2015-16ರಿಂದ 2022-23ನೇ ಸಾಲಿನವರೆಗೆ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಸಂಗ್ರಹಿಸಲಾಗಿರುವ ಒಟ್ಟು 14.55 ಕೋಟಿ ಹಣವನ್ನು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮನಸೋ ಇಚ್ಛೆ ಖರ್ಚು ಮಾಡಿದ್ದಾರೆ. ಡಿಎಂಎಫ್ಟಿ ಹಣವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದ್ದು, ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಡಾ.ಮಂಜುನಾಥ್ ಆರ್. ಹುಣಸೀಕೋಟೆ ಆರೋಪಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ 26 ಗ್ರಾಮಗಳು, ಕೋಲಾರ ತಾಲ್ಲೂಕಿನ 14 ಗ್ರಾಮಗಳು, ಮುಳಬಾಗಿಲು ತಾಲೂಕಿನ 9 ಗ್ರಾಮಗಳು ಮತ್ತು ಶ್ರೀನಿವಾಸಪುರದ 1 ಹಳ್ಳಿ ಸೇರಿದಂತೆ ಒಟ್ಟು 50 ಹಳ್ಳಿಗಳನ್ನು ಗಣಿಬಾಧಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗಾಗಿ 2015-16 ರಿಂದ 2022-23ನೇ ಸಾಲಿನವರೆಗೆ ಒಟ್ಟು 14.55 ಕೋಟಿ ಹಣ ಸಂಗ್ರಹಿಸಲಾಗಿದೆ. ಸದರಿ ಡಿಎಂಎಫ್ಟಿ ಹಣವನ್ನು ನೇರವಾಗಿ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕಿದ್ದು, ಈ ಹಣವನ್ನು ಜಿಲ್ಲಾಧಿಕಾರಿಗಳು ವಿವಿಧ ಕಾಮಗಾರಿಗಳ ಹೆಸರಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.

ಗಣಿಭಾದಿತ ಪ್ರದೇಶಗಳನ್ನು ಹೊರತುಪಡಿಸಿ ಮುಂದುವರಿದ ಬಡಾವಣೆಗಳ ರಸ್ತೆಗಳು ಮತ್ತು ವಿವಿಧ ಕಾಮಗಾರಿಗಳಿಗೆ ಡಿಎಂಎಫ್ಟಿ ಹಣ ಬಳಸಿದ್ದಾರೆ. ಜೊತೆಗೆ ತಾವೇ ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರಕ್ಕೆ ವಿವಿಧ ಕಾಮಗಾರಿಗಳ ಹೆಸರಲ್ಲಿ ಒಟ್ಟು 7 ಕೋಟಿ 74.5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಡಿ.ಎಂ.ಎಫ್.ಟಿ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದಲೇ ಈ ಕಾಮಗಾರಿಗಳಿಗೆ ಅನುಮೋದನೆ ಕೊಡಿಸಿದ್ದಾರೆ. ಈ ಎಲ್ಲಾ ಕಾಮಗಾರಿಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಹೋರಾಟಗಾರ ಹಾಗೂ ಗುತ್ತಿಗೆದಾರ ಡಿ.ಮೌನೇಶ್ ಮಾತನಾಡಿ, ಜಿಲ್ಲಾ ಪೋಲಿಸ್ ಕಛೇರಿಯ ಶೌಚಾಲಯ, ಸಭಾಂಗಣ ಕೊಠಡಿ, ಇತರೆ ದುರಸ್ತಿ ಕಾಮಗಾರಿಗಳಿಗೆ ಒಟ್ಟು 39 ಲಕ್ಷದ 50 ಸಾವಿರ ರೂ. ಮಂಜೂರಾಗಿದ್ದು(2024-25 ನೇ ಸಾಲಿನ ಲೆಕ್ಕ ಶೀರ್ಷಿಕೆ 2055-00-113-0-04-200), ಆದರೆ ಇದೇ ಕಾಮಗಾರಿಗೆ ಡಿ.ಎಂ.ಎಫ್.ಟಿ ಅನುದಾನದಲ್ಲಿ 25 ಲಕ್ಷ ರೂ. ಹಣವನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಮಂಜೂರು ಮಾಡಿದ್ದಾರೆ. ಕೋಲಾರ ಜಿಲ್ಲಾ ಕಛೇರಿಗಳ ಸಂಕೀರ್ಣ ಕಟ್ಟಡದ ಒಳಾಂಗಣ ವಿನ್ಯಾಸ ಕಾಮಗಾರಿಗಳಿಗೆ ಒಟ್ಟು 5 ಕೋಟಿ 91 ಲಕ್ಷ ರೂ. ಮಂಜೂರಾಗಿದೆ(ಸರ್ಕಾರದ ಆದೇಶ ಸಂಖ್ಯೆ ಕಂಇ03 ಡಬ್ಲ್ಯೂ ಬಿಆರ್2023(2) ಬೆಂಗಳೂರು ದಿ:15/11/2023). ಆದರೆ ಜಿಲ್ಲಾಧಿಕಾರಿಗಳು ಡಿ.ಎಂ.ಎಫ್.ಟಿ ಹಣದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮತ್ತು ಉಪವಿಭಾಗಾಧಿಕಾರಿಗಳ ಕಛೇರಿ ಮತ್ತು 6 ತಾಲ್ಲೂಕು ಕಛೇರಿಗಳ ದುರಸ್ತಿ ಮತ್ತು ಪೀಠೋಪಕರಣಗಳಿಗಾಗಿ ಒಟ್ಟು 1 ಕೋಟಿ 65 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಒಂದೇ ಕಾಮಗಾರಿ, ಆದರೆ ಎರಡು ಬಾರಿ ಬಿಲ್ಲುಗಳನ್ನು ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಸಿ ಟಿ ರವಿಯಂಥವರಿಗೆ ಮಹಿಳೆಯರನ್ನು ಅಪಮಾನಿಸೋದು ಮನುವಾದಿ ವ್ಯಸನ
ಸರ್ಕಾರಿ ಪದವಿ ಕಾಲೇಜು (ಬಾಲಕರ) ದುರಸ್ತಿಗೆ 60 ಲಕ್ಷ ಹಣವನ್ನು ಡಿ.ಎಂ.ಎಫ್.ಟಿ ಹಣದಲ್ಲಿ ಬಿಡುಗಡೆ ಮಾಡಲಾಗಿದ್ದು, ವಾಸ್ತವವಾಗಿ ಚುನಾವಣೆ ಸಮಯದಲ್ಲಿ ಚುನಾವಣೆ ಹಣದಲ್ಲಿ ಕಾಲೇಜಿಗೆ ಸುಣ್ಣಬಣ್ಣ, ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ಮಾಡಿರುತ್ತಾರೆ. ಜೊತೆಗೆ ಗೋಡೆ ಕಾಮಗಾರಿಯು ನಿಕಟಪೂರ್ವ ಪೋಲಿಸ್ ವರಿಷ್ಠಾಧಿಕಾರಿಗಳು ದಾನಿಗಳ (ಸಿ.ಎಸ್.ಆರ್ ಅನುದಾನ) ಹಣದಲ್ಲಿ ಕಾಮಗಾರಿ ಮಾಡಿಸಿರುತ್ತಾರೆ. ಇದೇ ರೀತಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯ ವಿವಿಧ ಇಲಾಖೆಗಳಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿರುವ ಹಾಗೆ ಬಿಲ್ಲುಗಳನ್ನು ಮಾಡಿಕೊಂಡಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಸದರಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ತನಿಖೆಗೆ ಆದೇಶಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.