ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತನಗಾವುದೇ ಸಚಿವ ಸ್ಥಾನ ದಕ್ಕದ ಕಾರಣ ಶಿವಸೇನೆಯ ಏಕನಾಥ್ ಶಿಂದೆ ಬಣದ ಶಾಸಕರೊಬ್ಬರು ಶಿವಸೇನೆಯ ಎಲ್ಲಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಶಿವಸೇನೆಯ ಉಪಾಧ್ಯಕ್ಷ ಮತ್ತು ವಿದರ್ಭದ ಪಕ್ಷದ ಸಂಯೋಜಕರಾಗಿದ್ದ ನರೇಂದ್ರ ಭೋಂಡೇಕರ್ ಬಿಜೆಪಿ ನೇತೃತ್ವದ ಮೈತ್ರಿಕೂಟ ಮಹಾಯುತಿಯ ಸರ್ಕಾರದಲ್ಲಿ ತನಗೆ ಸಚಿವ ಸ್ಥಾನ ಲಭಿಸದ ಕಾರಣ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಸೇನೆಯಲ್ಲಿರುವ ತನ್ನ ಎಲ್ಲಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಭಂಡಾರ-ಪಾವನಿ ವಿಧಾನಸಭಾ ಕ್ಷೇತ್ರದಲ್ಲಿರುವ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಸಿಎಂ ಫಡ್ನವೀಸ್ | ಮೇಯರ್ನಿಂದ ಮುಖ್ಯಮಂತ್ರಿವರೆಗೆ- ರಾಜಕೀಯ ಪ್ರಯಾಣ
ಶಿವಸೇನೆಯಿಂದ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದ ಭೋಂಡೇಕರ್ ಅವರಿಗೆ ಈ ಬಾರಿ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ಸಚಿವ ಸ್ಥಾನ ನೀಡಲಾಗಿಲ್ಲ.
ಈ ಬಗ್ಗೆ ಹಿರಿಯ ನಾಯಕರಾದ ಉದಯ್ ಸಾಮಂತ್ ಮತ್ತು ಏಕನಾಥ್ ಶಿಂದೆ, ಅವರ ಪುತ್ರ ಶ್ರಿಕಾಂತ್ ಶಿಂದೆ ಮೊದಲಾದವರುಗಳನ್ನು ಪ್ರಶ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಭೋಂಡೇಕರ್ ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ನೂತನ ಸಂಪುಟದಲ್ಲಿ ಉದಯ್ ಸಮಂತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಬಿಜೆಪಿ 19 ಸಚಿವ ಸ್ಥಾನ ಪಡೆದರೆ, ಶಿಂದೆ ನೇತೃತ್ವದ ಶಿವಸೇನೆ 11 ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 9 ಸಚಿವ ಸ್ಥಾನಗಳನ್ನು ಪಡೆದಿವೆ.
