ಬೀದರ್ನ ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರು ಬಂದಿರುವ ಕಾರಣಕ್ಕೆ ಚಲವಾದಿ ನಾರಾಯಣ ಸ್ವಾಮಿ, ಸಚಿವರನ್ನು ಟಾರ್ಗೆಟ್ ಮಾಡಿ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎ ವಸಂತ್ ಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ರಾಜಕೀಯದಲ್ಲಿ ಅಭಿಮಾನಿಗಳು, ಆಪ್ತರು ಸಹಜವಾಗಿ ಇರುತ್ತಾರೆ. ಆಪ್ತರು ತಪ್ಪು ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ಉದ್ದೇಶ ಪೂರ್ವಕವಾಗಿ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಯಾವ ಆಧಾರದಡಿ ಆರೋಪ ಮಾಡುತ್ತಾರೆ” ಎಂದು ಪ್ರಶ್ನಿಸಿದರು.
“ರಾಜು ಕಪನೂರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ʼ₹60 ಲಕ್ಷ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, ₹15 ಲಕ್ಷ ನಗದು ಕೊಟ್ಟಿದ್ದೇನೆ. ಹಣ ಮರಳಿ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆʼ ಎಂದು ತಿಳಿಸಿದ್ದಾರೆ. ಚಲವಾದಿ ನಾರಾಯಣ ಸ್ವಾಮಿಯವರು ಪ್ರತಿಭಟನೆ ಮಾಡುವುದಾದರೆ ಸಿಟಿ ರವಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದು, ಅದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಆದರೂ ಮಾತನಾಡಿಯೇ ಇಲ್ಲವೆಂದು ಡೋಂಗಿ ನಾಟಕ ಮಾಡಿದ್ದಾರೆ” ಎಂದರು.
“ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವುದರಿಂದ ಇಡೀ ದೇಶವೇ ಭುಗಿಲೆದ್ದಿದೆ. ಆದರೆ ಇಂತಹ ವಿಷಯಗಳ ಮೇಲೆ ಯಾಕೆ ನಾರಾಯಣಸ್ವಾಮಿ ಪ್ರತಿಭಟಿಸಲಿಲ್ಲ. ಇವರು ಯಾರ ವಿರುದ್ಧ ಹೋರಾಟ ಮಾಡಲು ಮುಂದಾಗುತ್ತಿದ್ದಾರೆ. ಅನ್ಯಾಯವಾದಾಗ, ತಪ್ಪು ನಡೆದಲ್ಲಿ ಹೋರಾಟ ಮಾಡಲಿ, ಅದುಬಿಟ್ಟು ಸಂಬಂಧವಿಲ್ಲದ ವಿಚಾರಕ್ಕೆ ಹೋರಾಟ ಮಾಡಲು ಮುಂದಾಗಿರುವುದು ವಿಪರ್ಯಾಸ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಸರ್ಕಾರ ಬದ್ಧ : ಸಚಿವ ಈಶ್ವರ ಖಂಡ್ರೆ
“ಸುಖಾಸುಮ್ಮನೆ ಸಚಿವರ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ. ನಾರಾಯಣ ಸ್ವಾಮಿ ಪ್ರಬುದ್ಧತೆ ಕಳೆದುಕೊಂಡಿದ್ದಾರೆ. ತಳಬುಡವಿಲ್ಲದ ಆರೋಪಗಳನ್ನು ಮಾಡುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಅವರ ಮೆದುಳು ಮತ್ತು ನಾಲಿಗೆಗೆ ಚಿಕಿತ್ಸೆ ಪಡೆದುಕೊಳ್ಳಲಿ. ನಂತರ ಇನ್ನೊಬ್ಬರ ಬಗ್ಗೆ ಟೀಕೆ ಮಾಡಲಿ” ಎಂದರು.
ಈ ವೇಳೆ ಬಸವರಾಜ ಪಾಟೀಲ್ ಇಟಗಿ, ಪಾಮಯ್ಯ ಮುರಾರಿ, ಕೆ ಶಾಂತಪ್ಪ, ರಜಾಕ್ ಉಸ್ತಾದ್, ಮಹ್ಮದ್ ಶಾಲಂ, ರಾಜಶೇಖರ ರಾಮಸ್ವಾಮಿ, ಅಬ್ದುಲ್ ಕರೀಂ, ಅಮರೇಗೌಡ ಹಂಚಿನಾಳ, ಶಿವಮೂರ್ತಿ, ಖಾಜಾ ಅಸ್ಲಂ ಇದ್ದರು.
