ಸಂಸತ್ ಆವರಣದಲ್ಲಿ ಸಂಸದರ ಪ್ರತಿಭಟನೆಯ ವೇಳೆ ನಡೆದ ತಳ್ಳಾಟದಲ್ಲಿ ಹಲ್ಲೆ, ಪ್ರಚೋದನೆ ನೀಡಿದ ಆರೋಪದ ಮೇಲೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಸಂಸದರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ನೋವುಂಟು ಮಾಡುವುದು), 117 (ಗಾಯ ಮಾಡುವುದು), 125 (ಇತರರ ಜೀವಕ್ಕೆ ಅಪಾಯ),131 (ಅಪರಾಧ ಶಕ್ತಿ ಬಳಕೆ), 351 (ಬೆದರಿಕೆ) ಆರೋಪಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಂ 109, 115, 117, 125, 131 ಮತ್ತು 351 ಅಡಿಯಲ್ಲಿ ಬಿಜೆಪಿ ದೂರು ದಾಖಲಿಸಿದೆ. ಸೆಕ್ಷನ್ 109 ಕೊಲೆ ಯತ್ನದ ವಿಭಾಗವಾಗಿದೆ, ಸೆಕ್ಷನ್ 117 ಉದ್ದೇಶಪೂರ್ವಕವಾಗಿ ಗಂಭೀರ ಗಾಯವನ್ನು ಉಂಟುಮಾಡುತ್ತದೆ. ಆದರೆ, ದೆಹಲಿ ಪೊಲೀಸರು ರಾಹುಲ್ ಗಾಂಧಿ ವಿರುದ್ಧ ಬಿಎನ್ಎಸ್ನ ಸೆಕ್ಷನ್ 109ರ ಅಡಿಯಲ್ಲಿ ಕೊಲೆ ಯತ್ನದ ಅಡಿಯಲ್ಲಿ ಪ್ರಕರಣ ದಾಖಲಿಸದಿರಲು ನಿರ್ಧರಿಸಿದ್ದಾರೆ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಆರೋಪದ ಮೇಲೆ ಗುರುವಾರ ಸಂಸತ್ ಭವನದೊಳಗೆ ವಿರೋಧ ಪಕ್ಷದ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಅಂಬೇಡ್ಕರ್’- ಅಮಿತ್ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು
ಇಂಡಿಯಾ ಒಕ್ಕೂಟದ ಸಂಸದರು ಸಂಸತ್ನ ಮುಖ್ಯ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಬಿಜೆಪಿ ಸಂಸದರು ಆಕ್ರಮಿಸಿಕೊಂಡಿರುವ ಪ್ರದೇಶದ ಮೂಲಕ ಸಂಸತ್ತಿಗೆ ಪ್ರವೇಶಿಸಲು ಇಂಡಿಯಾ ಒಕ್ಕೂಟದ ಸದಸ್ಯರು ಪ್ರಯತ್ನಿಸಿದರು. ಇದರಿಂದ ತಳ್ಳಾಟ ಉಂಟಾಯಿತು.
ಘಟನೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದರು. ಬಳಿಕ ಸಂಸತ್ ಆವರಣದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಬಿಜೆಪಿ ಸಂಸದ ಮುಖೇಶ್ ರಜಪೂತ್ ಕೂಡ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿರಿಯ ಸಂಸದರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ರಾಹುಲ್ ಗಾಂಧಿ ಆ ಆರೋಪವನ್ನು ನಿರಾಕರಿಸಿದ್ದಾರೆ.