ಅಂಬೇಡ್ಕರ್ ಅವರ ಹೆಸರು ಹೆಚ್ಚು ಹೆಚ್ಚು ಬಾರಿ ಹೇಳುವುದು ವ್ಯಸನವಾಗಿದೆ ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೃಹ ಸಚಿವ ಅಮಿತ್ ಶಾ ನಿಂದಿಸಿದ್ದಾರೆ. ಆ ಮೂಲಕ ತಮ್ಮ ಫ್ಯಾಸಿಸ್ಟ್ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಕರ್ನಾಟಕದ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಂಬೇಡ್ಕರ್ ಹೆಸರು ಹೇಳುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಅಂಬೇಡ್ಕರ್ ಈ ದೇಶಕ್ಕೆ ಮಾದರಿ ಸಂವಿಧಾನ ರೂಪಿಸಿದವರು. ಹಿಂದುಳಿದ, ಅಲ್ಪಸಂಖ್ಯಾತರ ಧ್ವನಿ ಆಗಿದ್ದವರು. ಅವರ ಬಗ್ಗೆ ಇಷ್ಟು ಕೀಳು ಭಾವನೆ ಇಟ್ಟುಕೊಳ್ಳುವುದು ಈ ದೇಶದ ಗೃಹ ಮಂತ್ರಿಗೆ ಶೋಭೆಯಲ್ಲ” ಎಂದು ಕಿಡಿಕಾರಿದ್ದಾರೆ.
“ಅಂಬೇಡ್ಕರ್ ಹೆಸರು ಕೇಳಲು ಕೋಮುವ್ಯಸನಿಗಳಿಗೆ ಕರ್ಕಶವಾಗಬಹುದು. ಆದರೆ, ಇಲ್ಲಿನ ದಲಿತ, ಹಿಂದುಳಿದ, ದುರ್ಬಲ ವರ್ಗಗಳ ಹಕ್ಕುಗಳಿಗೆ ಹೋರಾಡಿದ ಮಹನೀಯರಾದ ಅಂಬೇಡ್ಕರ್ ಅವರ ಸೇವೆ ಸ್ಮರಣೀಯ. ಅಂಬೇಡ್ಕರ್ ಹೆಸರನ್ನು ನಾವು ಎಂದಿಗೂ ಸ್ಮರಿಸುತ್ತೇವೆ. ಅದು ನಿಮಗೆ (ಅಮಿತ್ ಶಾ) ವ್ಯಸನದಂತೆ ಕಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಂಬೇಡ್ಕರ್ ಅವರನ್ನು ನಿಂದಿಸುವ ಮೂಲಕ ಇಡೀ ದೇಶದ ನಾಗರಿಕರ ಮನಸಿಗೆ ಘಾಸಿಯುಂಟು ಮಾಡಿರುವ ಗೃಹಮಂತ್ರಿ ಅಮಿತ್ ಶಾ ಕೂಡಲೇ ಕ್ಷಮೆಯಾಚನೆ ಮಾಡಬೇಕು. ತಮ್ಮ ಹೇಳಿಕೆಗಳನ್ನು ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.