ದೇಶದ ಇತಿಹಾಸ, ಚರಿತ್ರೆ ತಿಳಿಯದ, ಸಂಸ್ಕೃತಿ ಮತ್ತು ಸಹಬಾಳ್ವೆಯ ಪರಿಚಯವಿಲ್ಲದ ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಅಂಬೇಡ್ಕರ್ ಅವರಿಗೆ ನಿಂದನೆಯಾಗುವ ರೀತಿಯಲ್ಲಿ ಮಾತನಾಡಿರುವುದರಿಂದ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಪ್ರತಿಭಟನೆ ನಡೆಸಿತು.
ನಗರದ ಅಶೋಕ ರಸ್ತೆಯ ಪಂಪಾಪತಿ ಭವನದಿಂದ ಬೆಳಿಗ್ಗೆ 11:30ಕ್ಕೆ ಹೊರಟ ಪ್ರತಿಭಟನಾಕಾರರು ಗಾಂಧಿ ಸರ್ಕಲ್ಗೆ ತೆರಳಿ ಬಹಿರಂಗ ಸಭೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ “ಗೃಹಮಂತ್ರಿ ಅಮಿತ್ ಶಾಗೆ ದೇಶದ ಇತಿಹಾಸ, ಚರಿತ್ರೆ ತಿಳಿದಿಲ್ಲ. ಅವರು ದೇಶದ ಸಂಸ್ಕೃತಿ ಮತ್ತು ಸಹಬಾಳ್ವೆಯ ಪರಿಚಯವಿಲ್ಲದ ಹಾಗೂ ವ್ಯಾಪಾರಿ ಮನೋಭಾವ ಹೊಂದಿರುವ ವ್ಯಕ್ತಿ. ಅವರು ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ಹೇಳಿರುವ ಮಾತು ಖಂಡನೀಯ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಸಂಸತ್ನಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾರನ್ನು ಕೇಂದ್ರ ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಉಮೇಶ್ ಆವರಗೆರೆ ಮಾತನಾಡಿ, “ಅಂಬೇಡ್ಕರ್ ಎಂದರೆ ವ್ಯಸನವೆಂದು ಹೇಳಿರುವ ಅಮಿತ್ ಶಾ ಮೂರ್ಖರಂತೆ ಮಾತನಾಡಿದ್ದಾರೆ. ವಿಧಾನ ಪರಿಷತ್ನಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಮಹಿಳೆ ಎನ್ನುವ ಗೌರವವನ್ನೂ ಕೊಡದೆ ಕೀಳುಭಾಷೆ ಬಳಸಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇಂತಹ ಕೋಮುವಾದ, ದ್ವೇಷದ ಮನೋಭಾವ ಹೊಂದಿರುವ ಸಿ ಟಿ ರವಿಯನ್ನು ಕರ್ನಾಟಕ ವಿಧಾನ ಪರಿಷತ್ ಸ್ಥಾನದಿಂದ ಹಾಗೂ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹ
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಜಯಣ್ಣ, ಜಿಲ್ಲಾ ಖಜಾಂಚಿ ಮೊಹಮ್ಮದ್ ರಫೀಕ್, ಮುಖಂಡರುಗಳಾದ ಮಹಮ್ಮದ್ ಭಾಷಾ ಜಗಳೂರು, ಸಿ ರಮೇಶ್, ಶೇಖರ ನಾಯಕ, ಸುರೇಶ್, ತಿಪ್ಪೇಶ್, ಜೀವನ್, ದೇವೇಂದ್ರಪ್ಪ, ಸರೋಜಾ, ನಿಟುವಳ್ಳಿ ಬಸವರಾಜ್, ಕೆ ಜಿ ಶಿವಮೂರ್ತಿ, ತಿಮ್ಮಣ್ಣ, ಹೆಚ್ ಎಸ್ ಚಂದ್ರು, ಮರಿಯಪ್ಪ ರಂಗನಾಥ್ ಹಾಗೂ ಕಾರ್ಯಕರ್ತರು ಇದ್ದರು.