ವಿದ್ಯಾರ್ಥಿಗಳ ಜೀವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬಹುಮುಖ್ಯವಾದ ಪರೀಕ್ಷೆ. ಓದಿನ ತಯಾರಿ ಮಕ್ಕಳಲ್ಲಿ ಹೆಚ್ಚಾಗಬೇಕು. ಬೌದ್ಧಿಕ ತಿಳುವಳಿಕೆಗೆ ಕೇವಲ ಪಠ್ಯಪುಸ್ತಕಗಳಿಗೆ ಕೇಂದ್ರೀಕೃತವಾಗದೇ ಪತ್ರಿಕೆ, ಬೇರೆಬೇರೆ ಕೃತಿಗಳನ್ನು ಓದಬೇಕು ಎಂದು ಶಾಸಕ ಕೃಷ್ಣನಾಯ್ಕ್ ತಿಳಿಸಿದರು.
ಅವರು ಹೂವಿನಹಡಗಲಿ ಸರಕಾರಿ ನೌಕರರ ಭವನದಲ್ಲಿ ಉಪ ನಿರ್ದೇಶಕರ ಕಾರ್ಯಾಲಯ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆಯಿಂದ ಅಯೋಜಿಸಿದ್ದ. 2024-25 ನೇ ಸಾಲಿನ ಎಸ್ಎಸ್ಎಲ್ಸಿ ಉತ್ತಮ ಫಲಿತಾಂಶಕ್ಕಾಗಿ ಪ್ರೌಢಶಾಲಾ ಮುಖ್ಯ ಗುರುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರೀಕ್ಷಾ ಪ್ಯಾಕೇಜ್ ಅನಾವರಣಗೊಳಿಸಿ, ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಎಸ್ಎಲ್ಸಿ ಪ್ರಮುಖ ಘಟ್ಟ. ಶ್ರದ್ಧೆಯಿಂದ ಓದಿದರೆ ಸಾಧನೆ ಸಾಧ್ಯ. ಅಕ್ಷರಗಳ ಗಂಧವೇ ಗೊತ್ತಿಲ್ಲದ ಸಾವಿತ್ರಿಬಾಯಿ ಪುಲೆಗೆ ಗಂಡ ಜ್ಯೋತಿ ಬಾಪುಲೆ ಅಕ್ಷರಗಳನ್ನು ಬರೆಯೋದನ್ನ, ಓದುವುದನ್ನು ಕಲಿಸಿದರು. ಇವತ್ತು ಸಾವಿತ್ರಿ ಭಾರತದ ಮೊಟ್ಟಮೊದಲ ಶಿಕ್ಷಕಿ ಆಗಿದ್ದಾರೆ. ಆ ಮೂಲಕ ಅಕ್ಷರ ಮಾತೆ ಎಂದು ಕರೆಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪುರುಷರಿಗೆ ಅದರಲ್ಲೂ ಮೇಲ್ವರ್ಗದ ಪುರುಷರಿಗೆ ಮೀಸಲಿದ್ದ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿ ದಲಿತ, ಶೂದ್ರ, ಮಹಿಳೆಯರು ಶಿಕ್ಷಣವಂತರನ್ನಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ, ಅದನ್ನ ಕುಡಿದವರು ಗರ್ಜಿಸಲೇಬೇಕು” ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಹಾಗಾಗಿ ಸರಕಾರದ ಸೌಲಭ್ಯಗಳನ್ನು, ಮಕ್ಕಳ ಭವಿಷ್ಯ ರೂಪಿಸಲು ಬಳಸಬೇಕು. ಶಿಕ್ಷಕ ಮಕ್ಕಳಿಗೆ ಪ್ರೇರಕ, ಪ್ರೇರಣೆ ಆಗಬೇಕೆಂದು ಹೇಳಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕಗಳನ್ನು ಗಳಿಸುವ ಸದುದ್ದೇಶದಿಂದ ಪರೀಕ್ಷಾ ಪ್ಯಾಕೇಜ್ ತಾಲೂಕಿನ ಎಲ್ಲ ಪ್ರೌಢಶಾಲೆಗಳಿಗೆ ವಿತರಿಸುವ ಕಾರ್ಯ ಉತ್ತಮ ಸಂಯೋಜನೆ ಎಂದು ತಿಳಿಸಿದ ಅವರು, ಅಧಿಕ ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ನಿಧಾನಗತಿಯ ಮಕ್ಕಳಿಗೂ ವಿಶೇಷ ಆದ್ಯತೆ ನೀಡಿ ಎಂದು ಹೇಳಿದರು.
ತಾಲೂಕಿನ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಮುಖ್ಯ ಗುರುಗಳು ಸಹ ಶಿಕ್ಷಕರು ಶಾಲೆಯ ಹಳೆ ವಿದ್ಯಾರ್ಥಿಗಳ ಮನಒಲಿಸಿ ಕುಡಿಯುವ ನೀರು ಕಂಪ್ಯೂಟರ್ ಗ್ರಂಥಾಲಯ ಪ್ರಯೋಗಾಲಯ ಅಭಿವೃದ್ಧಿ ಪಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮೈಸೂರು | ಹಂದಿಜೋಗಿ ಕುಟುಂಬ ಬೀದಿಪಾಲು: ಹೊರಳವಾಡಿ ಹೊಸೂರಿನಲ್ಲಿ ಅಮಾನವೀಯ ಘಟನೆ
ಉಪ ನಿರ್ದೇಶಕರಾದ ವೆಂಕಟೇಶ್ ರಾಮಚಂದ್ರಪ್ಪ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ಸರಣಿ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗುತ್ತಿದೆ. ತಾಲೂಕಿನ ಎಲ್ಲ ಪ್ರೌಢಶಾಲೆಗಳ ಫಲಿತಾಂಶ ಪ್ರಗತಿ ಪರಿಶೀಲಿಸಿ ಉಪಯುಕ್ತ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ, ವಿಷಯ ಶಿಕ್ಷಕರ ಸರಣಿ ಸಭೆ, ಬೆಳಿಗ್ಗೆ ವಿಶೇಷ ತರಗತಿ, ಸಂಜೆ ಗುಂಪು ಅಧ್ಯಯನ, ಪೋಷಕರ ಸಭೆ, ಪಾಲಕರ ಮನೆ ಭೇಟಿ ಮೊದಲಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಅಯ್ಯನಗೌಡರ ಕೊಟ್ರಗೌಡ, ಎಚ್ ಹುಲಿಬಂಡಿ, ಬಸವಂತಯ್ಯ ಹಿರೇಮಠ, ಎ ಕೋಟೆಪ್ಪ, ವಿ ಹನುಮಂತಪ್ಪ, ಜಿ ಎಂ ಕಾಂತೇಶ್, ಎಂ ಶಿವಲಿಂಗಪ್ಪ, ಗಡ್ಡಿ ಶಿವಕುಮಾರ್, ಶಿವಬಸವ ಸ್ವಾಮಿ ಹಿರೇಮಠ, ಬಸಪ್ಪ ಕೆ, ಎಂ ಶೇಕ್ ಅಹಮದ್, ಕಸ್ತೂರಿ ಮುದ್ದಿ, ಎಲ್ ಖಾದರಬಾಷಾ, ವಿಶ್ವನಾಥ ಕೋರಿ, ಚಂದ್ರಪ್ಪ ಇತರರು ಉಪಸ್ಥಿತರಿದ್ದರು.
