ನವೆಂಬರ್ 25 ರಿಂದ ಡಿಸೆಂಬರ್ 10ರ ನಡುವೆ ಪ್ರತಿ ವರ್ಷ ನಡೆಯುವ “ಲಿಂಗಾಧಾರಿತ ದೌರ್ಜನ್ಯದ ವಿರುದ್ಧದ 16 ದಿನಗಳ ಆಕ್ಟಿವಿಸಮ್” ಎಂಬ ಜಾಗತಿಕ ಅಭಿಯಾನದ ಭಾಗವಾಗಿ ಬೆಂಗಳೂರಿನ ನಯನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಕರ್ನಾಟಕ ರಾಜ್ಯಾದ್ಯಂತ ಲೈಂಗಿಕ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕಾರ್ಯನಿರ್ವಹಿಸುವ ಸಂಘಟನೆಯಾದ ‘ನಾವೆದ್ದು ನಿಲ್ಲದಿದ್ದರೆ’ ಲೈಂಗಿಕ ಹಿಂಸಾಚಾರದ ಕುರಿತು ‘ಒಮ್ಮೆ ಬದಲಾದರೆ?’ (If Change Happens?) ಸಂವಾದವನ್ನು ಏರ್ಪಡಿಸಿತು. 1991ರಲ್ಲಿ ವಿಶ್ವಸಂಸ್ಥೆ ಪ್ರಾರಂಭಿಸಿದ ಈ 14 ದಿನಗಳ ‘ಆಕ್ಟಿವಿಸಮ್’ (ಚಟುವಟಿಕೆ) ಲಿಂಗಾಧಾರಿತ ಹಿಂಸಾಚಾರದೆಡೆ ಜಾಗತಿಕ ಗಮನ ಸೆಳೆಯುವುದು ಮತ್ತು ಇಂತಹ ದೌರ್ಜನ್ಯವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದೆ.
ಇದನ್ನು ಓದಿದ್ದೀರಾ? ʼನಾವೆದ್ದು ನಿಲ್ಲದಿದ್ದರೆ- ಕರ್ನಾಟಕʼ ಸಂಘಟನೆಯಿಂದ ಹಾಸನ ಚಲೋಗೆ ಬೆಂಬಲ
ನಯನಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು ಸುಮಾರು 200 ಮಂದಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿರುವ ಸೌಮ್ಯಾ ರೆಡ್ಡಿ ಅವರು ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿದ್ದು ಕರ್ನಾಟಕ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ‘ಲೈಂಗಿಕ ದೌರ್ಜನ್ಯ: ನಿರ್ಭಯ, ಹೊಣೆಗಾರಿಕೆ ಮತ್ತು ಪರಿವರ್ತನೆ’ ಎಂಬ ವಿಚಾರದಲ್ಲಿ ಸಂವಾದವನ್ನು ನಡೆಸಲಾಯಿತು. ಪ್ರಸಿದ್ಧ ರಂಗಭೂಮಿ ಕಲಾವಿದೆ ಮಾಯಾ ರಾವ್ ಅವರು ‘ನಡಿಗೆ’ ಎಂಬ ಪ್ರದರ್ಶನವನ್ನು ನಡೆಸಿದರು. ಹಲವು ವರ್ಷಗಳಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಗುಂಪು ಹತ್ಯೆಗಳ ವಿರುದ್ಧ ಪ್ರದರ್ಶನಗಳನ್ನು ಮಾಡಿರುವ ಮಾಯಾ ರಾವ್ ಅವರು ‘ಒಮ್ಮೆ ಬದಲಾದರೆ?’ ಎಂಬ ಪ್ರಶ್ನೆಯನ್ನು ಎತ್ತಿ ತೋರಿಸುವ ವಿಭಿನ್ನ ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು. ಜಾತಿ, ವರ್ಗ ಮತ್ತು ಸಮುದಾಯಕ್ಕೆ ಸಂಬಂಧಿಸಿದ ಲಿಂಗಾಧಾರಿತ ಸಮಸ್ಯೆಗಳನ್ನು ಈ ಪ್ರಸ್ತುತಿ ಎತ್ತಿ ತೋರಿಸಿತು. ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಕೂಡಾ ಪ್ರದರ್ಶನ ಪ್ರಸ್ತುತ ಪಡಿಸಿತು.

ಪ್ರದರ್ಶನದ ನಂತರ ಲಿಂಗತ್ವ ಅಲ್ಪಸಂಖ್ಯಾತರು, ಚೌಟ್ರಿ, ಗಾರ್ಮೆಟ್ ಮೊದಲಾದವು ಕಡೆಗಳಲ್ಲಿ ಕೆಲಸ ಮಾಡುವವರು ಮತ್ತು ಮಹಿಳಾ ಚಳುವಳಿಯ ಪ್ರತಿನಿಧಿಗಳು ಸೇರಿದಂತೆ ಹಲವಾರು ಸಮುದಾಯಗಳ ಮಹಿಳಾ ಪ್ರತಿನಿಧಿಗಳು ಪ್ರದರ್ಶನದ ಬಗ್ಗೆ ಮತ್ತು ತಮ್ಮ ಜೀವನದ ಬಗ್ಗೆ ಮಾತನಾಡಿದರು.
ಸ್ಲಂ ಮಹಿಳಾ ಸಂಘಟನೆಯ ಮಂಜುಳಾ ಅವರು ಮಹಿಳಾ ಕಾರ್ಮಿಕರ ಪರಿಸ್ಥಿತಿ ಕುರಿತು ಮಾತನಾಡಿದರು. ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯಗಳು ಇಲ್ಲದ, ಮಲಗಲು ಸರಿಯಾದ ವ್ಯವಸ್ಥೆಗಳಿಲ್ಲದ, ಸಂಪೂರ್ಣವಾಗಿ ಅಸುರಕ್ಷಿತವಾದ ಸ್ಥಳದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.
ಮಹಿಳಾ ಮತ್ತು ಮಾನವ ಹಕ್ಕುಗಳ ಚಳವಳಿಯ ಕಾರ್ಯಕರ್ತೆಯಾಗಿಯೂ ಆಗಿರುವ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಪ್ರತಿನಿಧಿಯಾದ ನಸ್ರೀನ್ ಮಿಠಾಯಿ ಅವರು ತನ್ನ ತಾಯಿಗಾಗುತ್ತಿದ್ದ ಕೌಟುಂಬಿಕ ದೌರ್ಜನ್ಯದ ಬಗ್ಗೆ, ಮನೆಯಲ್ಲಿಯೇ ತಮ್ಮ ಹೋರಾಟವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಭಾವುಕರಾಗಿ ವಿವರಿಸಿದರು.
ಸಾಧನಾ ಮಹಿಳಾ ಸಂಘದ ಗೀತಾ, “ಓರ್ವ ಯುವತಿಯ ತಾಯಿ ಲೈಂಗಿಕ ಕಾರ್ಯಕರ್ತೆಯಾಗಿದ್ದರು. ಆ ಯುವತಿ ತನ್ನ ತಾಯಿಯ ಘನತೆ ಮತ್ತು ಹಕ್ಕುಗಳಿಗಾಗಿ ಹೋರಾಟ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಳು. ಆದರೆ, ಆಕೆ ತನ್ನ ಮೇಲಾಗುತ್ತಿದ್ದ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡಿದರು. ಸ್ಲಮ್ನಲ್ಲಿ ನೂರಾರು ಮಕ್ಕಳಿಗೆ ಶಿಕ್ಷಣ ಕಲಿಸುವ ಸಶಕ್ತತೆಯಾಗಿ ಬೆಳೆದಳು” ಎಂದು ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ ‘ಸ್ವತಂತ್ರ’ದ ಮುಖಂಡೆ ಸನಾ ಅವರು ತಾವು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯಾಗಿ ಮನೆಯಲ್ಲಿ, ಶಾಲೆಯಲ್ಲಿ ಮತ್ತು ಸಮಾಜದಲ್ಲಿ ಹೇಗೆ ಹಿಂಸೆಯನ್ನು ಅನುಭವಿಸಿದರು ಎಂಬುದರ ಬಗ್ಗೆ ವಿವರಿಸಿದರು. ಸ್ತ್ರೀಯರು ಪಿತೃಪ್ರಭುತ್ವದ ನಿಯಂತ್ರಣ ಮತ್ತು ಹಿಂಸೆಗೆ ಒಳಪಡುತ್ತಾರೆ ಎಂಬ ವಾಸ್ತವದ ಹೊರತಾಗಿಯೂ ಅವರು ಮಹಿಳೆಯಾಗಲು ಏಕೆ ಆಯ್ಕೆ ಮಾಡಿಕೊಂಡರು ಎಂಬುದರ ಕುರಿತು ಮಾತನಾಡಿದರು. “ಮಹಿಳೆಯಾಗಿರುವುದು ನಾಚಿಕೆಗೇಡಿನ ಸಂಗತಿಯಲ್ಲ – ವಾಸ್ತವವಾಗಿ ಅಧಿಕಾರ, ಹೆಮ್ಮೆ, ಸ್ವಾಭಿಮಾನ ಮತ್ತು ಘನತೆ. ಸಮಾಜದಿಂದ ಬದಲಾವಣೆಯನ್ನು ಬಯಸುತ್ತಿರುವ ನಾವು ಸ್ವಯಂ ನಿರ್ಧಾರದಿಂದ ಹೆಣ್ಣಾಗಿ ಬದಲಾಗಿದ್ದೇನೆ” ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರಿಗೆ ಫೆಬ್ರವರಿಯಲ್ಲಿ ನಡೆದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಕಾರ್ಯಕ್ರಮದಲ್ಲಿ ರಚಿಸಲಾದ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಾಯಿತು.

ಹಕ್ಕೊತ್ತಾಯ ಪತ್ರವನ್ನು ಸ್ವೀಕರಿಸಿದ ಸೌಮ್ಯಾ ರೆಡ್ಡಿ ಅವರು, ‘ನಾವೆದ್ದು ನಿಲ್ಲದಿದ್ದರೆ’ ಪ್ರಸ್ತಾಪಿಸಿದ ಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. ಮಹಿಳಾ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ಮತ್ತು ಲಿಂಗಾಧಾರಿತ ಹಿಂಸಾಚಾರದ ವಿರುದ್ಧವಾಗಿ ಹೋರಾಡುವ ಸಂಘಟನೆಗಳೊಂದಿಗೆ ಶೀಘ್ರವೇ ಸಮಗ್ರ ಸಮಾಲೋಚನೆಗೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
