ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರ್ಎಸ್ಎಸ್) ಇದೀಗ ತನ್ನ ಶತಮಾನೋತ್ಸವ ಕಾರ್ಯಕ್ರಮಗಳಿಗೆ ದೇಶಾದ್ಯಂತ ಚಾಲನೆ ನೀಡಿದ್ದು, ಪ್ರಗತಿಪರ ಸಾಹಿತಿ, ಚಿಂತಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮಗಳಿಗೆ ದೇಶಾದ್ಯಂತ ಚಾಲನೆ ನೀಡಿರುವುದನ್ನು ಖಂಡಿಸಿ ನೂರಾರು ಸಾಹಿತಿಗಳು, ಚಿಂತಕರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಏನಿದೆ?
ಸ್ವಾತಂತ್ರ್ಯ ಪೂರ್ವದಿಂದಲೂ, ಜಾತಿ ಧರ್ಮಗಳ ವಿಭಜನೆಯ ಮೂಲಕ ಕೋಮುವಾದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ.
ಸಂವಿಧಾನ ಜಾರಿಯಾದ ನಂತರ, ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದೆ ಒಂದಲ್ಲಾ ಒಂದು ಬಗೆಯಲ್ಲಿ ಸಂವಿಧಾನವನ್ನು ಗೌಣಗೊಳಿಸಿ ಧರ್ಮ ಹಾಗೂ ಕೋಮುವಾದದ ನೆಲೆಯಲ್ಲಿ ಭಾರತವನ್ನು ಒಂದು ಜನಾಂಗೀಯ ರಾಷ್ಟ್ರವನ್ನಾಗಿಸಲು ನಿರಂತರವಾಗಿ ಒಡಕಿನ ರಾಜಕೀಯ ಮಾಡುತ್ತಾ ಬಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು ಇದೀಗ ತನ್ನ ಶತಮಾನೋತ್ಸವ ಕಾರ್ಯಕ್ರಮಗಳಿಗೆ ದೇಶಾದ್ಯಂತ ಚಾಲನೆ ನೀಡಿದೆ .
ಇದೇ ಕೋಮುವಾದಿ ಆರ್ಎಸ್ಎಸ್ನ ಹೊಕ್ಕುಳ ಬಳ್ಳಿಯೊಂದು ಸೇಡಂನಲ್ಲಿ ಜನವರಿ 29ರಿಂದ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಅಖಿಲ ಭಾರತ ಮಟ್ಟದ ಸಮ್ಮೇಳನವನ್ನು ಸಂಘಟಿಸುತ್ತಿದೆ. ಆರ್ಎಸ್ಎಸ್ನ ಶತಮಾನೋತ್ಸವ ಸಂದರ್ಭದ ಪೀಠಿಕಾ ಕಾರ್ಯಕ್ರಮದಂತೆ ಇದನ್ನು ಸಂಘಟಿಸಲಾಗಿದೆ. ಇದೇ ಆರ್ಎಸ್ಎಸ್ ನೂರು ವರ್ಷಗಳ ಹಿಂದೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಪ್ರತಿಜ್ಞೆಗೈದಿದ್ದನ್ನು ನಾವು ಸ್ಮರಿಸಬೇಕಿದೆ.
ಈ ಕಾರ್ಯಕ್ರಮದ ರೂವಾರಿ ಗೋವಿಂದಾಚಾರ್ಯ ಒಂದು ಕಾಲದಲ್ಲಿ ಭಾಜಪದಸೂತ್ರಧಾರರಾಗಿದು ಈಗ ಆರೆಸ್ಸೆಸ್ ಅಣತಿ ಮೇರೆಗೆ ಇನ್ನೊಂದು ಪಾತ್ರ ನಿರ್ವಹಿಸುತ್ತಿದ್ದಾರೆ. ಸಂವಿಧಾನವನ್ನು ಬದಲಿಸಬೇಕೆಂಬ ಮೊದಲಮಾತು ಶುರು ಮಾಡಿದ್ದೇ ಈ ಗೋವಿಂದಾಚಾರ್ಯ. ಈ ಸದರಿ ಸಮ್ಮೇಳನವು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಗೌಪ್ಯ ಅಜೆಂಡಾವನ್ನು ಹೊಂದಿದ್ದು , ಅದರಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಭಾಜಪ/ ಆರ್ಎಸ್ಎಸ್ಗರು ಅಥವಾ ತೆರೆಮೆರೆಯಲ್ಲಿ ಆರ್ಎಸ್ಎಸ್ ಬೆಂಬಲಿಸುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಶಕ್ತಿಗಳೇ ಆಗಿವೆ. ಈ ಅಜೆಂಡವೂ ಅವರ ಸಾರ್ವಜನಿಕ ಹೇಳಿಕೆಗಳು , ಸಿದ್ಧತೆಗಳು ಮತ್ತು ಕ್ರಿಯೆಗಳಲ್ಲಿ ನಿಚ್ಚಳವಾಗಿದೆ. ಇದು ಅವರ ಹಿಂದುತ್ವ ನಿಲುವನ್ನು ಢಾಳಾಗಿ ತೋರಿಸಿದೆ.
ಈ ಸಮ್ಮೇಳನವೂ ಮಾರುವೇಶದ ಆರ್ಎಸ್ಎಸ್ನ ದೇಶ ವಿಭಜನೆ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿದೆ. ಭಾರತೀಯ ಎಂದರೆ ಹಿಂದೂ ಅದರಲ್ಲೂ ಹಿಂದೂ ಬ್ರಾಹ್ಮಣೀಯ ಸಂಸ್ಕೃತಿ ಎಂಬಾ ಆರ್ಎಸ್ಎಸ್ನ ಸಿದ್ಧಾಂತವನ್ನು ಪ್ರಚಾರ ಮಾಡುವುದೇ ಈ ಸಮಾವೇಶದ ಉದ್ದೇಶವಾಗಿದೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯು ಬಸವರಾಜ ಪಾಟಿಲ ಸೇಡಂ ಎಂಬ ಕಟ್ಟಾ ಆರ್ಎಸ್ಎಸ್ನ ನಾಯಕರು ಇದರ ಪ್ರಮುಖ ಸಂಘಟಕರದ್ದು. ಭಾರತೀಯ ಸಂಸ್ಕೃತಿ ಉತ್ಸವ ಎಂಬುದು ತೋರಿಕೆಯ ಹೆಸರು. 240 ಎಕರೆ ಜಾಗದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವವು ಹಿಂದೂ ಧರ್ಮ ಉಳಿಸಲು ಅಂದರೆ ಸನಾತನ ವ್ಯವಸ್ಥೆ ಉಳಿಸಲು ನಡೆಸಲಾಗುತ್ತಿರುವ ಉತ್ಸವವಾಗಿದೆ. ಇದೊಂದು ಆರ್ಎಸ್ಎಸ್ನ ನೂರನೇ ವರ್ಷದ ಆಚರಣೆಯ ಆರಂಭದ ಭಿನ್ನರೂಪ. ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರವೇಶದ ಭಾಗವಾಗಿ ಆರ್ಎಸ್ಎಸ್ ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು, ಕಲಬುರ್ಗಿಯನ್ನು ಹೆಬ್ಬಾಗಿಲು ಮಾಡಿಕೊಂಡಿದೆ.
ಈ ಉದ್ದೇಶಕ್ಕಾಗಿಯೇ “ಭಾರತೀಯ ಸಂಸ್ಕೃತಿ ಉತ್ಸವ ಎಂಬ ಹೆಸರಿನ “ಪುರೋಹಿತಶಾಹಿತ್ವದ ಉತ್ಸವ” ನಡೆಸಲಾಗುತ್ತಿದೆ. ಪುರೋಹಿತಶಾಹಿಗಳಿಗೆ ಗೌರವಿಸುವ ಸಂವಿಧಾನ (ಮನುಸ್ಮೃತಿ)ಕ್ಕಾಗಿ ಈ ಉತ್ಸವ. ಸಂವಿಧಾನವನ್ನು ಗೌರವಿಸಿ ಮಾನವೀಯತೆ, ಸೌಹಾರ್ದತೆ, ಶಾಂತಿ , ಬಂಧುತ್ವ, ಬಹುತ್ವ , ಬಹು ಸಂಸ್ಕೃತಿ, ಬಹುಭಾಷೆ ಮತ್ತು ಸಮಗ್ರತೆಯನ್ನು ಬಯಸುವವರೆಲ್ಲರೂ ಈ ಉತ್ಸವನ್ನುನ ಧಿಕ್ಕರಿಸಬೇಕಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ
ಈಗಾಗಲೇ, ಸೇಡಂ ನಲ್ಲಿ ನಡೆಯಲಿರುವ ಈ ಭಾರತೀಯ ಸಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಘೋಷಣೆ ಮಾಡುವ ಮೂಲಕ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಸಂವಿಧಾನದ ಹೆಸರಿನಲ್ಲಿ ತೆಗೆದುಕೊಂಡ ಪ್ರತಿಜ್ಞೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರೂ ನಾನು ಭಾಗವಹಿಸಲಾರೆ ಎಂದು ಬಹಿರಂಗವಾಗಿ ಸ್ಪಷ್ಟ ಮಾಡಿದ್ದಾರೆ
ಆದರೆ, ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಇರುವುದು ಕೇವಲ ಮುಖ್ಯಮಂತ್ರಿಯವರ ಹೆಸರು, ಪ್ರಿಯಾಂಕ್ ಖರ್ಗೆಯವರ ಹೆಸರು ಮಾತ್ರವಲ್ಲ. ಸಂಘಟಕರು ಹೊರತಂದಿರುವ 52 ಪುಟಗಳ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳ ಸಚಿವ ಸಂಪುಟದ ಭಾಗವಾಗಿರುವ ಹಲವು ಮಂತ್ರಿಗಳು, ಸಂಸದರು ಮತ್ತು ಆ ಪ್ರದೇಶದ ಕಾಂಗ್ರೆಸ್ನ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ಅವರ ಹೆಸರುಗಳನ್ನು ಮುದ್ರಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಈ ಎಲ್ಲ ಹೆಸರಗಳನ್ನು ಅವರ ಗಮನಕ್ಕೆ ತಾರದೆ ಮತ್ತು ಒಪ್ಪಿಗೆಯಿಲ್ಲದೆ ಹಾಕಲಾಗಿದೆ ಎಂಬ ಮಾತು ಕೇಳು ಬರುತ್ತಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದ ಸಿದ್ಧತೆಗಾಗಿ ಇಲಾಖಾವಾರು ಸಭೆಗಳು ನಡೆದಿವೆ ಎಂಬ ಮಾಹಿತಿ ಕೂಡಾ ಇದೆ.
ಹಾಗಾದರೆ ಕೇಳದೇ ಹೆಸರು ಬಳಸಿಕೊಂಡು ರಾಜ್ಯದ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವ ಸಂಘಟಕರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನಾವೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ. ಕಾಂಗ್ರೆಸ್ನ ಈ ಮೃದು ಹಿಂದುತ್ವದ ಧೋರಣೆ ರಾಜ್ಯದ ಶಾಂತಿ ಸೌಹಾರ್ದತೆಗೆ ಧಕ್ಕೆಯ ಸಂಗತಿಯಾಗಿದೆ. ಆದರೂ ಆಡಳಿತರೂಢ ಕಾಂಗೆಸ್ ಪಕ್ಷವೂ ಏಕೆ ನಿರ್ಲಕ್ಷ್ಯವಹಿಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ? ಜೊತೆಗೆ ಇದು ಸೈದ್ಧಾಂತಿಕ ನಿಲುವಿನ ಪ್ರಶ್ನೆಯಾಗಿದ್ದು ಒಂದು ಸಮ್ಮೇಳನದ ಪೂರ್ವಾಪರಗಳನ್ನು ತಿಳಿಯದೆ ಕಾಂಗ್ರೆಸ್ ಸರಕಾರದ ಸಚಿವರು ಮತ್ತು ನಾಯಕರು ಈ ಸಮ್ಮೇಳನಕ್ಕೆ ಹೋಗಲು ಹೇಗೆ ಒಪ್ಪಿಕೊಂಡರು ಎಂಬುದು ಪ್ರಶ್ನೆಯಾಗಿದೆ ?
ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿದರೆ ಕಾಂಗ್ರೆಸ್ ನಾಯಕರನ್ನು ನಿರ್ದಿಷ್ಟ ಕಾರ್ಯಕ್ರಮಗಳಿಗೆ ಆಹ್ವಾನಿಸಿರುವುದು ಸ್ಪಷ್ಠ. ಕೇಳದೇ, ಒಪ್ಪಿಗೆ ಪಡೆಯದೇ ಇಂಥಾ ದೊಡ್ಡ ಸಮ್ಮೇಳದ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸುವುದು ಸಾಧ್ಯವೇ ಇಲ್ಲ. ಕಾಂಗ್ರೆಸಿಗರಿಗೆ ಕನಿಷ್ಠ ತಮ್ಮ ಪಕ್ಷದ ಸೈದ್ಧಾಂತಿಕ ನಿಲುವು, ಪರಂಪರೆ ಬಗ್ಗೆ ಕನಿಷ್ಠ ತಿಳುವಳಿಕೆ ಇದ್ದಿದ್ದರೆ ಇಂತಹ ಅಭಾಸಕ್ಕೆಡೆಯಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಸದಾ ಸಂವಿಧಾನವನ್ನು ಎತ್ತಿ ಹಿಡಿಯುವ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವುದು ಕಾಂಗ್ರೆಸ್ಸಿಗರಿಗೆ ಮಾದರಿಯಾಗಬೇಕಿತ್ತು. ಹಾಗಾಗದಿರುವುದು ವಿಷಾದನೀಯ ಸಂಗತಿ.
240 ಎಕರೆ ಬೆಳೆಯುವ ಭೂಮಿಯಿಂದ ತಾತ್ಪೂರ್ತಿಕವಾಗಿ ರೈತರನ್ನು ಒಕ್ಕಲೆಬ್ಬಿಸಿ ಲಕ್ಷಾಂತರ ಜನರನ್ನು ಸೇರಿಸಿ ವಾತಾವರಣ ಕಲುಷಿತ ಮಾಡುತ್ತಿದ್ದಾರೆ. ಇದಕ್ಕೇನು ಕ್ರಮ ಕೈಗೊಳ್ಳಲಾಗುತ್ತಿದೆ ಈ ಸರ್ಕಾರ ಉತ್ತರಿಸಬೇಕು. ಈ ಎಲ್ಲ ಕಾರಣಗಳಿಂದ ಸರ್ಕಾರದ ಎಲ್ಲಾ ಸಚಿವರು ಮತ್ತು ಸಂವಿಧಾನದ ಪರ ಇರುವ ಕಾಂಗ್ರೆಸ್ನ ಹಿರಿಯ ನಾಯಕರರು ಈ ಕೋಮುವಾದೀ ಸಮ್ಮೇಳನದಲ್ಲಿ ಭಾಗವಹಿಸಬಾರದೆಂದು ನಾವು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ. ಜೊತೆಗೆ, ಈ ಸಮ್ಮೇಳನದಲ್ಲಿ ಭಾಗಿಯಾಗುವ ನಿರ್ಧಾರದಿಂದ ಸಚಿವರು ಮತ್ತು ಕಾಂಗ್ರೆ ಸ್ ನಾಯಕರು ಹಿಂದೆ ಸರಿದರೆ ಮಾತ್ರ ಸಾಲದು, ಹಿಂದುತ್ವದ ಹಲವು ಮುಖಗಳ ಸೈದ್ಧಾಂತಿಕ ದಾಳಿಯನ್ನು ಎದುರಿಸುವ ಸೈದ್ಧಾಂತಿಕ ಕಾರ್ಯಕ್ರಮವನ್ನು ಜನಾಂದೋಲನವಾಗಿ ಕಾಂಗ್ರೆಸ್ ನಾಯಕರು ರೂಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ.
ರಾಜ್ಯದ ಜನಗಳಿಗೆ ಕೋಮುವಾದಿ ವಿಷಾನಿಲ ಉಣಿಸಿ ಮುಗ್ಧ ಶೂದ್ರ ಮಕ್ಕಳ ಮನೋಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದಾರೆ. ಅಲ್ಲಿ ಈಗಾಗಲೇ ನೂರಾರು ಶೂದ್ರರನ್ನು ಹಗಲು ರಾತ್ರಿ ದುಡಿಸಿಕೊಂಡು ಸನಾತನಿಗಳ ಸೇವೆಗೆ ಅವರ ಚರ್ಮವನ್ನು ರತ್ನಗಂಬಳಿ ಮಾಡಿ ಹಾಸಲಾಗುತ್ತಿದೆ ಎಂಬುದನ್ನು ರಾಜ್ಯದ ಎಚ್ಚರಿಕೆಯಿಂದ ಗಮನಿಸಬೇಕು ಮತ್ತದನ್ನು ವಿರೋಧಿಸಬೇಕು ಎಂಬುದು ನಮ್ಮ ನಿಲುವಾಗಿದೆ.