ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ದಿನಗಳ ಕಾಲ ಸಿಐಟಿಯು ಆಹೋರಾತ್ರಿ ಧರಣಿ
ಅಂಗನವಾಡಿ ನೌಕರರಿಗೆ ನೀಡಿದ್ದ 15 ಸಾವಿರ ಕನಿಷ್ಠ ವೇತನದ ಭರವಸೆಯನ್ನು ಸರಕಾರ ಕೂಡಲೇ ಈಡೇರಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚುಟಿ ಹಣವನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಸುಮಾರು 3 ಸಾವಿರ ಅಂಗನವಾಡಿ ಕಾರ್ಯಕರ್ತರೊಂದಿಗೆ ಆಹೋರಾತ್ರಿ ಧರಣಿ ನಡೆಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಸರಕಾರ ತನ್ನ ಪ್ರಣಾಳಿಕೆಯಲ್ಲಿ
ಅಂಗನವಾಡಿ ನೌಕರರಿಗೆ 15 ಸಾವಿರ ಮತ್ತು ಸಹಾಯಕರಿಗೆ 10 ಸಾವಿರ ವೇತನ ನೀಡುವ ಭರವಸೆಯನ್ನು ನೀಡಿತ್ತು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಇದುವರೆಗೆ ಕೊಟ್ಟ ಮಾತಿನಂತೆ ಭರವಸೆಯನ್ನು ಈಡೇರಿಸಿಲ್ಲ. ಇದೀಗ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈಗಲಾದರೂ ಸರಕಾರ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ನೆಹರೂ ನಿಂದಿಸಿದರೆ ಅಲ್ಪರು ಮಹಾನ್ ನಾಯಕರಾಗಲು ಸಾಧ್ಯವೇ?

225 ಮಂದಿಗೆ ಎನ್.ಪಿ.ಎಸ್ ಕಾರ್ಡ್ ಇಲ್ಲ :
ಸ್ಥಳೀಯವಾಗಿ ಅಂಗನವಾಡಿ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲಾಖೆ ಕೆಲಸಗಳ ಜತೆಗೆ ಇಲಾಖೇತರ ಕೆಲಸಗಳಲ್ಲೂ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. ಇಲಾಖೇತರ ಕೆಲಸಗಳಿಗೆ ಸರಕಾರ ಸೂಕ್ತ ಗೌರವಧನ ಕೊಡಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯ 225 ಅಂಗನವಾಡಿ ನೌಕರರಿಗೆ ಎನ್.ಪಿಎಸ್ ಕಾರ್ಡ್ ಬಂದಿಲ್ಲ. ಎನ್.ಪಿಎಸ್ ಕಾರ್ಡ್ ಇಲ್ಲವಾದರೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಸಮಸ್ಯೆ ಬರೆಹರಿದಿಲ್ಲ. ಆದ್ದರಿಂದ ಕೂಡಲೇ ಸರಕಾರ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಬರೆಹರಿಸಬೇಕು. ಇಲ್ಲವಾದಲ್ಲಿ ಫೆಬ್ರವರಿ ತಿಂಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅವೈಜ್ಞಾನಿಕ ಆಹಾರ ವಿತರಣೆಗೆ ಆಕ್ರೋಶ :
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ ರತ್ನಮ್ಮ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಅಂಗನವಾಡಿ ನೌಕರರನ್ನು 3 ಮತ್ತು 4 ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು. ಇಡೀ ರಾಜ್ಯಕ್ಕೆ. ಸರಕಾರ ಅವೈಜ್ಞಾನಿಕವಾಗಿ ಆಹಾರ ವಿತರಣೆ ಮಾಡುತ್ತಿದೆ. ಸರಕಾರದಿಂದ ವಿತರಣೆಯಾಗುತ್ತಿರುವ ಆಹಾರವನ್ನು ಮಕ್ಕಳು ಸೇವನೆ ಮಾಡುತ್ತಿಲ್ಲ. ಈ ಹಿಂದಿನಂತೆ ಪ್ರದೇಶವಾರು ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು.
ಸರಕಾರ ನಿವೃತ್ತ ಅಂಗನವಾಡಿ ನೌಕರರಿಗೆ ಇಡುಗಂಟು ನೀಡುವ ಭರವಸೆ ನೀಡಿತ್ತು. ಆದರೆ, ಇದುವರೆಗೆ 2011 ಮತ್ತು 2023ರ ನಂತರ ನಿವೃತ್ತರಾದ ನೌಕರರಿಗೆ ಗ್ರಾಚುಟಿ ಹಣ ಬಿಡುಗಡೆಯಾಗಿಲ್ಲ. ಇದರಿಂದ ನೌಕರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಬಜೆಟ್ ಮುಗಿದು ಎರಡನೇ ಬಜೆಟ್ ಬಂದರೂ ಸರಕಾರ ಚಕಾರವೆತ್ತುತ್ತಿಲ್ಲ. ಇದೆಲ್ಲಾ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲೂ ಎರಡು ದಿನಗಳ ಕಾಲ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಿಸಿಲನ್ನು ಲೆಕ್ಕಿಸದೆ ಧರಣಿ :
ಪ್ರತಿಭಟನೆ ಹಿನ್ನೆಲೆ ಜಿಲ್ಲೆಯ 1280 ಅಂಗನವಾಡಿಗಳನ್ನು ಬಂಧ್ ಮಾಡಿ ಧರಣಿಗೆ ಬಂದಿದ್ದ ಸುಮಾರು 3000ಕ್ಕೂ ಅಧಿಕ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಆಡಳಿತ ಸರಕಾರ ಕೂಡಲೇ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಗಟ್ಟಿ ಧ್ವನಿಯಲ್ಲಿ ಒಕ್ಕೊರಲಿನ ಧಿಕ್ಕಾರ ಕೂಗಿದರು.
ರಾತ್ರಿ ಇಲ್ಲೇ ಮಲಗುತ್ತೇವೆ, ಯಾವುದೇ ರಕ್ಷಣೆ ಕೊಟ್ಟಿಲ್ಲ :
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡು ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಹೋರಾತ್ರಿ ಧರಣೆ ನಡೆಸುತ್ತಿದ್ದೇವೆ. ರಾತ್ರಿಯಿಡೀ ಇಲ್ಲೇ ಮಲಗುತ್ತೇವೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಮಗೆ ಯಾವುದೇ ರಕ್ಷಣೆ ಕೊಟ್ಟಿಲ್ಲ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ವಿಪ್ ಉಲ್ಲಂಘನೆ; ಮಟಮಪ್ಪ, ವೀಣಾ ರಾಮು ಜೆಡಿಎಸ್ನಿಂದ ಉಚ್ಚಾಟನೆ
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಭಾಗ್ಯಮ್ಮ, ಮಂಜುಳ, ಶುಭಾ, ಉಮಾ, ಗೀತಾ, ಅಶ್ವತ್ಥಮ್ಮ, ಸೌಭಾಗ್ಯಮ್ಮ, ಪದ್ಮ ಸೇರಿದಂತೆ ಸಾವಿರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು.
