ಬಜ್ ಸಂಸ್ಥೆ ಅಂಗನವಾಡಿಗಳ ಮೂಲಕ ಮಹಿಳೆಯರನ್ನು ಸಂಘಟಿಸಿ ಕುಟುಂಬದ ಆರ್ಥಿಕತೆ, ಆದಾಯ, ಖರ್ಚು ವೆಚ್ಚದ ಕುರಿತು ವಿಶೇಷ ತರಬೇತಿ ನೀಡುತ್ತಿದ್ದು, ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡು ಸ್ವಾವಲಂಬಿಗಳಾಗಬೇಕು ಎಂದು ಗುತ್ತಲ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ ಅಭಿಪ್ರಾಯಪಟ್ಟರು.
ಹಾವೇರಿ ತಾಲೂಕಿನ ಗುತ್ತಲ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಬಜ್ ಇಂಡಿಯಾ ಟ್ರಸ್ಟ್ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಮಹಿಳೆಯರಿಗೆ ಕಿಟ್ ಕೊಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
“ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿವೆ. ಬಜ್ ಸಂಸ್ಥೆಯು ಕೈಸಾಲ ಮಾಡುವುದು ಅಗತ್ಯವಿಲ್ಲ, ಆದಾಯಕ್ಕನುಗುಣವಾಗಿ ಖರ್ಚನ್ನು ಕಡಿಮೆ ಮಾಡಿಕೊಂಡು ಉಳಿತಾಯ ಮಾಡಬಹುದು ಎಂಬುದನ್ನು ವಸ್ತುನಿಷ್ಠವಾಗಿ ಕೌಶಲಗಳ ಮೂಲಕ ತರಬೇತಿ ನೀಡುತ್ತಿರುವುದು ಅಭಿನಂದನಾರ್ಹ. ಈ ವಿಶೇಷ ತರಬೇತಿ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಉನ್ನತ ಸ್ಥಾನಮಾನ ಗಳಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅರ್ಥಮಾಂತ್ರಿಕನಿಗೆ ಶ್ರದ್ಧಾಂಜಲಿ
ಪ್ರಾಸ್ತಾವಿಕವಾಗಿ ಬಜ್ ಸಂಸ್ಥೆಯ ತರಬೇತಿ ಸುಗಮಕಾರರಾದ ರೇಣುಕಾ ಕಹಾರ ಮಾತನಾಡಿದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಾಳವ್ವ ಗೊರವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಅಮೀನಾ ಗಳಗನಾಥ, ಯಶೋಧಾ ಕಮ್ಮಾರ, ಜಯಲಕ್ಷ್ಮೀ ಅಂಗೂರು, ಇಂದಿರಾ ಲಮಾಣಿ, ಚೈತ್ರಾ ಮೈಕಲ್, ದೇವಿಕಾ ಲಮಾಣಿ, ಸುಮಂಗಲಾ ಚರಂತಿಮಠ, ಕಾಂಚನಾ ಓದಿಸೋಮಠ, ಅಸ್ಮಾಬಾನು ನೆಗಳೂರು, ಭಾಗ್ಯಶ್ರೀ ಸೀತಾಳ, ಚಮನಬಿ ಬಾಗವಾನ್ ಸೇರಿದಂತೆ ಮಹಿಳೆಯರು ಇದ್ದರು.
