ಹದಡಿ ರಸ್ತೆಯ ದುರಸ್ತಿಗಾಗಿ ಆಗ್ರಹಿಸಿ ಲೋಕೋಪಯೋಗಿ ಇಲಾಖೆ ವಿರುದ್ಧ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಶೀಘ್ರ ರಸ್ತೆ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಒತ್ತಾಯಿಸಿದರು.
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, “ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಹಾದು ಹೋಗುವ ಹದಡಿ ರಸ್ತೆಯು ಹಲವಾರು ದಿನಗಳಿಂದ ಹದಗೆಟ್ಟಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಮತ್ತು ಪಾದಚಾರಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ” ಎಂದು ಆಕೋಶ ವ್ಯಕ್ತಪಡಿಸಿದರು.
“ದಾವಣಗೆರೆಯಲ್ಲಿ ಹದಡಿ ರಸ್ತೆಯು ಅತಿಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಾಗಿದ್ದು, ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ದಿನಂಪ್ರತಿ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿವೆ. ವಿದ್ಯಾರ್ಥಿ ಭವನದ ವೃತ್ತದಲ್ಲಿರುವ ಹತ್ತಾರು ಗುಂಡಿಗಳು ವಾಹನ ಸಂಚಾರಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡುತ್ತಿವೆ. ಅಲ್ಲಿ ಓಡಾಡುವಾಗ ಜನರು ಅಂಗೈಯಲ್ಲಿ ಜೀವವನ್ನು ಇಟ್ಟುಕೊಂಡು ಸಂಚರಿಸುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಕರವೇ ರಾಜ್ಯಾಧ್ಯಕ್ಷ ಕೆ ಜಿ ಯಲ್ಲಪ್ಪ ಮಾತನಾಡಿ, “ದಾವಣಗೆರೆಯಲ್ಲಿ ಮುಖ್ಯರಸ್ತೆಯಾದ ಹದಡಿ ರಸ್ತೆಯು ಜಯದೇವ ವೃತ್ತದಿಂದ ಹೊರಭಾಗದವರೆಗೆ ಗುಂಡಿಗಳಿಂದ ತುಂಬಿದ್ದು, ತೀವ್ರ ಹದಗೆಟ್ಟಿದೆ. ಮಳೆಗಾಲದಿಂದ ಸುಮಾರು ಎರಡು ತಿಂಗಳಿನಿಂದಲೂ ಹದಡಿ ರಸ್ತೆಯಲ್ಲಿ ಗುಂಡಿಗಳಾಗಿದ್ದರೂ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಪ್ರತಿದಿನ ಇದೇ ರಸ್ತೆಯ ಮೂಲಕ ನೂರಾರು ಬಾರಿ ಹತ್ತಾರು ಆಸ್ಪತ್ರೆಗಳ ಆ್ಯಂಬುಲೆನ್ಸ್ಗಳು ಸಾಗುತ್ತವೆ. ಈ ಆ್ಯಂಬುಲೆನ್ಸ್ನಲ್ಲಿ ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳ ಗತಿ ಏನು? ಇಲಾಖೆಯು ಇಲ್ಲಿ ಪ್ರಾಣಬಲಿಯಾಗುವುದನ್ನೇ ಕಾಯುತ್ತಿದೆಯೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ವಕೀಲ ವೃತ್ತಿ ಜಗತ್ತಿನಲ್ಲಿಯೇ ಶ್ರೇಷ್ಠ ವೃತ್ತಿ; ನ್ಯಾಯಾಧೀಶೆ ಎಂ.ಭಾರತಿ
“ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯ ಮೂಲಕ ಸಂಚರಿಸುವುದಿಲ್ಲವೇ? ನಿಮ್ಮ ಕಣ್ಣಿಗೆ ಈ ರಸ್ತೆಯ ದುರಾವಸ್ಥೆ ಕಾಣುತ್ತಿಲ್ಲವೇ? ಹದಡಿ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು. ತತ್ಕ್ಷಣವೇ ಕಾಮಗಾರಿಯನ್ನು ಪ್ರಾರಂಭಿಸದಿದ್ದರೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಾಬುರಾವ್, ಕಾರ್ಯದರ್ಶಿ ಅಜಮ್ ರಜ್ವಿ, ಮುಖಂಡರಾದ ಸಿದ್ದೇಶ್, ದಯಾನಂದ, ಅಮ್ಜದ್, ಮೆಹಬೂಬ್, ಸೈಯದ್, ಗಿರೀಶ್, ಗದಿಗೆಪ್ಪ, ರಾಮಣ್ಣ ತೆಲಿಗಿ, ರವಿ, ಸಂತೋಷ್ ದೊಡ್ಮನಿ, ರಮೇಶ್ ಅಣ್ಣೇಶ್, ಪೃಥ್ವಿ, ಬಸವರಾಜು, ಯತರಾಜ್, ಆನಂದ್, ನವೀನ್, ಪ್ರಶಾಂತ್, ಪ್ರವೀಣ್, ನಾಗರಾಜ್ ಇತರ ಕಾರ್ಯಕರ್ತರು ಇದ್ದರು.