ಮಹಾನ್ ಮಾನವತಾವಾದಿ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಅಹಿಂದ ಸಂಘಟನೆಗಳ ಒಕ್ಕೂಟ ಇದೇ ಡಿಸೆಂಬರ್ 28ರಂದು ವಿಜಯಪುರ ಬಂದ್ಗೆ ಕರೆ ನೀಡಿದೆ ಎಂದು ಒಕ್ಕೂಟದ ನಾಯಕ ಹಾಗೂ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನೊಂದವರ ಧ್ವನಿ, ಶೋಷಿತರ ಧ್ವನಿಯಾದ ಡಾ. ಅಂಬೇಡ್ಕರ್ ಅವರು ಇಡೀ ಮನುಕುಲಕ್ಕೆ ಆದರ್ಶಮಯ ವ್ಯಕ್ತಿ. ಇಂತಹ ಮಹಾನ್ ಜ್ಞಾನಿಯ ಬಗ್ಗೆ ಕೇಂದ್ರ ಸಚಿವ ಸ್ಥಾನದಲ್ಲಿರುವ ವ್ಯಕ್ತಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆಂದು ಹೇಳುತ್ತಿದ್ದ ಬಿಜೆಪಿ ಈಗ ಇನ್ನೊಂದು ಪ್ರಯೋಗದ ರೀತಿಯಲ್ಲಿ ಡಾ. ಅಂಬೇಡ್ಕರ್ ಕುರಿತು ಅಪಮಾನಕಾರಿ ಹೇಳಿಕೆ ನೀಡಿದೆ. ಸಂವಿಧಾನ” ಎಂದು ಆತಂಕ ವ್ಯಕ್ತಪಡಿಸಿದರು.
“ಸಂಘ ಪರಿವಾರದವರು ಡಾ. ಅಂಬೇಡ್ಕರ್ ಅವರ ಬಗ್ಗೆ ಮೊದಲಿನಿಂದಲೂ ಟೀಕೆ ಮಾಡುತ್ತ ಬಂದಿದ್ದು, ಈಗ ಬಿಜೆಪಿ ಇದನ್ನು ಮುಂದುವರೆಸಿಕೊಂಡು ಬಂದಿದೆ. ಆರ್ಎಸ್ಎಸ್ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನೂ ಕೂಡಾ ಇರಿಸಿಲ್ಲ. ಅಮಿತ್ ಶಾ ರಾಜೀನಾಮೆ ಕೊಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಈ ಬಂದ್ ಕರೆಗೆ ಹಲವಾರು ಸಂಘಟನೆಗಳು ಸಾಥ್ ನೀಡಿವೆ” ಎಂದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, “ಶ್ರೇಷ್ಠ ಸಂವಿಧಾನ ರಚಿಸಿದ ಮಹಾನುಭಾವನಿಗೆ ಈ ರೀತಿ ಅಪಮಾನ ಮಾಡಿರುವುದು ನೋವಿನ ಸಂಗತಿ. ಹಾಗಾಗಿ ಸಿದ್ದೇಶ್ವರ ದೇವಾಲಯದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಎಲ್ಲ ಸಂಘ-ಸಂಸ್ಥೆಗಳು, ಶಾಲೆ -ಕಾಲೇಜುಗಳು, ವ್ಯಾಪಾರ- ವಹಿವಾಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಸಾಥ್ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಪಘಾತದಲ್ಲಿ ಮೃತ ಯೋಧರಿಗೆ ಸಿಎಂ ಅಂತಿಮ ಗೌರವ, ಸರ್ಕಾರದಿಂದ ನೆರವು ಘೋಷಣೆ
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, “ಕ್ರಿಮಿನಲ್ ಹಿನ್ನೆಲೆಯಿಂದ ಬಂದ ವ್ಯಕ್ತಿಯನ್ನು ದೇಶದ ಗೃಹ ಸಚಿವನನ್ನಾಗಿ ನಾವು ಒಪ್ಪಿಕೊಂಡಿದ್ದೇ ಮೊದಲ ದುರಂತ. ಅಂತಹ ವ್ಯಕ್ತಿಯಿಂದ ಇಂತಹ ಶಬ್ದಗಳನ್ನಷ್ಟೇ ನಿರೀಕ್ಷಿಸಲು ಸಾಧ್ಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಡಾ.ಅಂಬೇಡ್ಕರ ಅವರ ಬಗ್ಗೆ ಗೌರವವಿದ್ದರೆ ಬಿಜೆಪಿಯವರೂ ಕೂಡಾ ಕೂಡಾ ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ಕೋರಿದರು.
ಮುಖಂಡರಾದ ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ, ರಮೇಶ ಆಸಂಗಿ, ಎಂ.ಸಿ. ಮುಲ್ಲಾ, ಮಹಾದೇವಿ ಗೋಕಾಕ, ಸಿದ್ದು ರಾಯಣ್ಣವರ, ಮೈನುದ್ದೀನ್ ಬೀಳೆಗಿ, ಡಾ.ರವಿ ಬಿರಾದಾರ, ರೈತ ಮುಖಂಡ ಸಂಗಮೇಶ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.