ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಒತ್ತಾಯಿಸಿ ಅಸಂಘಟಿತ ವಲಯದ ದರ್ಜಿ(ಟೈಲರ್)ಗಳು ಎಐಟಿಯುಸಿ ನೇತೃತ್ವದಲ್ಲಿ ದಾವಣಗೆರೆ ನಗರದ ಜಯದೇವ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಮೆರವಣಿಗೆ ಮೂಲಕ ಅಶೋಕ ರಸ್ತೆ, ಗಾಂಧಿ ಸರ್ಕಲ್, ಹಳೆ ನಿಲ್ದಾಣ ರಸ್ತೆ ಮೂಲಕ ಸಾಗಿ ಎಸಿ ಕಚೇರಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಕಾರ್ಮಿಕ ಮಂತ್ರಿಗಳು ಮತ್ತು ಜವಳಿ ಖಾತೆ ಸಚಿವರಿಗೆ ಮನವಿ ಸಲ್ಲಿಸಿ ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಒತ್ತಾಯಿಸಿದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ, ಟೈಲರ್ ಫೆಡರೇಶನ್ನ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, “ಮನೆಗಳಲ್ಲಿ ಅಥವಾ ಶಾಪ್ಗಳಲ್ಲಿ ಬಟ್ಟೆ ಹೊಲಿಯುವವರಿಗೆ ಕಾರ್ಮಿಕ ಕಾಯ್ದೆಗಳು ಅನ್ವಯಿಸುವುದಿಲ್ಲ. ಸಣ್ಣಸಣ್ಣ ಗಾರ್ಮೆಂಟ್ಸ್ ಘಟಕಗಳಲ್ಲಿ ಟೈಲರಿಂಗ್ ಮಾಡುವವರು ಸೇರಿದಂತೆ ರಾಜ್ಯಾದ್ಯಂತ ಸುಮಾರು 20 ಲಕ್ಷ ಮಂದಿ ಟೈಲರ್ಗಳಿರುವ ಅಂದಾಜಿದೆ. ಟೈಲರ್ ವೃತ್ತಿ ಮಾಡುತ್ತಿರುವವರಲ್ಲಿ ಪ್ರೌಢಶಿಕ್ಷಣ ಪಡೆದವರಿದ್ದಾರೆ. ಪದವಿ ಶಿಕ್ಷಣ ಪಡೆದವರೂ ಇದ್ದಾರೆ. ಕನಿಷ್ಠ ಪ್ರೌಢಶಿಕ್ಷಣ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಪಡೆದ ಇವರುಗಳು ಸರ್ಕಾರಿ ಕೆಲಸಕ್ಕಾಗಿ ಕಾಯದೆ ಸ್ವಯಂ ಉದ್ಯೋಗ ಹುಡುಕಿಕೊಳ್ಳುವಲ್ಲಿ ಮುಂದಾಗಿ ಟೈಲರಿಂಗ್ ತರಬೇತಿ ಪಡೆದು ಸ್ವತಃ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ಕೆಲವರು ಸಣ್ಣಪುಟ್ಟ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುತ್ತಿದ್ದರೂ ಅಲ್ಲಿನ ಕೆಲಸಗಾರರು ಇಪ್ಪತ್ತು ಮಂದಿಗಿಂತ ಕಡಿಮೆಯಿರುತ್ತಾರೆ. ಆದ್ದರಿಂದ ಅವರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸದೆ ಇರುವುದರಿಂದ ಯಾವುದೇ ಸವಲತ್ತು ಸಿಗದೆ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಭದ್ರತೆಗಾಗಿ ಟೈಲರ್ ಕಲ್ಯಾಣ ಮಂಡಳಿ ರಚಿಸಬೇಕು” ಎಂದು ಒತ್ತಾಯಿಸಿದರು.
“ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದರೆ ಸರ್ಕಾರ ತನ್ನ ಬೊಕ್ಕಸದ ಹಣ ಕೊಡಬೇಕಾಗಿಲ್ಲ. ಟೈಲರ್ ಕಲ್ಯಾಣ ಮಂಡಳಿಗೆ ಟೆಕ್ಸ್ಟೈಲ್ ಮಿಲ್ಸ್, ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳು ಹಾಗೂ ಬಟ್ಟೆ ಹೊಲಿಗೆಗೆ ಪೂರಕವಾಗಿ ಉತ್ಪನ್ನ ಮಾಡುವ ಸರಕುದಾರ ಉತ್ಪಾದಕರಿಂದ ಶೇ.2ರಷ್ಟು ಸೆಸ್ ಸಂಗ್ರಹ ಮಾಡುವ ಮೂಲಕ ಬರುವ ಬಜೆಟ್ನಲ್ಲಿ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದು ರಾಜ್ಯದ್ಯಾಂತ ಇರುವ ಸುಮಾರು 15 ಲಕ್ಷ ಮಂದಿ ಟೈಲರ್ಗಳ ಕುಟುಂಬಕ್ಕೆ ನೆರವಾಗಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅಮಿತ್ ಶಾ ಹೇಳಿಕೆ ಖಂಡಿಸಿ ನಡೆದ ʼಕಂಪ್ಲಿ ಬಂದ್ʼ ಸಂಪೂರ್ಣ ಯಶಸ್ವಿ
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ರಮೇಶ್ ಸಿ ದಾಸರ, ಸಂಚಾಲಕ ಗದಿಗೇಶ ಪಾಳೆದ, ಸರೋಜಾ, ಚನ್ನಪ್ಪ ಗುಮ್ಮನೂರು, ಐರಣಿ ಚಂದ್ರು, ಮಹಮದ್ ರಫೀಕ್, ಟೈಲರ್ ಮುಖಂಡೆ ನಾಗರತ್ನಮ್ಮ, ಸ್ಮಿತಾ, ಉಷಾ, ಬಸಮ್ಮ, ದಯಾನಂದ, ರಾಮು, ಅಶೋಕ, ಮರಿಯಪ್ಪ, ನಾಗಲಕ್ಷ್ಮಮ್ಮ, ಕಾವೇರಿ, ವೀಣಾ, ರೂಪಾ ಹಾಲಮ್ಮ, ಸುನಿತಾ, ಸಂಗೀತ, ಪುಷ್ಪ, ಲತಾ, ರುದ್ರಮ್ಮ, ಅಶೋಕ, ಚೆನ್ನಪ್ಪ ಸೇರಿದಂತೆ ಇತರರು ಇದ್ದರು.