₹50 ಲಕ್ಷ ಇನ್ಷೂರೆನ್ಸ್ ಹಣಕ್ಕಾಗಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದೆ.
ಹಣಮಂತ ಗೋಪಾಲ ತಳವಾರ(35) ಕೊಲೆಯಾದ ವ್ಯಕ್ತಿ. ಬಸವರಾಜ ತಳವಾರ ಎಂಬಾತ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಹಣಮಂತ ಎಂಬುವವರು ತನ್ನ ಹೆಸರಲ್ಲಿ ₹50 ಲಕ್ಷ ಇನ್ಷೂರೆನ್ಸ್ ಮಾಡಿಸಿದ್ದರು. ಅಲ್ಲದೆ ಆ ಇನ್ಷೂರೆನ್ಸ್ಗೆ ಆರೋಪಿ ಬಸವರಾಜ ನಾಮಿನಿಯಾಗಿದ್ದ. ಅಣ್ಣ ಸತ್ತರೆ ತನಗೆ ಲಾಭವೆಂದು ಭಾವಿಸಿ ಆತನನ್ನೇ ಹತ್ಯೆ ಮಾಡಲು ಬಸವರಾಜ ಸಂಚು ರೂಪಿಸಿದ್ದ. ಅಕ್ಟೋಬರ್ 7ರಂದು ಕಂಠಪೂರ್ತಿ ಕುಡಿಸಿ ತನ್ನ ಗ್ಯಾಂಗ್ನೊಂದಿಗೆ ಅಣ್ಣನನ್ನು ಶ್ರೀಗಂಧದ ಕಟ್ಟಿಗೆಗಳಿವೆ, ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಹಣಮಂತನ ತಲೆಗೆ ರಾಡ್ನಿಂದ ಹೊಡೆದು ಆರೋಪಿಗಳು ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಕಬ್ಬಿನ ಹೊಲದಲ್ಲಿ ಹಣಮಂತನ ಶವ ಪತ್ತೆಯಾಗಿತ್ತು. ಹಣಮಂತನ ಶವ ಸಿಗುತ್ತಿದ್ದಂತೆ, ಆರೋಪಿಗಳು ಊರಿನಿಂದ ಪರಾರಿಯಾಗಿದ್ದರು. ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ವ್ಯಾಟ್ಸಾಪ್ ಸ್ಟೇಟಸ್ಗೆ ಫೋಟೋ ಹಾಕಿದ ಪ್ರಿಯಕರ; ವಿವಾಹಿತ ಮಹಿಳೆ ಆತ್ಮಹತ್ಯೆ
“ಮೃತ ಹಣಮಂತನ ಆರೋಪಿ ಸಹೋದರ ಬಸವರಾಜ್ ತಳವಾರ, ಆತನ ಸ್ನೇಹಿತರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಹಾಗೂ ಸಚಿನ್ ಕಂಟೆನ್ನವರ ಎಂಬ ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.