ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಓದು ಇಂಟರ್ನೆಟ್ನಲ್ಲಿ ಲಭ್ಯವಾಗುವಂತಹ ಮಾಹಿತಿಗಳಿಗೆ ಸೀಮಿತವಾಗಿದೆ. ಆದರೆ ಇಂಟರ್ನೆಟ್ ಮಾಹಿತಿಗಳ ಓದೇ ಅಂತಿಮವಲ್ಲ ಎಂದು ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೇರಣಾ ಕೋಶ, ಉದ್ಯೋಗ ಭರವಸಾ ಕೋಶ, ಐಕ್ಯೂಎಸಿ ಮತ್ತು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಿಂದ ಹಮ್ಮಿಕೊಂಡಿದ್ದ “ಓದುವ ಹವ್ಯಾಸದ ಶ್ರೇಷ್ಠತೆ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮನೆಗಳಲ್ಲಿ ಪುಸ್ತಕ ಇಟ್ಟುಕೊಳ್ಳುವರು, ಓದುವವರು ಶ್ರೀಮಂತರೆಂಬ ಮಾತುಗಳಿದ್ದವು. ಈಗ ಪುಸ್ತಕ ಇಟ್ಟುಕೊಳ್ಳುವುದಿರಲಿ; ಅವುಗಳನ್ನು ಓದುವ ಹವ್ಯಾಸವೇ ಇಲ್ಲವಾಗುತ್ತಿದೆ. ಈಗಿನ ವಿದ್ಯಾರ್ಥಿಗಳು ಹಲವು ಕೆಟ್ಟ ಹವ್ಯಾಸಗಳಿಂದ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ತಪಸ್ಸಿನಂತೆ ರೂಢಿಸಿಕೊಂಡಿದ್ದೇ ಆದರೆ ಭವಿಷ್ಯ ಉಜ್ವಲವಾಗುತ್ತದೆ” ಎಂದು ಹೇಳಿದರು.
“ಕೇವಲ ಪರೀಕ್ಷಾ ದೃಷ್ಟಿಯಿಂದ ಓದುವ ಓದು ನಿಜವಾದ ಓದಲ್ಲ. ಓದಿದರೆ ಬುದ್ಧಿವಂತರರಾಗುತ್ತೇವೆ ಎಂಬುದು ಗೊತ್ತಿದೆ. ಆದರೂ ಪ್ರತಿ ತಿಂಗಳು ಮೊಬೈಲ್ಗೆ ಖರ್ಚು ಮಾಡುವ ಹಣವನ್ನು ಪುಸ್ತಕಗಳಿಗೆ ಹಾಕುವುದಿಲ್ಲ. ಜತೆಗೆ ಗ್ರಂಥಾಲಯಗಳಿಗಂತೂ ಕಾಲೇ ಇಡದಂತಹ ಪರಿಸ್ಥಿತಿ ಉದ್ಭವಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೇಂದ್ರ ಸರ್ಕಾರದ ಹೊಸ ನಿಯಮಗಳಿಂದ ಮನರೇಗಾ ಕಾರ್ಮಿಕರ ಹಕ್ಕು ದಮನ
ಪ್ರೊ.ಲೋಹಿಯಾ ಕೆಜೆಆರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್ ಎಫ್ ಅಯ್ಯನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣಾ ಕೋಶದ ಸಂಚಾಲಕ ಡಾ ಹನುಮಂತರಾಜು ಎನ್ ಬಿ, ಪ್ರಾಧ್ಯಾಪಕರಾದ ಡಾ. ರವಿ ಎಂ, ಡಾ. ಬಸವರಾಜ ಹುಗ್ಗಿ ಸೇರಿದಂತೆ ಇತರರು ಇದ್ದರು.