ಹಿಂದೂಗಳು ಸಂತತಿಯನ್ನು ಹೆಚ್ಚಿಸಿಕೊಳ್ಳಬೇಕು. ಮನೆ, ದೇಶ, ಸಮಾಜ ಹಾಗೂ ಧರ್ಮಕ್ಕೆ ಎಂದು ಕನಿಷ್ಠ 4 ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಅವರು ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ಎಸೆಗಲಾಗುತ್ತದೆ ಎಂದು ಬುಧವಾರ ಉಡುಪಿಯಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿದ ವೇಳೆ ಈ ಹೇಳಿಕೆ ನೀಡಿದ್ದಾರೆ.
“ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ದಯನೀಯ ಪರಿಸ್ಥಿತಿಯನ್ನು ನಾವು ಗಮನಿಸುತ್ತಿದ್ದೇವೆ. ಮುಂದೆ ಭಾರತದಲ್ಲಿಯೂ ಈ ಸ್ಥಿತಿ ಬಾರದಂತೆ ಮಾಡಲು ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ. ಮನೆ, ದೇಶ, ಸಮಾಜ ಹಾಗೂ ಧರ್ಮಕ್ಕೆ ಎಂದು ಕನಿಷ್ಠ 4 ಮಕ್ಕಳನ್ನು ಮಾಡಿಕೊಳ್ಳಬೇಕು” ಎಂದು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿಯವರು ಕರೆ ನೀಡಿದ್ದಾರೆ.
ಮಾತೆಯರು ಅಷ್ಟ ಮಕ್ಕಳನ್ನು ಹೆತ್ತು ಹಿಂದೂ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು, ಕಡೆಯ ಪಕ್ಷ ಕನಿಷ್ಠ ನಾಲ್ಕು ಮಕ್ಕಳಿಗಾದರೂ ಜನ್ಮ ನೀಡಬೇಕೆಂದು ಮನವಿ ಮಾಡಿದ್ದು, “ಬಾಂಗ್ಲಾದೇಶದಲ್ಲಿ ಜಂಗಲ್ ರಾಜ್ ಸರಕಾರ ಅಸ್ತಿತ್ವದಲ್ಲಿದೆ. ಅಂತಾರಾಷ್ಟ್ರೀಯ ಸಂಘಟನೆಗಳ ಮೂಲಕ ಒತ್ತಡವನ್ನು ಹೇರಿ, ಅಲ್ಲಿನ ಹಿಂದೂಗಳನ್ನು ರಕ್ಷಿಸುವ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕು. ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ರಕ್ಷಣೆ ಸಿಗುವವರೆಗೆ ಆ ದೇಶದ ಜೊತೆಗೆ ಯಾವುದೇ ರೀತಿಯ ವ್ಯಾಪಾರ, ಕ್ರಿಕೆಟ್ ಪಂದ್ಯಾಟಗಳನ್ನು ನಡೆಸುವುದಿಲ್ಲ ಎಂಬ ಕಠಿಣ ನಿರ್ಧಾರವನ್ನು ತಾಳಬೇಕು” ಎಂದು ಹೇಳಿಕೆ ನೀಡಿದ್ದಾರೆ.
ಪ್ರತಿಯೊಬ್ಬ ಹಿಂದೂ ಬಾಂಗ್ಲಾದೇಶದಲ್ಲಿನ ಹಿಂದೂವನ್ನು ರಕ್ಷಿಸುವಂತೆ ಆಗ್ರಹಿಸಿ, ಪೋಸ್ಟ್ ಕಾರ್ಡ್ ಬರೆದು ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಸಾಮಾಜಿಕ ಜಾಲತಾಣವನ್ನು ಪ್ರಬಲವಾಗಿ ಬಳಸಿ ಸೇವ್ ಬಾಂಗ್ಲಾ ಹಿಂದೂ ಎಂಬ ಅಭಿಯಾನವನ್ನು ಆರಂಭಿಸಬೇಕು ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರಿಂದ ಶಾಸಕರಿಗೆ ಮನವಿ
ಎರಡು ತಿಂಗಳ ಹಿಂದೆಯೇ ಈ ಪ್ರತಿಭಟನೆ ನಡೆಯಬೇಕಿತ್ತು. ಬಾಂಗ್ಲಾದೇಶದಲ್ಲಿನ ಘಟನೆಗಳಿಗೆ ನಾವು ಸ್ಪಂದಿಸಬೇಕೆಂದು ಹಿಂದೂಗಳಿಗೆ ತಡವಾಗಿ ಅರಿವಾಗಿರುವುದು ಸರಿಯಲ್ಲ. ಹಿಂದೂಗಳಿಗೆಂದು ಇರುವ ಜಗತ್ತಿನ ಏಕೈಕ ದೇಶ ಭಾರತ. ಇಂದಿನ ಸಭೆಗೂ ಪೂರ್ಣವಾಗಿ ಹಿಂದೂಗಳು ಭಾಗವಹಿಸಿಲ್ಲ ಎಂದವರು ವಿಷಾದಿಸಿದ ಪ್ರಸಂಗ ಕೂಡ ನಡೆಯಿತು.
