಾಡಿ, “ಮುಸ್ಲಿಂ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ಎಲ್ಲ ರಂಗದಲ್ಲೂ ರಾರಾಜಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅನುಗ್ರಹ ಕಾಲೇಜ್ನ ಕೊಡುಗೆಯು ಪ್ರಶಂಸನೀಯ” ಎಂದು ಶ್ಲಾಘಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜನಾಬ್ ಕೆ ಎಂ ಮುಸ್ತಫಾ ಸುಳ್ಯ ಮಾತನಾಡಿ, ಅನುಗ್ರಹ ಕಾಲೇಜ್ನ ವಿದ್ಯಾರ್ಥಿನಿಯರ ಪರಿಶ್ರಮ ಮತ್ತು ಶಿಸ್ತನ್ನು ನೇರವಾಗಿ ನೋಡಲು ಸಾಧ್ಯವಾದುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯು ಇನ್ನೂ ಉನ್ನತ ಶಿಖರಕ್ಕೆ ಏರಲಿ” ಎಂದು ಶುಭ ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ, ಜನಾಬ್ ಹೈದರ್ ಅಲಿ ಅವರು ಕಾಲೇಜು ನೀಡುತ್ತಿರುವ ಮೌಲ್ಯಾಧಾರಿತ ಶಿಕ್ಷಣ ಕ್ರಮವನ್ನು ವಿವರಿಸಿದರು. ತದ ನಂತರ 2023-24ನೇ ಸಾಲಿನಲ್ಲಿ ಉತ್ತೀರ್ಣರಾದ ಬಿಎ ಮತ್ತು ಬಿಕಾಂ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ನಂತರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಜನಾಬ್ ಯಾಸಿನ್ ಬೇಗ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, “ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರಿಗೆ ಎಷ್ಟು ಗೌರವ ನೀಡಿದರೂ ಸಾಲದು, ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಾಗ ಮಾತ್ರ ಜೀವನದ ಸೌಂದರ್ಯ ಆಸ್ವಾದಿಸಲು ಸಾಧ್ಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಕಾನೂನು ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ: ನ್ಯಾ. ನಾಗಮೋಹನ್ ದಾಸ್
ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಬಿ ಡಿ ಅವರು ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕನ್ನಡ, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿ ಸುಮಧುರ ಹಾಡುಗಳನ್ನು ಹಾಡಿ ಮನರಂಜಿಸಿದರು.
ವೇದಿಕೆಯಲ್ಲಿ ಕಾಲೇಜಿನ ಕಾರ್ಯದರ್ಶಿ ಜನಾಬ್ ಇಮಾರತ್ ಅಲಿ, ಸಂಚಾಲಕ ಅಮಾನುಲ್ಲಾ ಖಾನ್, ಜೊತೆ ಕಾರ್ಯದರ್ಶಿ ಅಬ್ದುಲ್ಲಾ ಕುಂಞಿ, ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ ಪದವಿ ವಿಭಾಗದ ಸಂಯೋಜಕಿ ಆಬಿದಾ, ಪಪೂ ವಿಭಾಗದ ಸಂಯೋಜಕಿ ಮಮಿತಾ ಎಸ್ ರೈ, ಮೌಲ್ಯ ಶಿಕ್ಷಣದ ವಿಭಾಗದ ಮುಖ್ಯಸ್ಥೆ ಸಲೀಮ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಭಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.