ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪವು ವಚನ ವಿಶ್ವವಿದ್ಯಾಲಯದ ಕೇಂದ್ರವಾಗಬೇಕು. ಆ ಮೂಲಕ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ತೆರೆದುಕೊಳ್ಳುತ್ತದೆ ಎಂದು ನಾಡೋಜ ಡಾ ಗೊ.ರು. ಚನ್ನಬಸಪ್ಪ ಆಶಯ ವ್ಯಕ್ತಪಡಿಸಿದರು.
ಬಸವಕಲ್ಯಾಣದ ಬಿಕೆಡಿಬಿ ಕಚೇರಿ ಅತಿಥಿಗ್ರಹದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಜಾನಪದ ವಿದ್ವಾಂಸ ಡಾ.ಗೊ.ರು. ಚನ್ನಬಸಪ್ಪ ಅವರ ಅಭಿನಂದನೆ ಹಾಗೂ ಸಂವಾದ ಸಮಾರಂಭದಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಕನ್ನಡ ನಾಡಿಗೆ ವಲಸಿಗರು ಬರುವುದು ಹಾಗೂ ಅವರು ಕನ್ನಡ ಕಲಿಯದಿರುವುದು ಒಂದು ಸಮಸ್ಯೆಯಾದರೆ, ಕನ್ನಡಿಗರಲ್ಲಿರುವ ನಿರಭಿಮಾನದಿಂದ ಕನ್ನಡಕ್ಕೆ ಹೆಚ್ಚು ಸಮಸ್ಯೆ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಏಕೀಕರಣವಾಗಿ ಅದೆಷ್ಟೋ ವರ್ಷಗಳಾಗಿವೆ. ಇತ್ಯರ್ಥವಾಗದೇ ಇರುವ ಗಡಿ ಸಮಸ್ಯೆ, ನೀರಿನ ಸಮಸ್ಯೆ ಹಾಗೇಯೇ ಉಳಿದಿವೆ. ಅಂತಾರಾಜ್ಯ ಸಮಸ್ಯೆಗಳು ನೀಗಿಸಲು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ನೀತಿ ಜಾರಿಗೆ ಬರುವ ಅಗತ್ಯವಿದೆ. ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಉದ್ಯೋಗಾವಕಾಶ ಈಗ ಬಹು ದೊಡ್ಡ ಪ್ರಶ್ನೆಯಾಗಿದೆ’ ಎಂದರು.
‘ಕನ್ನಡ ಭಾಷೆ ಮತ್ತು ಕನ್ನಡಿಗರ ಸವಾಲುಗಳ ಕುರಿತು ಹಲವಾರು ವರದಿಗಳು ಮತ್ತು ಶಿಫಾರಸ್ಸು ಸರ್ಕಾರದಲ್ಲಿ ಅಂಗೀಕೃತವಾಗಿವೆ. ಆದರೆ ಅನುಷ್ಠಾನಕ್ಕೆ ಬಂದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದ ನಾವು ಸರ್ಕಾರದ ಮೇಲೆ ಒತ್ತಡ ತರಬೇಕು. ಕನ್ನಡದ ಕೆಲಸಗಳನ್ನು ನೆರವೇರಲು ಚಳುವಳಿ ಹಾಗೂ ಹೋರಾಟ ನಡೆಸುತ್ತಲೇ ಇರಬೇಕು’ ಎಂದರು.
‘ಹಿರಿಯ ತಲೆಮಾರಿನ ವಿದ್ವಾಂಸರು ಮಾಡುವ ಸಂಶೋಧನೆ ಒಂದು ನಿರ್ದಿಷ್ಟ ಉದ್ದೇಶ ಹೊಂದಿರುತ್ತಿತ್ತು. ಜನರ ಅರಿವಿಗೆ ಇರದ, ಅವಜ್ಞೆಗೊಳಗಾದ ಸಂಗತಿಗಳು ಜನರಿಗೆ ತಿಳಿಸುವ ಹೊಣೆಗಾರಿಕೆ ವಿದ್ವಾಂಸರು ಹೊತ್ತು ಶ್ರಮಿಸುತ್ತಿದ್ದರು. ಹೊಸ ತಲೆಮಾರಿನ ಸಂಶೋಧಕರು ಹೊಸ ವಿಷಯ ದಾಟಿಸುವ, ದಾಖಲಿಸುವ ಕೆಲಸ ಹೆಚ್ಚು ಪ್ರಜ್ಞಾಪೂರ್ವಕವಾಗಿ ಮಾಡಬೇಕಿದೆ’ ಎಂದು ತಿಳಿಸಿದರು.
‘ತನ್ನ ಎಲ್ಲಾ ಪೂರ್ವಾಗ್ರಹಗಳಿಂದ ಬಿಡುಗಡೆಗೊಂಡು, ಮುಕ್ತವಾದ ವಿಮರ್ಶೆಯಾಗಬೇಕು. ಲೇಖಕ ಕೇಂದ್ರಿತ ವಿಮರ್ಶೆಗಿಂತ ಕೃತಿ ಕೇಂದ್ರಿತ ಹಾಗೂ ವಸ್ತು ನಿಷ್ಠ ವಿಮರ್ಶೆ ಮುಖ್ಯ. ವಿಮರ್ಶೆಯಲ್ಲಿ ಹಲವು ಪಂಥಗಳು ಬೆಳೆದಿವೆ. ವಿಮರ್ಶಾ ಮಾರ್ಗಗಳ ಹಿನ್ನೆಲೆಯಲ್ಲಿ ಕೃತಿ ಅಧ್ಯಯನ ನಡೆದರೆ ಒಂದು ಚೌಕಟ್ಟು ಬಂದು ಬಿಡುತ್ತದೆ. ವಿಮರ್ಶೆ ಎಂದಿಗೂ ಮುಕ್ತವಾಗಿ ಬರೆಯಬೇಕು. ಈ ಕಾಲದಲ್ಲಿ ಹಲವರು ಒಳ್ಳೆಯ ವಿಮರ್ಶೆ ಬರೆಯುತ್ತಿದ್ದಾರೆ’ ಎಂದು ಹೇಳಿದರು.
ಪ್ರತಿಷ್ಠಾನದ ನಿರ್ದೇಶಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ‘1974 ರಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಅವರು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈಗ 2024ರಲ್ಲಿ ಗೊ.ರು.ಚ ಅವರು ಅಲ್ಲಿಯೇ ಸಮ್ಮೇಳನದ ಅಧ್ಯಕ್ಷತೆರಾದದ್ದು ಅಭಿಮಾನದ ಸಂಗತಿ. ಈ ನೆಲದ ಅಸ್ಮಿತೆಗಾಗಿ ದುಡಿದ ಈ ಇಬ್ಬರೂ ಮಹಾನ್ ಚೇತನರಾಗಿದ್ದಾರೆ’ ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾಗಿಣಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೆವರು, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ , ಹಿರಿಯ ವಿದ್ವಾಂಸ ಡಾ.ವೀರಣ್ಣ ರಾಜೂರ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಜಯಶ್ರೀ ದಂಡೆ, ಹಿರಿಯ ಸಾಹಿತಿ ಡಾ.ಕಾಶಿನಾಥ ಅಂಬಲಗೆ, ಲೇಖಕ ಯೋಗೇಶ್ ಮಾಸ್ಟರ್, ಅಶೋಕ ದ್ಯಾಮ್ಲೂರು, ಶಿವರಾಜ್ ನರಶೆಟ್ಟೆ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಹುಡೇದ, ಧರ್ಮಣ್ಣ ಚಿತ್ತಾ, ರಾಜಶೇಖರ ಬಿರಾದಾರ, ಮಹಾದೇವಪ್ಪ ಇಜಾರೆ, ಡಾ.ಬಾಬಾಸಾಹೇಬ ಗಡ್ಡೆ, ನಾಗರಾಜ್ ಮಾನೆ, ಕಲ್ಯಾಣರಾವ ಮದರಗಾಂವಕರ, ಧನರಾಜ್ ರಾಜೋಳೆ ಮೊದಲಾದವರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಚಂದ್ರಕಾಂತ ಅಕ್ಕಣ್ಣಾ ವಂದಿಸಿದರು.