ರಾಯಚೂರು ನಗರದ ಮೀರಾಬಾಯಿ ಕುಂಟಾದಲ್ಲಿನ ಕೆರೆ ಅಭಿವೃದ್ಧಿಗಾಗಿ ಸರ್ವೆ ಕಾರ್ಯ ಕೈಗೊಂಡಿದ್ದು, ಇದರಿಂದ ಕೆರೆ ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕ ಎದುರಾಗಿದೆ. ಸ್ಥಳೀಯ ನಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಿ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಜನಾಂದೋಲನ ಸಂಘಟನೆಯ ಅಧ್ಯಕ್ಷ ಯು ಆಂಜನೇಯ ಒತ್ತಾಯಿಸಿದರು.
“ನಗರದಲ್ಲಿರುವ ಕೆರೆಗಳ ಅಭಿವೃದ್ಧಿಗಾಗಿ ಈಚೆಗೆ ಸಣ್ಣ ನೀರಾವರಿ ಇಲಾಖೆಯಿಂದ ಸರ್ವೆ ಕಾರ್ಯ ಕೈಗೊಂಡಿರುವುದರಿಂದ ಬಡವರು, ದೀನದಲಿತರು, ನಿರ್ಗತಿಕರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರಿಗೆ ಭೀತಿ ಶುರುವಾಗಿದೆ. ಬಹುತೇಕ ನಿವಾಸಿಗಳಿಗೆ ನಗರಸಭೆಯಿಂದ ಕೆರೆ ಪ್ರದೇಶದಲ್ಲಿ ಸಣ್ಣ ನಿವೇಶನಗಳನ್ನು ಹಂಚಿಕೆ ಮಾಡಿ ವಾಸಿಸಲು ಸಹಕರಿಸಲಾಗಿದೆ. ಆದ್ದರಿಂದ ಸರ್ಕಾರದ ವಸತಿ ಯೋಜನೆ ಮತ್ತು ಕರ್ನಾಟಕ ಗೃಹ ಮಂಡಳಿಯಿಂದ ಸ್ಥಳಾಂತರಿಸಿ ವಸತಿ ಸೌಲಭ್ಯ ಒದಗಿಸಬೇಕು” ಎಂದು ಆಗ್ರಹಿಸಿದರು.
“ಈಗಾಗಲೇ ಮಾವಿನಕೆರೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಅದೇ ರೀತಿಯಲ್ಲಿ ಸರ್ವೆ ನಂ.22/1ರಲ್ಲಿ 11 ಎಕರೆ 09 ಗುಂಟೆ ಹಾಗೂ ಸರ್ವೆ ನಂ22/2ರಲ್ಲಿ 5ಎಕರೆಯಲ್ಲಿರುವ ಮೀರಾಬಾಯಿ ಕುಂಟಾ(ಕೆರೆ)ದ ಸರ್ವೆ ಕಾರ್ಯಕೈಗೊಂಡಿದ್ದು, ಎಫ್ಟಿಎಲ್ ಹಾಗೂ ಬಫರ್ ಜೋನ್ ಒಳಗಿರುವ ಎಲ್ಲ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ ಪ್ರದೇಶ ಸ್ವಾಧೀನಪಡೆಸಿಕೊಳ್ಳುವ ಬಗ್ಗೆ ಯಕ್ಷ ಪ್ರಶ್ನೆ ಮೂಡಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಒಳಮೀಸಲಾತಿ ಜಾರಿ ಆಗುವವರೆಗೆ ಗೃಹ ಇಲಾಖೆ ನೇಮಕಾತಿ ಮುಂದೂಡಲು ಡಿಎಸ್ಎಸ್ ಒತ್ತಾಯ
“ಕೆರೆ ಪ್ರದೇಶದಲ್ಲಿ ವಾಸಿಸುವ ಬಡವರಿಗೆ ಆಧ್ಯತೆ ಮೇರೆಗೆ ವಸತಿ ಕಲ್ಪಿಸಿಕೊಡಬೇಕು. ಅಲ್ಲದೇ ಉಳ್ಳವರು ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಕಟ್ಟಡಗಳನ್ನು ನೆಲಸಮ ಮಾಡಿ ಸ್ವಾಧೀನಪಡಿಸಿಕೊಂಡರೆ, ಸಾಮಾಜಿಕ ನ್ಯಾಯ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ತಿಮ್ಮಾರೆಡ್ಡಿ, ನಲ್ಲಾರೆಡ್ಡಿ, ವೆಂಕಟೇಶ ಸಾಗರ, ಎಸ್ ಕೆ ನಾಗರೆಡ್ಡಿ, ಸಿ ಬಿ ವೀರೇಶ, ಬಿ ಈರಣ್ಣ ಇದ್ದರು.
