ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

1

ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು-ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್‌ಶನ್ ತೆಗೆದುಕೊಂಡಿದ್ದರಿಂದ ನಮ್ಮಲ್ಲಿ ಐವತ್ತು-ಅರವತ್ತು ಸಾವಿರ ರೂಪಾಯದ ಗಂಟಿರಬಹುದೆಂದು ಜನರ ತರ್ಕ. ಜನರ ತರ್ಕವಾದರೂ ತಪ್ಪಾದದ್ದಲ್ಲ.

ನಮ್ಮ ತಂದೆತಾಯಿಗಳಿಗೆ ನಾವು ಮೂರು ಮಂದಿ ಮಕ್ಕಳು. ಹಿರಿಯಳಾದ ಸತ್ಯಭಾಮೆಯನ್ನು (ನಾವು ಭಾಮಕ್ಕನೆನ್ನುತ್ತೇವೆ) ಶಹಾಪುರದಲ್ಲಿ ಲಕ್ಷಾಧೀಶರಾದ ತಮ್ಮಣ್ಣನಾಯಕರ ಮಕ್ಕಳಾದ ಶೇಷಗಿರಿನಾಯಕರಿಗೆ ಕೊಟ್ಟಿದೆ. ನಡುವಿನವನು ನಾನು. ದೊಡ್ಡವರ ಮಗನಾದ ನನ್ನ ಮದುವೆಯು ಬೇಗನೆ ಆಯಿತು. ”ವೆಂಕಟರಾಯರ ಬುದ್ಧಿ ಬಹಳ ಚುರುಕು; ಈ ಸಾರೆ ಅವರು ಮ್ಯಾಟ್ರಿಕ್ಯೂಲೇಶನ್ನದಲ್ಲಿ ಹೇಗೆ ‘ನಾಪಾಸ’ ಆದರೋ ತಿಳಿಯಲಿಲ್ಲ” ಎಂದು ನನ್ನ ತಂದೆಯವರ ಸ್ತುತಿಪಾಠಕರು ಹಳಹಳಿಸಿದರು. ಈ ಮೊದಲೆಯೇ ನಾನು ಎರಡು ಸಾರೆ ‘ನಾಪಾಸ’ ಆಗಿದ್ದೆನು. ”ಏನು ದೊಡ್ಡ ಮಾತು? ಪಾಸಾಗದಿದ್ದರೆ ಇಲ್ಲ. ಪರೀಕ್ಷೆ ಪಾಸಾದರೆಯೇ ವೆಂಕಟೇಶನ ಹೊಟ್ಟೆ ತುಂಬುತ್ತದೆ ಅಂತಲ್ಲ!” ಎಂದು ಪುತ್ರವತ್ಸಲರಾದ ನನ್ನ ತಂದೆಯವರು ಹೇಳಿದರು. ತಂದೆತಾಯಿಗಳು ನನ್ನ ಮೇಲೆ ಹೆಚ್ಚಾದ ಮಮತೆ ಮಾಡುತ್ತಿರುವದರಿಂದಲೂ ನಾನು ಗೃಹಸ್ಥಾಶ್ರಮಿಯಾಗಿ 3-4 ವರ್ಷಗಳಾಗಿರುವದರಿಂದಲೂ ನಾನು ಮೂರು ಸಾರೆ ಮ್ಯಾಟ್ರಿಕ್ಯುಲೇಶನ್‌ದಲ್ಲಿ ನಾಪಾಸ ಆದೆನು. ಮುಂದಿನ ವರ್ಷ ನಾನೂ ನನಗಿಂತ ನಾಲ್ಕು ವರ್ಷ ಚಿಕ್ಕವನಾದ ನನ್ನ ತಮ್ಮ ಮಾಧವನೂ ಕೂಡಿಯೇ ಆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆವು. ಮಾಧವನು ತೇರ್ಗಡೆ ಹೊಂದಿದವರಲ್ಲಿ ಮೊದಲನೆಯವನು; ಶಂಕರಸೇಟ್ ಸ್ಕಾಲರನೂ ಆದ್ದರಿಂದ ಅವನ ಪ್ರಶಂಸೆಗೆ ಅಳತೆಯಿರಲಿಲ್ಲ. ಆಗಲಿ! ನಿಂದಕರನ್ನು ನೋಡಿರಿ. ಅವರು ಮಾಧವನ ಸ್ತುತಿ ಮಾಡಬೇಕಾದರೆ ನನ್ನನ್ನು ಹಳಿಯಬೇಕೆ? ನಾನಾದರೂ ‘ಪಾಸ್’ ಆದವರಲ್ಲಿ ಒಂಬತ್ತನೆಯವನು.

Advertisements

ಕಾಂತಾಸಹವಾಸದ ವ್ಯಾಮೋಹಕ್ಕಾಗಿಯೂ ಸ್ನೇಹಿತರೊಡನೆ ವಿನೋದದ ಹರಟೆ ಕೊಚ್ಚಿದ್ದಕ್ಕಾಗಿಯೂ ನನ್ನ ಅವಸ್ಥೆ ಹೀಗಾಯಿತೆಂಬ ವ್ಯಸನದಿಂದ ನಾನಾದರೂ ಮುಂಬಯಿಯಲ್ಲಿ ನಿಂತು ಒಳ್ಳೇ ಮನಸ್ಸು ಕೊಟ್ಟು ವಕೀಲೀ ಪರೀಕ್ಷೆಯ ಅಭ್ಯಾಸ ಮಾಡಿದ್ದರಿಂದ ವರುಷ ತಿರುಗುವದರೊಳಗಾಗಿಯೇ ನಾನು ವಕೀಲನಾದೆನು. ಕೇಳುವದೇನು! ಮಾಧವನು ಪೀ.ಈ. ಪರೀಕ್ಷೆಯಲ್ಲಿ ಅಗ್ರಸ್ಥಾನವನ್ನು ಹೊಂದಿದರೂ ಅವನು ವಿದ್ಯಾರ್ಥಿಯೇ! ನಾನು ತಿಂಗಳೊಂದಕ್ಕೆ ನೂರು ನೂರೈವತ್ತು ರೂಪಾಯಿ ಗಳಿಸುವ ವಕೀಲನು. ಹೀಗೆ ನಮ್ಮ ಮನೆಯಲ್ಲಿ ಸುಖವೂ ಆನಂದವೂ ನೆಲೆಗೊಂಡವು.

ನಾವು ಕರ್ನಾಟಕದ ದೇಶಸ್ಥರು; ಮನೆಯಿಂದ ನೆಟ್ಟಗಿದ್ದವರು; ಇಂಥವರ ಮನೆಯಲ್ಲಿದ್ದ ನಮ್ಮ ಮಾಧವನು ಅವಿವಾಹಿತನಾಗಿ ಉಳಿಯುವದು ಹೇಗೆ? ಇಷ್ಟು ದಿವಸ ಮಾಧವನ ಮದುವೆಯಾಗದೆ ಉಳಿದದ್ದೇ ಹೆಚ್ಚಿನ ಮಾತು. ಹೈದರಾಬಾದದಲ್ಲಿ ಕರೋಡಗಿರಿಯ ಮೋಹತಮೀಮರಾದ ಸುಬ್ಬರಾಯರು ನಮ್ಮ ತಂದೆಯವರ ಬಾಲ್ಯದ ಸ್ನೇಹಿತರು. ತಮ್ಮ ಮಗಳನ್ನು ಮಾಧವನಿಗಾಗಿ ಸ್ವೀಕರಿಸಬೇಕೆಂದು ಸುಬ್ಬರಾಯರು ನಾವಿದ್ದಲ್ಲಿಗೆ ಬಂದು ಬಹುಪರಿಯಾಗಿ ಹೇಳಿಕೊಂಡು ಐದು ಸಾವಿರ ರೂಪಾಯಿ ವರದಕ್ಷಿಣೆಯಾಗಿ ಕೊಡಲೊಪ್ಪಿದ್ದರಿಂದ ನಮ್ಮ ತಂದೆಯವರು ಒಪ್ಪಿಕೊಂಡರು. ನಮ್ಮ ತಾಯಿಯವರು ಇನ್ನೂ ಕೆಲವು ‘ಬಾಬು’ಗಳನ್ನು ಹೆಚ್ಚಾಗಿ ಬೇಡಿದರೂ ಅವುಗಳನ್ನು ಸುಬ್ಬರಾಯರು ಕೊಡಲೊಪ್ಪಿದ್ದರಿಂದ ಮಾಧವನ ಮದುವೆಯ ನಿಶ್ಚಯವೇ ಆಗಿಹೋಯಿತು.

ಕಥೆ-ಕಾದಂಬರಿ-ನಾಟಕಾದಿಗಳನ್ನು ಓದಿದವನಾದ ಮಾಧವನು ”ಇಂಗ್ಲಂಡದಲ್ಲಿ ತರುಣರು ಇಪ್ಪತ್ತೆಂಟು ಮೂವತ್ತು ವರ್ಷದ ಪ್ರಾಯದವರಾಗುವವರೆಗೆ ಲಗ್ನಮಾಡಿಕೊಳ್ಳುವುದಿಲ್ಲ. ಅವರು ತಮ್ಮ ಇಚ್ಛೆಗೆ ಬಂದ ವಧುವನ್ನೇ ಮದುವೆ ಮಾಡಿಕೊಳ್ಳುತ್ತಾರೆ. ಹೀಗೆ ಬಂಧಿಸಿ ನನ್ನ ಮದುವೆ ಮಾಡುವದು ಸರ್ವಥಾ ಅನ್ಯಾಯವಾದದ್ದು” ಎಂದು ನನಗೂ ತಂದೆಯವರಿಗೂ ಕೂಡಿಯೇ ಬರಕೊಂಡನು. ನಮ್ಮ ತಂದೆಯವರು ತಾವು ಮಾಡಿದ ನಿಶ್ಚಯವನ್ನು ಮುರಿಯುವರೆ? ಕನ್ನೆಯು ಶ್ರೇಷ್ಠಳಾಗಿರುವಳೆಂದೂ ಸುಬ್ಬರಾಯರಂಥ ಮನೆತನಸ್ಥರೊಡನೆ ಸಂಬಂಧ ಮಾಡುವದು ಶ್ಲಾಘ್ಯವಾದದ್ದೆಂದೂ ಬರೆದದ್ದಲ್ಲದೆ ತಮ್ಮ ಆಜ್ಞೆಯನ್ನು ಉಲ್ಲಂಘಿಸಿದ್ದಾದರೆ ಕಾಲೇಜ ಬಿಟ್ಟು ಮನೆಗೆ ಬರಬೇಕಾದೀತೆಂದು ತಂದೆಯವರು ಮಾಧವನಿಗೆ ನಿಷ್ಠುರವಾಗಿ ಬರೆದದ್ದರಿಂದ ಅವನು ಅನಿರ್ವಾಹಕ್ಕಾಗಿ ಸುಮ್ಮನಾದನು.

ಮನೆಯಲ್ಲಿ ಮಾಧವನ ಮದುವೆಯ ಸಮಾರಂಭವು ಅಟ್ಟಹಾಸದಿಂದ ನಡೆದಿತ್ತು. ಬುದ್ಧಿಶಾಲಿಯೂ, ದೃಢಾಂಗನೂ, ಸುಂದರನೂ ಆದ ವರನನ್ನು ಕಂಡು ವಧೂಪಕ್ಷದವರಿಗೆ ಅತಿಶಯವಾದ ಸಂತೋಷವಾಗಿತ್ತು. ನಮ್ಮ ತಾಯಿಗೂ ಭಾಮಕ್ಕನಿಗೂ ದಾಸಾನುದಾಸರಾಗಿ ನಡಕೊಳ್ಳುತ್ತಿದ್ದರು. ಕಳಸಗಿತ್ತಿಯಾದ ಭಾಮಕ್ಕನ ಜಂಬವನ್ನು ಹಿಡಿಯಬೇಕಾದರೆ, ಸುಬ್ಬರಾಯರಿಗೂ ಅವರ ಪತ್ನಿಗೂ ಸಾಕುಬೇಕಾಗಿ ಹೋಯಿತು. ಈ ಲಗ್ನ ಸಮಾರಂಭದಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಉಲ್ಲಾಸ, ಎಲ್ಲರಿಗೂ ಆನಂದವಾಗಿರುವಾಗ ಮಾಧವನೊಬ್ಬನೇ ಚಿಂತಾಕ್ರಾಂತನಾಗಿ ಕಂಡನು.

ಕನ್ನೆಯ ರೂಪವು ಹೇಗಿರುವದೋ ಎಂದು ನೋಡುವನೆಂದರೆ, ಆ ಹುಡುಗಿಯು ಕೆಳಗೆ ಮೋರೆ ಹಾಕಿದವಳು ಅದನ್ನು ಮೇಲಕ್ಕೆ ಎತ್ತಿದ್ದಿಲ್ಲ. ಮೊದಲನೆಯ ದಿವಸ ವಧುವು ಮಾಧವನ ಮುಖವನ್ನು ನಿರೀಕ್ಷಿಸಿ ನೋಡುತ್ತಿದ್ದಳಂತೆ! ಆಗ ಊಟಕ್ಕೆ ಬಂದ ಪುರೋಹಿತಗಿತ್ತಿಯಾದ ಭಾಗಮ್ಮನು ಅದನ್ನು ಕಂಡು, ”ಅಯ್ಕೆ! ಏನು ಹುಡುಗೆ ಇದು? ಈಗಲೆ ಗಂಡನ ಮೋರೆಯನ್ನು ಹುಳುಹುಳು ನೋಡುತ್ತಾಳೆ” ಎಂದು ಅಂದಳಂತೆ. ಆ ಮಾತು ಕೇಳಿದಾಗಿನಿಂದ ಮದುಮಗಳು ತಿರುಗಿ ಮೇಲಕ್ಕೆ ಮೋರೆಯನ್ನೆತ್ತಿದ್ದಿಲ್ಲ. ಸಿಕ್ಕಸಿಕ್ಕವರು ಎರೆದದ್ದರಿಂದ ಮದುಮಗಳ ತಲೆಯಲ್ಲಿ ತಪತಪ ಎಣ್ಣೆ ಬಸಿಯುತ್ತಿತ್ತು. ಮೈಯೆಲ್ಲ ಎಣ್ಣೆ ಅರಿಸಿನಗಳ ಜಿಗಿಯು. ಅಷ್ಟಪತ್ರಿಯು ಪುರೋಹಿತನಿಗೆ ಹೋಗಬೇಕಾದ್ದರಿಂದ ಒಂದೂ ಮುಕ್ಕಾಲು ರೂಪಾಯಿಯ ಬೆಲೆಯುಳ್ಳ ಅರಿಸಿನ ಬಣ್ಣದ್ದೊಂದು ವಸ್ತ್ರವನ್ನು ಆ ಕನ್ನೆಗೆ ಉಡಿಸಿದ್ದರು. ಇಷ್ಟು ಸೌಭಾಗ್ಯದ ಮೇಲೆ ವಧುವಿನ ಹೆಸರು ಗುಂಡಕ್ಕನು.

ಸಾರಾಂಶ, ಹೆಂಡತಿಯು ಮಾಧವನ ಮನಸ್ಸಿಗೆ ಎಳ್ಳಷ್ಟಾದರೂ ಬರಲಿಲ್ಲ. ಭಾಮಕ್ಕನು ಆಗ್ರಹದಿಂದ ಜಗ್ಗಿಕೊಂಡು ಹೋದರೆ ಮಾತ್ರ ಊಟಣಿಗೆ ಹೋಗುವನು. ಗುಂಡಕ್ಕನು ತಪ್ಪು ತಡೆಯಾದ ಮರಾಠೀ ಒಗಟುಗಳನ್ನು ಹಾಕಿ ಗಂಧ ಹಚ್ಚಲಿಕ್ಕೆ ಬಂದರೆ ಅವನು ಕೈ ಕೊಡಲಿಲ್ಲ. “ಮಾಧವಾ, ನಿನ್ನ ಮಾವನು ಕೊಟ್ಟ ಪೀತಾಂಬರವು ಚನ್ನಾಗಿದೆ ಅಲ್ಲವೆ? ನೋಡು ಬಾ!” ಎಂದು ನಮ್ಮ ತಾಯಿಯು ಕರೆದರೆ “ರಮಾಕಕ್ಕೀ, (ನಮ್ಮ ತಾಯಿಗೆ ನಾವು ರಮಾಕಕ್ಕೀ ಎಂದೆನ್ನುತ್ತೇವೆ) ರಮಾಕಕ್ಕಿ, ಈ ಸುದ್ದಿಯನ್ನು ನನ್ನ ಮುಂದೆ ತೆಗೆಯಬೇಡ. ಪೀತಾಂಬರವನ್ನು ಮದುವೆ ಮಾಡಿಕೊಳ್ಳುವದದೇನು?” ಅಂದನು.

ಹೀಗೆ ಮಾಧವನು ಮದುವೆ ಮುಗಿಯುವವರೆಗೆ ದುಮುದುಮು ಉರಿಯುತ್ತಿದ್ದನು. ಆಲ್ಪರೆದು ಹೇಳಿಕೊಂಡರೂ ತಂದೆಯವರು ತನ್ನ ವಿನಂತಿಯನ್ನು ಲಕ್ಷಿಸದೆ ತನಗೆ ಇಂಥದೊಂದು “ಕರಡೆ”ಯನ್ನು ಗಂಟು ಹಾಕಿದರೆ? ಒಳ್ಳೇದು, ಇದರ ಪ್ರಾಯಶ್ಚಿತ್ತವನ್ನು ಅವರಿಗೆ ಉಣ್ಣಿಸದಿದ್ದರೆ ನನ್ನ ಹೆಸರೇ ಮಾಧವನಲ್ಲ; ಆಗ್ರಹಿಯಾದ ತಂದೆಯ ಮಗನು ಆಗ್ರಹಿಯಾಗದಿದ್ದರೆ ಒಪ್ಪುವದುಂಟೆ? ಎಂದು ನೆನಿಸಿ ಅವನು ಕಾಲೇಜಕ್ಕೆ ಹೊರಟುಹೋದನು.

ಮುಂದಿನ ‘ಮೇ’ ತಿಂಗಳಲ್ಲಿ ಮಾಧವನು ಊರಿಗೆ ಬರಲಿಲ್ಲ. ತಂದೆಯವರು ಆಗ್ರಹದಿಂದ ಬಾರೆಂದು ಬರೆದರೆ ಅವನು ಊರಿಗೆ ಬಂದ ಮರು ದಿವಸವೇ ಮರಳಿ ಕಾಲೇಜಕ್ಕೆ ಹೋದನು. ಮಾಧವನು ಅಳಿಯತನಕ್ಕೆ ಅತ್ತೇ ಮನೆಗೆ ಹೋಗಲಿಲ್ಲ. ಹೆಂಡತಿ ಮೈನೆರೆದರೆ ಫಲಶೋಭನಕ್ಕೆ ಊರಿಗೆ ಬರಲಿಲ್ಲ. ತಂದೆಯವರು ಬೇರೊಂದು ಮುಹೂರ್ತ ತೆಗೆದು ಮಾಧವನಿಗೆ ಸಿಟ್ಟು ಮಾಡಿ ಬರಹೇಳಿ ಕಳಿಸಿದರೆ, ”ನನಗೆ ಇನ್ನೊಂದು ಮದುವೆ ಮಾಡಿದರೆ ಮಾಡಿರಿ; ಇಲ್ಲದಿದ್ದರೆ ನೀವು ಮಾಡುವ ಮಂಗಲಕಾರ್ಯಗಳು ನನಗೆ ಬೇಕಾಗಿಲ್ಲ” ಎಂದು ಪ್ರತ್ಯುತ್ತರ ಕೊಟ್ಟನು.

ತಂದೆಯವರಿಗೆ ಕೋಪ ಬಂದಿತು; ಆದರೆ ಮಗನನ್ನು ಒಗೆಯುವರು ಹೇಗೆ? ಇತ್ತ ಸುಬ್ಬರಾಯರ ಪತ್ರಗಳು ಮೇಲಿಂದ ಮೇಲೆ ಬರುತ್ತಿದ್ದವು; ಇತ್ತ ಮಗನು ಮಾತು ಕೇಳಲೊಲ್ಲನು. ಎಂ.ಎ. ಆಗಿ ಪ್ರಬುದ್ಧನಾಗಿರುವ ಮಗನನ್ನು ಹೆಚ್ಚಿಗೆ ಕೆಣಕಿ ನೋಡಿ ಫಲವೇನು? ಸುಖಿಯಾಗಿದ್ದ ನಮ್ಮರಾಯರಿಗೆ ವೃದ್ಧಾಪ್ಯದಲ್ಲಿ ಇದೊಂದು ದೊಡ್ಡ ಚಿಂತೆಯಾಯಿತು. ಇದ್ದ ಸೊಸೆಯು ರೂಪವತಿಯೂ ಗುಣವತಿಯೂ ಆಗಿದ್ದಳು. ಇನ್ನೊಂದು ಮದುವೆ ಮಾಡುವದೆಂತು? ಒಬ್ಬರ ಮಗಳ ಗೋಳು ಕಟ್ಟಿಕೊಳ್ಳುವದಕ್ಕಿಂತಲೂ ಮಗನು ಹೆಂಡತಿಯಿಲ್ಲದೆ ಕುಳಿತರೂ ಚಿಂತೆಯಿಲ್ಲವೆಂದು ತಿಳಿದು ಅವರು ಮಾಧವನ ದ್ವಿತೀಯ ವಿವಾಹದ ಗೊಡವೆಗೆ ಹೋಗಲಿಲ್ಲ.

2

ತಂದೆಯವರ ಪ್ರಕೃತಿಯು ದಿನೇದಿನೇ ಅಸ್ವಸ್ಥವಾಗುತ್ತ ನಡೆದದ್ದರಿಂದ ನಾವು ಗ್ರಾಮಾಂತರಕ್ಕೆ ಹೋಗಿ ಇರಬೇಕೆಂದು ವೈದ್ಯರು ಹೇಳಿದರು. ಆ ಮೇರೆಗೆ ನಾವೆಲ್ಲರೂ ಬೆಂಗಳೂರಿಗೆ ಹೋದೆವು; ‘ಬಸವನಗುಡಿ’ ಎಂಬ ಹೊಸಪೇಟೆಯಲ್ಲಿ ನಮ್ಮ ಪ್ರಾಂತದ ಜನರ ವಸತಿ ಬಹಳವಾಗಿರುವದರಿಂದ ನಾವು ಅಲ್ಲಿಯೇ ಒಂದು ರಮ್ಯವಾದ ಮನೆ ಹಿಡುಕೊಂಡು ಇದ್ದೆವು. ಬೆಂಗಳೂರಿನ ನೀರು ಗಾಳಿಗಳು ಒಳ್ಳೇ ಹಿತಕರವಾಗಿರುವದರಿಂದಲೂ ಅಲ್ಲಿಯ ಶೋಭೆಯು ಒಳ್ಳೆ ರಮಣೀಯವಾಗಿರುವದರಿಂದಲೂ, ಅಲ್ಲಿರುವ ಬೇರೆ ಸುಖಸಾಧನಗಳು ಸಮೀಚೀನವಾಗಿರುವದರಿಂದಲೂ ತಿಂಗಳು ಹದಿನೈದು ದಿವಸಗಳಲ್ಲಿಯೇ ತಂದೆಯವರ ಪ್ರಕೃತಿಯು ವಾಸಿಯಾಗುತ್ತ ಬಂದಿತು.

ನಾವು ಬೆಂಗಳೂರಿಗೆ ಬಂದ ವರ್ತಮಾನವನ್ನು ಕೇಳಿ ನಮ್ಮ ಭಗಿನೀಪತಿಗಳಾದ ಶೇಷಗಿರಿ ನಾಯಕರಿಗೂ ಅಲ್ಲಿಗೆ ಬರುವ ಇಚ್ಛೆಯಾಯಿತು. ಶೇಷಗಿರಿನಾಯಕರು ಮೂವತ್ತೈದು ವರುಷದ ಪ್ರಾಯದವರಾದ ತರುಣರು. ಅವರು ದೃಢಾಂಗರಾಗಿದ್ದು ಮೈಬಣ್ಣ ಸಾದಗಪ್ಪಿನದಾಗಿತ್ತು. ನಾಯಕರ ಮುಖದ ಮೇಲೆ ಲಕ್ಷ್ಮಿಯ ಕಳೆಯು ಉಕ್ಕುತ್ತಿತ್ತು. ಹಿರಿಯರು ವರುಷಾ ನಿರಾತಂಕ ಏಳೆಂಟು ಸಾವಿರ ರೂಪಾಯಿ ಗಳಿಸುವರು. ಹೊಟ್ಟೆಗಿಲ್ಲದವರು ವಿದ್ಯಾವ್ಯಾಸಂಗವನ್ನು ಮಾಡತಕ್ಕದ್ದೆಂದು ತಮ್ಮಣ್ಣನಾಯಕರ ಅಭಿಪ್ರಾಯವಾದದ್ದರಿಂದ ಶೇಷಗಿರಿನಾಯಕರನ್ನು ದೊಡ್ಡೂರ ಶಾಲೆಗೆ ಕಳಿಸಲಿಲ್ಲ. ಅಂಕಿ ಮೊಗ್ಗೆ ಅಕ್ಷರ ಬರಹಗಳ ಪೂರ್ತೆ ಶೇಷಗಿರಿನಾಯಕರ ವಿದ್ಯಾಭ್ಯಾಸವಾಗಿತ್ತು. ಕನ್ನಡ ಮರಾಠೀ ಅಕ್ಷರಗಳನ್ನು ಅವರು ಮುಕ್ತಾಫಲದಂತೆ ಬರೆಯುತ್ತಿದ್ದರು. ವ್ಯಾಪಾರದ ಲೆಕ್ಕಗಳನ್ನು ಅವರು ತಪ್ಪಿಲ್ಲದೆ ಬಹು ಜಾಗ್ರತೆಯಾಗಿ ಮಾಡುತ್ತಿದ್ದರು. ಶೇಷಗಿರಿನಾಯಕರು ಒಳ್ಳೇ ತೀಕ್ಷ್ಮವಾದ ಬುದ್ಧಿಯುಳ್ಳವರಾಗಿದ್ದರಿಂದ ತಮಗೆ ಉಚ್ಚವಾದ ಶಿಕ್ಷಣವು ದೊರಕಲಿಲ್ಲವೆಂದು ಅವರು ಆಗಾಗ್ಗೆ ವಿಷಾದಪಡುತ್ತಿದ್ದರು. ಪದವೀಧರರಂತೆ ಪೋಷಾಕು ಮಾಡಿಕೊಳ್ಳುವದೂ ಆ ಜನರಂತೆ ವರ್ತಿಸುವದೂ ಅವರಿಗೆ ಸೇರುತ್ತಿತ್ತು. ಉತ್ತಮೋತ್ತಮವಾದ ಜರದ ರುಮಾಲಗಳನ್ನು ಅವರು ಸುತ್ತಿಕೊಳ್ಳುತ್ತಿದ್ದರು. ಬೆಲೆಯುಳ್ಳ ಕೋಟು ಪಾಟಲೂನುಗಳ ಜೊತೆಗಳು ಅವರಲ್ಲಿ ಹತ್ತೆಂಟು ಇದ್ದವು. ಕಣ್ಣುಗಳು ಚನ್ನಾಗಿ ಕಾಣುತ್ತಿದ್ದರೂ ಅಲಂಕಾರಕ್ಕಾಗಿ ‘ಲಾರೆನ್ಸ ಎಂಡ ಮೇಯೊ’ ಕಂಪನಿಯಿಂದ ಐವತ್ತು ರೂಪಾಯದ ಉಪನೇತ್ರಗಳನ್ನು ತರಿಸಿದ್ದರು. ಅವರಿಗೆ ಗಡಿಯಾರದ ಅವಶ್ಯಕತೆ ಇಲ್ಲದಿದ್ದರೂ ಸುಶಿಕ್ಷಿತರು ಗಡಿಯಾರವಿಲ್ಲದೆ ಇರಕೂಡದಾದ್ದರಿಂದ ಅವರ ಕಿಶೆಯಲ್ಲಿ ಚಿನ್ನದ ಗಡಿಯಾರವೂ ಅದಕ್ಕೆ ರತ್ನಖಚಿತವಾದ ಬಂಗಾರದ ಅಂದವಾದ ಸರಪಣಿಯೂ ಇತ್ತು. ವಾಚ್-ಚೇನ, ಮೀಟಿಂಗ-ಲೆಕ್‌ಚರ, ಲೇಡಿಜ-ಜೆಂಟ್ಲಮೆನ್, ಗುಡ್‌ ಮಾರ್ನಿಂಗ ಮುಂತಾದ ಅವಶ್ಯವಾದ ಅನೇಕ ಇಂಗ್ಲಿಷ್ ಶಬ್ದಗಳು ಅವರಿಗೆ ಬರುತ್ತಿದ್ದು ಅವುಗಳನ್ನು ಅವರು ಪ್ರಸಂಗ ಬಂದಾಗ ಉಪಯೋಗಿಸದಲೆ ಬಿಡುತ್ತಿದ್ದಿಲ್ಲ.

PHOTO 2025 01 11 12 08 58

ಇರಲಿ, ಶೇಷಗಿರಿನಾಯಕರು ಜಾತ್ಯಾ ಚತುರರೂ ವೆಚ್ಚ ಮಾಡುವದರಲ್ಲಿ ಸಡಿಲು ಕೈಯುಳ್ಳವರೂ ಆಪ್ತರಿಷ್ಟರೊಡನೆ ಪ್ರೇಮದಿಂದ ನಡೆದುಕೊಳ್ಳುವವರೂ ಆಗಿದ್ದರು. ಗಂಡಹೆಂಡರು ಪ್ರೇಮದಿಂದಿದ್ದು ಆದರದೊಂದಿಗೆ ವರ್ತಿಸುತ್ತಿದ್ದರು. ಅವರಿಗೆ ರಂಗಣ್ಣನೆಂಬ ನಾಲೈದು ವರ್ಷದ ಬಾಲಕನಿದ್ದನು. ಹೀಗೆ ಸುಖಿಯಾಗಿದ್ದ ಶೇಷಗಿರಿನಾಯಕರು ಸಪತ್ನೀಕರಾಗಿ ಬೆಂಗಳೂರಿನಲ್ಲಿ ಕೆಲವು ದಿವಸ ಆನಂದದಲ್ಲಿ ಕಳೆಯಬೇಕೆಂದು ಬಂದಿದ್ದರು. ಅವರಾದರೂ ನಮ್ಮ ಮನೆಯ ಸಮೀಪದಲ್ಲಿರುವದೊಂದು ಚಿಕ್ಕ ಬಂಗಲೆ ತೆಗೆದುಕೊಂಡು ಇರಲಾರಂಭಿಸಿದರು.

ಒಂದು ದಿವಸ ಪ್ರಾತಃಕಾಲದಲ್ಲಿ ನಾನೂ ನಮ್ಮ ತಮ್ಮನಾದ ಮಾಧವರಾಯನೂ (ಮಾಧವನು ಎಂ.ಎ. ಆದ ಬಳಿಕ ನಾವೆಲ್ಲರೂ ಅವನಿಗೆ ಮಾಧವರಾಯನೆನ್ನುತ್ತೇವೆ) ಕೂಡಿ ಭಾಮಕ್ಕನ ಮನೆಗೆ ಉಪಾಹಾರಕ್ಕೆ ಹೋದೆವು. ಅಲ್ಲಿಯ ವ್ಯವಸ್ಥೆ ನೋಡಿರಿ: ಬಂಗಲೆಯ ಪ್ರಶಸ್ತವಾದ ಒಂದು ಭಾಗದಲ್ಲಿ ಒಂದು ವರ್ತುಲಾಕಾರದ ಮೇಜು ಇಟ್ಟಿದ್ದು ಆದರ ಸುತ್ತಲೂ ನಾಲ್ಕಾರು ಅಂದವಾದ ಕುರ್ಚಿಗಳನ್ನಿಟ್ಟಿದ್ದರು. ಚಿತ್ರಮಯವಾದ ಬನಾತವನ್ನು ಮೇಜಿನ ಮೇಲೆ ಹಾಸಿದ್ದು ಮಧ್ಯದಲ್ಲಿ ಪುನುಗು ಕಸ್ತೂರಿಯ ಊದಿನ ಕಡ್ಡಿಗಳುಳ್ಳ ಬೆಳ್ಳಿಯ ಗಿಡವು ಸುಗಂಧಮಯವಾದ ಹೊಗೆಯನ್ನು ತೂರುತ್ತಿತ್ತು. ಬೆಳ್ಳಿಯ ಹೂಜಿಗಳಲ್ಲಿ ವಿವಿಧವರ್ಣದ ಪುಷ್ಪಗಳನ್ನಿರಿಸಿ ಅವುಗಳನ್ನು ಊದಿನಕಡ್ಡಿಯ ಗಿಡದ ಸುತ್ತಲೂ ಪರಿಷ್ಕಾರವಾಗಿ ಇಟ್ಟಿದ್ದರು. ನಾಲ್ಕು ಬೆಳ್ಳಿಯ ಹರಿವಾಣಗಳಲ್ಲಿ, ಕಂಡರೆ ಬಾಯಿಗೆ ನೀರು ಬರುವಂಥ ಉಪಾಹಾರದ ಪಕ್ವಾನ್ನಗಳು ಒಳಿತಾಗಿ ಶೋಭಿಸುತ್ತಿದ್ದವು. ಹೆಚ್ಚಿದ ಸೇಬುಗಳ ತುಂಡುಗಳೂ, ಸುಲಿದ ಕಿತ್ತಳೆಗಳ ಪಳುಕುಗಳೂ, ದ್ರಾಕ್ಷದ ಗೊಂಚಲುಗಳೂ, ಮಾಣಿಕದ ಪ್ರಭೆಯನ್ನು ಹೀಯಾಳಿಸುವಂಥ ದಾಳಿಂಬದ ಬೀಜಗಳ ಗೋಪುರಗಳೂ ಅನೇಕ ಪ್ರಕಾರದ ಪಾತ್ರೆಗಳಲ್ಲಿ ತುಂಬಿಕೊಂಡಿದ್ದವು.

ನಾನೂ, ಮಾಧವನೂ, ನಾಯಕರೂ, ಭಾಮಕ್ಕನೂ ಹೀಗೆ ನಾಲ್ಕೂ ಜನರು ಉಪಾಹಾರಕ್ಕೆ ಕುಳಿತೆವು.

”ನಾಯಕರೆ, ನಿಮ್ಮಲ್ಲಿಯ ವ್ಯವಸ್ಥೆ ಚನ್ನಾಗಿದೆ. ಆದರೂ ನಿಮಗಿನ್ನೂ ಯುರೋಪಿಯನ್ ವ್ಯವಸ್ಥೆಯು ಚನ್ನಾಗಿ ಸಾಧಿಸಿಲ್ಲ. ಪದಾರ್ಥಗಳನ್ನೆಲ್ಲ ಹೀಗೆ ಒಮ್ಮೆಲೇ ತಂದು ಒಟ್ಟತಕ್ಕದಲ್ಲ. ಬೆಳ್ಳಿಬಂಗಾರದ ಪಾತ್ರೆಗಳಿಗಿಂತ ಚೀನಾ ಭಾಂಡಗಳು ಪ್ರಶಸ್ತವಾದವುಗಳು. ಹೀಗೆ ಇನ್ನೂ ಅನೇಕ ಸೂಚನೆಗಳನ್ನು ಮಾಡಬಹುದು” ಎಂದು ಮಾಧವರಾಯನು ಹೇಳಿದನು.

”ಸೂಚನೆ ಮಾಡಲಿಕ್ಕೆ ಅಡ್ಡಿ ಇಲ್ಲ, ಆದರೂ ಭಾಟವಡೇಕರ, ಕರಂದೀಕರ, ಅಜರೇಕರ, ಗೋಖಲೆ, ಜೋಗಳೇಕರ ಮುಂತಾದ ಪಾಶ್ಚಾತ್ಯ ಸುಧಾರಣಾಗ್ರಾಹಿಗಳ ಮನೆಯಲ್ಲಿ ಇಂಥದೇ ವ್ಯವಸ್ಥೆ ಇರುವದು” ಎಂದು ನಾಯಕರು ಹೇಳಿದರು.

“ಯಾವದೇ ಮಾತಿನಲ್ಲಿಯಾಗಲೀ, ಪ್ರಗತಿಗೆ ಪ್ರತಿಕೂಲವಾದ ಮಾತುಗಳನ್ನು ತೆಗೆದು ಹಾಕುವದೂ ಅದಕ್ಕೆ ಅನುಕೂಲವಾದವುಗಳನ್ನು ಸಂಗ್ರಹಿಸುವದೂ ಸುಧಾರಣೆಯೆಂದೆನಿಸುವದಷ್ಟೇ? ಈ ನಮ್ಮ ಉಪಾಹಾರದ ಉಪಕರಣಗಳಲ್ಲಿ ಸೌಕರ್ಯಕ್ಕೆ ಪ್ರತಿಕೂಲವಾದವುಗಳಾವವು ಹೇಳಬಾರದೆ, ಪಂಡಿತಜೀ?” ಎಂದು ನಾನು ಮಾಧವರಾಯನನ್ನು ಕುರಿತು ಪ್ರಶ್ನೆ ಮಾಡಿದೆನು.

ಮಾಧವನು ತುಸು ಚಕಿತನಾಗಿ “ಅಣ್ಣಾ, ಸುಧಾರಣೆಯ ಮಾತುಗಳು ಬೇರೆ, ಶಿಷ್ಟಾಚಾರದ ಮಾತುಗಳು ಬೇರೆ. ಬ್ರೆಕಫಸ್ಟ್ (ಉಪಾಹಾರ), ಟೀ (ಚಹ) ಮುಂತಾದ ಮಾತುಗಳಲ್ಲಿ ನಾವು ಯುರೋಪಿಯನ್ ಪದ್ಧತಿಯನ್ನೇ ಅನುಕರಿಸಬೇಕು. ಅವರಲ್ಲಿಯ ಕೆಲವು ಆಚಾರಗಳು ಅಪದ್ಧವಾಗಿ ಕಂಡರೂ ಶಿಷ್ಟಾಚಾರವೆಂದು ನಾವಾದರೂ ಅವರಂತೆಯೇ ಮಾಡತಕ್ಕದ್ದು” ಎಂದು ಹೇಳಿದನು.

“ಏನು? ಯುರೋಪಿಯನ್ನರೇ ಶಿಷ್ಟರು, ಅವರು ಮಾಡುವದೇ ಶಿಷ್ಟಾಚಾರವೆ? ನಾವೇಕೆ ಶಿಷ್ಟರಲ್ಲ? ನಮ್ಮ ಆಚಾರಗಳೇ ಶಿಷ್ಟಾಚಾರವೆಂದು ಅವರು ಅನುಕರಿಸಲಿ! ಮಾಧವರಾಯ, ನೀನು ಯುರೋಪಿಯನ್ನರ ಪಂಗ್ತಿಗೆ ಹೋದಾಗ ಅವರ ಆಚಾರಗಳಂತೆ ನಡಕೊಳ್ಳು ಬೇಕಾದರೆ” ಎಂದು ಭಾಮಕ್ಕನು ನಗುತ್ತೆ ನುಡಿದಳು.

“ಯುರೋಪಿಯನ್ನರು ನಮ್ಮ ಮಾಧವರಾಯರನ್ನು ಪಂಗ್ತಿಗೆ ಕರಕೊಂಡಾಗ ಈ ಮಾತು” ಎಂದು ನಾನು ಅಂದೆನು.

“ಅದಿರಲಿ, ನಾವು ನಮ್ಮ ಚಹಾ ‘ಪಾರ್ಟಿ’ಯಲ್ಲಿ ಸುಧಾರಣೆ ಮಾಡುವದು ಅವಶ್ಯವಿರುವದೇನು ಎಂಬುದನ್ನು ವಿಚಾರಿಸುವಾ. ಉತ್ತಮವಾದ ಪದಾರ್ಥಗಳನ್ನು ವ್ಯವಸ್ಥಿತವಾಗಿ ಮಂಡಿಸಿ ವಿನೋದದ ಮಾತುಗಳನ್ನಾಡುತ್ತ ತಿಂದರಾಯಿತು. ಹಣ್ಣು ತಿನ್ನುವವನು ಪೂರ್ವಾಭಿಮುಖನಾಗಿ ತಿನ್ನಬೇಕೆಂದು ಯುರೋಪಿಯನ್ನನು ಹೇಳಿದನೆಂದು ತಿಳಿಯಿರಿ, ಕೇಳುವವರಾರು?” ಎಂದು ಶೇಷಗಿರಿನಾಯಕರು ನುಡಿದರು. ಅಷ್ಟರಲ್ಲಿ ಅಪೂರ್ವಳಾದ ಸುಂದರಿಯೋರ್ವಳು ಮೆಲ್ಲನೆ ಬಾಗಿಲ ತೆರೆದು ”ಅಕ್ಕಾ, ಈ ರಂಗಣ್ಣನನ್ನು ತುಸು ಕರಕೊಳ್ಳಿರಿ. ತ್ರಾಸ ಕೊಡುತ್ತಾನೆ. ಚಹ ಸೋಸಗೊಡಲೊಲ್ಲನು” ಎಂದು ರಂಗಣ್ಣನನ್ನು ಕೈಯಲ್ಲಿ ಹಿಡುಕೊಂಡು ಬಂದು ಮರಾಠೀ ಭಾಷೆಯಲ್ಲಿ ಬಲು ಮೆಲ್ಲಗೆ ಹೇಳಿದಳು.

ರಂಗನು ಸ್ಫೂರ್ತಿಯಿಂದ “ಬೇಂಡ್‌ಬಾಜೆ”ಯನ್ನೂದುತ್ತೆ ತನ್ನ ತಾಯಿಯ ಬಳಿಯಲ್ಲಿ ಬಂದು ನಿಂತನು. ಆ ಸುಂದರಿಯು ಮತ್ತೆ ಒಳಗೆ ಹೋದಳು.

ಏನು ಸೌಂದರ್ಯವದು! ಇಂಥ ರೂಪವತಿಯನ್ನು ನಾನು ನೋಡಲೇ ಇಲ್ಲ. ಅವಳ ಗೌರವವರ್ಣವೂ ಪ್ರೌಢಿಮೆಯಿಂದ ಮೆರೆಯುವ ಅವಳ ಸುಂದರವಾದ ಮುಖವೂ, ಮಂಜುಲವಾದ ವಾಣಿಯೂ ಮನೋವೇಧಕವಾಗಿದ್ದವು. ಮುಂಬಯಿಯ ‘ಪರಭೂ’ ಸುಂದರಿಯರಂತೆ ಅವಳು ತನ್ನ ನೀಲಾಲಕಗಳನ್ನು ಚನ್ನಾಗಿ ಬಾಚಿ ಚಮತ್ಕಾರವಾಗಿ ಕಾಣುವಂಥ ‘ಬುಚಡೆ’ಯನ್ನು ಕಟ್ಟಿದ್ದಳು. ಬದನೀ ಬಣ್ಣದ ರೇಸಿಮೆಯ ಜರತಾರೀ ಸೀರೆಯು ಅವಳ ಮನೋರಮವಾದ ಮೈಕಟ್ಟಿಗೆ ಒಳಿತಾಗಿ ಒಪ್ಪುತ್ತಿತ್ತು. ಅವಳ ಮುಂಗೈ ಮೇಲಿದ್ದ ಅನರ್ಘ್ಯವಾದ ಹರಡ-ಕಂಕಣ ಗೋಟು ತೋಡೆಗಳಿಗೆ ಅವಳ ರುಚಿರವಾದ ಹಸ್ತಗಳೇ ಅಲಂಕಾರವಾಗಿದ್ದವೋ ಆ ಹಸ್ತಗಳಿಗೆ ಆ ಜಡ ಪದಾರ್ಥಗಳೇ ಅಲಂಕಾರವೋ ಹೇಳಲಾಗದು. ನಮ್ಮ ನಿರೀಕ್ಷಣಕ್ಕೆ ಈಡಾಗದೇ ಆ ಸುಂದರಿಯು ನಿಲ್ಲದೆ ಹೊರಟು ಹೋದದ್ದರಿಂದ ನಾನಾದರೂ ಅವಳ ವರ್ಣನೆಯನ್ನು ಹೆಚ್ಚಿಗೆ ಮಾಡಲಾರೆನು.

“ಭಾಮಕ್ಕಾ, ಈ ಪ್ರಾಣಿ ಯಾರು?” ಎಂದು ಮಾಧವರಾಯನು ಕೇಳಿದನು.

“ಇವಳೇ?” ಎಂದು ಉದ್ಗಾರ ತೆಗೆದು ಭಾಮಕ್ಕನು ತನ್ನ ಗಂಡನ ಕಡೆಗೆ ಕೈಮಾಡಿ ”ಇವರ ಸೋದರ ಸೊಸೆಯು” ಎಂದು ನುಡಿದು ನಕ್ಕಳು.

”ನಗಲಿಕ್ಕೇನಾಯಿತು?” ಎಂದು ನಾಯಕರು ಹೆಂಡತಿಯ ಮೇಲೆ ತುಸು ರುಷ್ಟರಾಗಿ ಕೇಳಿದರು.

ಭಾಮಕ್ಕನು ಗಂಡನ ಕೋಪವನ್ನು ಲೆಕ್ಕಿಸದೆ ”ಊರೆಲ್ಲ ನಕ್ಕರೂ ನಾವು ನಗಕೂಡದು!” ಎಂದು ನುಡಿದು ಮತ್ತೆ ನಕ್ಕಳು.

ಈ ಚಮತ್ಕಾರವನ್ನು ಅರಿತುಕೊಳ್ಳುವ ಕುತೂಹಲದಿಂದ ನಾನು ಕೇಳಿದ್ದು: “ಭಾಮಾ, ಇವಳು ನಿನ್ನ ಸೊಸೆಯಾದರೆ ನಮ್ಮೊಡನೆ ಚಹ ತೆಗೆದುಕೊಳ್ಳಲಿಕ್ಕೆ ಬರಲಿಲ್ಲವೇಕೆ?”

“ಹೇಗೆ ಬಂದಾಳು ವೆಂಕಣ್ಣಾ! ದೊಡ್ಡ ಹೆಂಗಸಾಗಿದ್ದಾಳೆ. ಇನ್ನೂ ಮದುವೆ ಇಲ್ಲ. ಪಾಪ, ನಾಚಿಕೊಂಡು ಒಳಗೇ ಇರುತ್ತಾಳೆ. ಹಡೆದ ತಂದೆ ತಾಯಿಗಳಿಗೆ ಊಟ ಹೇಗೆ ಸವಿಯಾಗುವದೋ ಕಾಣೆ!” ಎಂದು ಭಾಮಕ್ಕನು ಗಂಡನನ್ನು ಓರೆಗಣ್ಣಿನಿಂದ ನೋಡಿ ನಕ್ಕಳು.

“ಅವರ ತಂದೆತಾಯಿಗಳ ಪಾಪ ಪುಣ್ಯ ಅವರ ಸುತ್ತ. ಇಲ್ಲಿಯೇ ನಿಮ್ಮ ತಮ್ಮನಿದ್ದಾನೆ; ಹೆಂಡತಿಯನ್ನು ಬಿಟ್ಟುಬಿಟ್ಟಿದ್ದಾನೆ. ನಿನಗೆ ಊಟ ಕಹಿ ಹತ್ತುತ್ತದೇನು?” ಎಂದು ನಾಯಕರು ಗಂಭೀರವಾದ ಮುದ್ರೆಯನ್ನು ತಳೆದು ಕೇಳಿದರು.

”ಬೇವಿನ ಕಾಯಿ ತಿಂದರೆ ಕಹಿ ಹತ್ತುತ್ತದೆ. ಸವಿಯೂಟ ಉಂಡು ಕಹಿ ಅನ್ನಲಿಯಾ?” ಎಂದು ನಾಯಕರ ಪ್ರೇಯಸಿಯು ನುಡಿದು ಮತ್ತೆ ನಕ್ಕಳು.

ನಾಯಕರ ಗಂಭೀರವಾದ ಮುಖಮುದ್ರೆಯು ಅಡಗಿ ಅಲ್ಲಿ ಮಂದಹಾಸವು ತೋರಿತು. ಅವರು ತಮ್ಮ ಚಿನ್ನದ ಗಡಿಯಾರವನ್ನು ತೆಗೆದು “ಓಹೋ, ಏಳುವರೆಯಾಯಿತು” ಎಂದು ಯಂತ್ರದ ಗಂಟೆ ಬಡಿದು ಮೇಲೆ ”ನಾರ್ಣಮ್ಮಾ, ಚಹ ಸಿದ್ದವಾಗಿದೆಯೋ ಇಲ್ಲವೊ?” ಎಂದು ಅಡಿಗೆಯವಳನ್ನು ಕೂಗಿ ಕೇಳಿದರು.

ಆಗಲಿನ ವಾಗ್ಬಾಣ ಬಡೆದು ತುಸು ಚಿಂತಾಕ್ರಾಂತನಾಗಿದ್ದ ಮಾಧವರಾಯನು ನಾಯಕರ ಕಡೆಗೆ ಮೋರೆ ತಿರುವಿ ”ನಾಯಕರೆ, ಯುರೋಪಿಯನ್ ಪದ್ಧತಿಯಂತೆ ನೀವು ಗಂಟೆ ಬಡಿದಿರಿ, ಸರಿಯಾಯಿತು; ಮೇಲೆ ನಾರ್ಣಮ್ಮನನ್ನು ಕೂಗಿದಿರೇಕೆ?” ಎಂದು ನುಡಿದು ಖೊಳ್ಳನೆ ನಕ್ಕನು.

ಶೇಷಗಿರಿನಾಯಕರ ಮುಖದಲ್ಲಿ ಹುಚ್ಚು ಕಳೆ ಇಡುಗಿತು. ಅವರಿಂದ ಅಚಾತುರ್ಯವೇ ಆಗಿತ್ತು. ಅವರಂದದ್ದು: ”ಗಂಟೆ ಬಾರಿಸಿದ ಕೂಡಲೆ ಬರಬೇಕೆಂದು ನಾವು ನಾರ್ಣಮ್ಮನಿಗೆ ಕಲಿಸದಿದ್ದರೆ ಬಾರಿಸಿದ ಕೂಡಲೆ ಅವಳು ಬರುವದು ಹೇಗೆ? ನಾನು ನಿನ್ನೆಯೇ ಈ ಗಂಟೆಯನ್ನು ಈ ಊರಲ್ಲಿ ಕೊಂಡೆನು. ಇದು ಹೊಸ ವಸ್ತುವಾದ್ದರಿಂದ ಹೇಗೆ ನುಡಿಯುತ್ತದೆಯೋ ನೋಡಿದೆನು.”

ಅಷ್ಟರಲ್ಲಿ ಚಹ ಬಂದಿತು. ಎಲ್ಲರೂ ‘ಸಾಸರ’ಗಳಲ್ಲಿ ಚಹ ಹಾಕಿ ಆರಿಸಿಕೊಂಡು ಕುಡಿಯಲಾರಂಭಿಸಿದರು.

ಮಾಧವರಾಯನು ಚಹವನ್ನಾಸ್ವಾದಿಸಿ, ”ಚಹ ಮಾತ್ರ ಸರ್ವೋತ್ಕೃಷ್ಟವಾಗಿದೆ” ಎಂದು ಗಟ್ಟಿಯಾಗಿ ನುಡಿದನು. ಭಾಮಕ್ಕನು ಅವನನ್ನು ದಿಟ್ಟಿಸಿ ನೋಡಿದಳು.

ಮರುದಿವಸ ಶೇಷಗಿರಿನಾಯಕರು ನಮ್ಮ ಮನೆಗೆ ಬಂದಾಗ ನಾನು ಅವರ ಸೋದರ ಸೊಸೆಯೆಂದರೆ ಯಾರ ಮಗಳು? ಇಷ್ಟು ದಿವಸ ಅವಳು ಅವಿವಾಹಿತಳಾಗಿ ಉಳಿದದ್ದು ಹೇಗೆ? ಅವಳ ವಿದ್ಯಾವ್ಯಾಸಂಗಗಳೇನು? ಮುಂತಾದ ಪ್ರಶ್ನೆಗಳನ್ನು ಮಾಡಿದೆನು. ನಾಯಕರು ಇದ್ದ ಸಂಗತಿಯನ್ನೆಲ್ಲ ಸ್ವಲ್ಪದರಲ್ಲಿ ಹೇಳಿದರು. ಮಾಧವರಾಯನು ಅದನ್ನೆಲ್ಲ ಲಕ್ಷ್ಯಕೊಟ್ಟು ಕೇಳುತ್ತಿದ್ದನು.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ಶೇಷಗಿರಿನಾಯಕರ ತಾಯಿಯು ಜೋಗಂಬೆಯ ಜಗೋಪಂತ ಕಾಥವಟೆಯವರ ಮಗಳು. ದೇಶಸ್ಥರಲ್ಲಿ ಇರುವ ರೂಢಿಗನುಸರಿಸಿ ತಮ್ಮಣ್ಣ ನಾಯಕರು ತಮ್ಮ ಮಗಳನ್ನು ಮತ್ತೆ ಜಗೋಪಂತರ ಮಗನಾದ ಮನೋಹರ ಪಂತನಿಗೆ ಕೊಟ್ಟಿದ್ದರು. ಆ ಮನೋಹರಪಂತರ ಮಗಳೇ ನಾವು ಮೇಲೆ ವಿವರಿಸಿದ ಅವಿವಾಹಿತಳಾದ ಸುಂದರಿಯು. ಅವಳ ಹೆಸರು ಚಂದ್ರಭಾಗಾ. ಜಗೋಪಂತರು ತೀರಿಕೊಂಡ ಬಳಿಕ ಮನೋಹರಪಂತನು ಪುಣೆಯಲ್ಲಿ ಮನೆ ಮಾಡಿಕೊಂಡಿದ್ದನು. ಅಲ್ಲಿ ಅವನು ಮಾಧವರಾವ ರಾನಡೆ, ವಿಷ್ಣು ಮೋರೇಶ್ವರ, ಅಗಸ್ತಿ ಮುಂತಾದ ಸುಧಾರಕಾಗ್ರಣಿಗಳ ಪಟ್ಟದ ಶಿಷ್ಯನಾಗಿದ್ದು, ಆ ಮಹಾತ್ಮರ ಪಶ್ಚಾತ್ ಮನೋಹರಪಂತನೇ ಪುಣೆಯಲ್ಲಿಯ ಸುಧಾರಕರ ಅಗ್ರಗಣಿಯೆಂದು ಎಲ್ಲರೂ ಮಾತಾಡುತ್ತಿದ್ದರು. ಮನೋಹರಪಂತನು ತನ್ನ ಮಗಳನ್ನು ಪುಣೆಯಲ್ಲಿಯ ಫೀಮೇಲ ಹಾಯಸ್ಕೂಲಿನಲ್ಲಿ ಅಭ್ಯಾಸಕ್ಕೆ ಇಟ್ಟಿದ್ದನು. ಅಲ್ಲಿ ಚಂದ್ರಭಾಗೆಯು ಇಂಗ್ಲಿಷ್ ಕಲಿತದ್ದಲ್ಲದೆ ಗಾನ, ಚಿತ್ರಕಲೆ, ಕಸೀದೆ ತೆಗೆಯುವದು ಮುಂತಾದ ಅಭಿನವ ಕಲೆಗಳಲ್ಲಿಯಾದರೂ ನಿಷ್ಣಾತಳಾಗಿದ್ದಳು. ತನ್ನ ಮಗಳು ಹದಿನೆಂಟು ವರ್ಷದ ಪ್ರಾಯದವಳಾಗುವವರೆಗೆ ಅವಳ ವಿವಾಹವನ್ನು ಮಾಡುವುದಿಲ್ಲೆಂದೂ ಅವಳ ಇಚ್ಛೆಗೆ ಬಂದ ವರನಿಗೆ ಮಾತ್ರ ಅವಳನ್ನು ಕೊಡುವೆನೆಂದೂ ಮನೋಹರಪಂತನು ನಿಶ್ಚಯಿಸಿದ್ದನು. ಅವನ ನಿಶ್ಚಯವೇ ಕೊನೆಗಾಣುವ ಹೊತ್ತು ಬಂದಿತು. ಯಾಕೆಂದರೆ ರಜಸ್ವಲೆಯಾದ ಚಂದ್ರಭಾಗೆಯನ್ನು ಹಳೆ ಸಾಂಪ್ರದಾಯದವರಂತೂ ಮಾಡಿಕೊಳ್ಳುವ ಮಾತೇ ದೂರಾಗಿ ಹೋಗಿತ್ತು. ಇನ್ನು ಸುಧಾರಕರ ಚಿಕ್ಕಮೇಳೆಯಲ್ಲಿ ಚಂದ್ರಭಾಗೆಗೆ ಅನುರೂಪನಾದ ಪತಿಯು ದೊರಕುವನೋ ಇಲ್ಲವೋ ಎಂಬ ಶಂಕೆಯಿತ್ತು.

ಅಕ್ಕನ ಮೇಲೆ ಭಕ್ತಿ ಹೆಚ್ಚಾಗಿ ಮಾಧವನು ದಿನಾಲು ಶೇಷಗಿರಿನಾಯಕರ ಮನೆಗೆ ಎಡತಾಕಲಾರಂಭಿಸಿದನು. “ಹಸಿವೆಯಾಗಿದೆ, ಅಕ್ಕಾ ಏನಾದರೂ ತಿನ್ನಲಿಕ್ಕೆ ಕೊಡು” ಎಂದು ನೆವಮಾಡಿಕೊಂಡು ಒಮ್ಮೆ ಹೋಗುವನು. ಮರೆತು ಬಂದ ಬಡಿಗೆಯನ್ನು ತರಲಿಕ್ಕೆ ಮತ್ತೊಮ್ಮೆ ಹೋಗುವನು. ಲಾಲಬಾಗಕ್ಕೆ ಬರುವಿರೇನೆಂದು ಶೇಷಗಿರಿ ನಾಯಕರನ್ನು ಕರೆಯಲಿಕ್ಕೆ ಒಂದಾವರ್ತಿ ಹೋಗುವನು. ಹೀಗೆ ಸಕಾರಣ ನಿಷ್ಕಾರಣವಾಗಿ ಮಾಧವನು ನಾಯಕರ ಮನೆಗೆ ನಿತ್ಯದಲ್ಲಿಯೂ ಹೋಗಿಬರುತ್ತಿದ್ದನು.

ಭಾಮಕ್ಕನ ಮನೆಯಲ್ಲಿಯ ರುಚಿಕರವಾದ ಮಾವಿನ ಹಣ್ಣಿನ ಒಡೆಗಳನ್ನು ಯಾರು ಮಾಡಿದರೆಂದು ಮಾಧವನು ಕೇಳಿದರೆ ಅವುಗಳನ್ನು ಚಂದ್ರಭಾಗೆಯೇ ಮಾಡಿದಳೆಂಬ ಉತ್ತರ ಬಂದಿತು. ರಂಗಣ್ಣನ ತಲೆಯ ಮೇಲಿನ ಅಂದವಾದ ಟೊಪ್ಪಿಗೆಯನ್ನು ಹೆಣೆದವಳು ಚಂದ್ರಭಾಗೆಯೇ. ಆ ಹುಡುಗನಿಗೆ ಮನೆಯಲ್ಲಿ ಕಲಿಸುವವಳು ಅವಳೇ. ಒಳಗಿನ ಮನೆಯಲ್ಲಿ ಕುಳಿತು ಮೆಲ್ಲಗೆ ಬಹು ಮಂಜುಲವಾಗಿ ಚಂದ್ರಭಾಗೆಯು ಹಾಡುತ್ತಿದ್ದರೆ ಅವಳು ತಾಲಮಟ್ಟುಗಳನ್ನು ಬಿಟ್ಟಿರಲಿಲ್ಲ. ಪುಣೆಯಲ್ಲಿ ಇಂಗ್ಲಿಷ್ ಕಲಿತವಳಾಗಿದ್ದರೂ ಅವಳು ಅವಿನೀತೆಯಾಗಿ ಇದ್ದಿಲ್ಲ. ಒಂದು ದಿನ ಸತ್ಯಭಾಮೆಯು ಮೈತೊಳೆದುಕೊಳ್ಳಲಿಕ್ಕೆ ಬಚ್ಚಲಕ್ಕೆ ಹೋದದ್ದು ಮಾಧವನಿಗೆ ಗೊತ್ತಿದ್ದರೂ ಅವನು ಮೆಲ್ಲನೆ ಚಂದ್ರಭಾಗೆಯ ಸಮೀಪಕ್ಕೆ ಬಂದು ”ಭಾಮಕ್ಕನಲ್ಲಿ?” ಎಂದು ಕೇಳಿದಾಗ ಆ ಲಲನೆಯು ಪರಿವೃತ್ತಾರ್ಧ ಮುಖಿಯಾಗಿ ಎಳೆನಗೆ ತೋರುತ್ತ ”ಮೈ ತೊಳೆಯುತ್ತಿರುವರು” ಎಂದು ಬಹು ಮಂಜುಲವಾಗಿ ಹೇಳಿದಳು. ”ನಾನು ವರನು ನೀನು ಕನ್ನೆ ಏನು ಅನಹಿತಾ?” ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತ ಅವನು ಹೊರಟುಹೋದನು.

ಮಾಧವನಿಗೆ ಚಂದ್ರಭಾಗೆಯ ಹುಚ್ಚೇ ಹಿಡಿಯಿತು. ಕನಸುಮನಸ್ಸಿನಲ್ಲಿ ಕೂಡಿಯೇ ಚಂದ್ರಭಾಗೆಯ ಹೊರತಾಗಿ ಇನ್ನೊಂದು ವಿಷಯವೇ ಇಲ್ಲ. ಕಡೆಗವನು ಒಂದು ದಿನ ಗಟ್ಟಿ ಧೈರ್ಯ ಮಾಡಿ ಅಕ್ಕನ ಬಳಿಗೆ ಬಂದು ”ಅಕ್ಕಾ, ನಿನ್ನೊಡನೆ ಒಂದು ಆಲೋಚನೆ ಮಾಡಬೇಕಾಗಿದೆ” ಎಂದಂದನು.

”ಏನದು?” ಎಂದು ಸತ್ಯಭಾಮೆಯು ಮುಗುಳುನಗೆ ನಗುತ್ತ ಕೇಳಿದಳು. ಅವಳಿಗೆ ಮಾಧವನ ಮನಸ್ಸಿನೊಳಗಿನ ಮಾತು ತಿಳಿದೇ ಹೋಗಿತ್ತು.

“ಹೇಳೆಂದರೆ ಹೇಳುತ್ತೇನೆ” ಎಂದು ಮಾಧವನು ಲಜ್ಜಾಗ್ರಸ್ತನಾಗಿ ನುಡಿದನು.

“ಹೇಳು, ನನ್ನ ಮುಂದೆ ಯಾತರ ಸಂಕೋಚ?”

“ನಾನು ಎರಡನೆಯ ಲಗ್ನ ಮಾಡಿಕೊಳ್ಳುವದಂತೂ ನಿಶ್ಚಯವೇ. ಈ ಚಂದ್ರಭಾಗೆಯನ್ನು ನನಗೇಕೆ ಕೊಡಿಸಬಾರದು?”

ಈ ಮಾತು ಕೇಳಿ ಸತ್ಯಭಾಮೆಯು ಚಕಿತಳಾಗಿ “ಹುಚ್ಚನೇನು ನೀನು ಮಾಧವರಾಯಾ? ಆ ಹುಡುಗೆ ಮೈನೆರೆದು ಮೂರು ವರ್ಷಗಳಾಗಿವೆ ಅಂತೆ. ಹಿರಿಯರು ಕೇಳಿದರೆ ನನ್ನ ನಿನ್ನ ಕೂಡಿಯೇ ಬಡಿದಾರು!” ಎಂದು ಅಧಿಕ್ಷೇಪಿಸಿ ನುಡಿದಳು.

”ಹೀಗೆಯೇ ನಾನು ಸನ್ಯಾಸಿಯಂತೆ ಇರಬೇಕೆಂಬುದು ನಿನ್ನ ಮನಸ್ಸೆ?”

”ಯಾಕೆ? ನಿನ್ನ ಹೆಂಡತಿಯನ್ನು ಕರಸಿಕೋ; ಸುಖದಿಂದ ಇರು. ಅವಳೇನು ಕುರುಡಿಯೇ? ಕುಂಟಿಯೇ? ಏನಾಗಿದೆ? ಕಲಿತು ಪಂಡಿತನಾಗಿರುವೆನೆಂದು ಹೇಳುತ್ತೀ.”

”ಭಾಮಕ್ಕಾ, ನಿನಗಿಂತ ನನಗೆ ಚನ್ನಾಗಿ ತಿಳಿಯುತ್ತದೆ. ನಾನು ನಿನ್ನ ಉಪದೇಶ ಕೇಳಲಿಲ್ಲ. ಚಂದ್ರೆಯನ್ನು ಕೊಡಿಸುವಿಯೋ ಇಲ್ಲವೋ ನನಗೆ ಹೇಳಿಬಿಡು.”

“ಕೊಡಿಸುವುದು ದೊಡ್ಡ ಮಾತಲ್ಲ ಮಾಧವಾ, ನಿನ್ನಂಥವನಿಗೆ ಮಾಲೆ ಹಾಕದೆ ಅವಳು ಮತ್ತಿನ್ಯಾರಿಗೆ ಹಾಕುವಳು? ಆದರೆ ಮೈನೆರೆದ ಹುಡುಗೆಯನ್ನು ನೀನು ಮದುವೆಯಾದರೆ ಜನರು ನಮ್ಮನ್ನು ಎತ್ತಿ ಇಟ್ಟಾರು; ಕಾಣದೆ?”

”ಏನು ಹೇಳುತ್ತಿ ಬಿಡು. ದುಷ್ಯಂತ, ನಳರಾಜ, ಪರಾಶರ, ಅರ್ಜುನ ಮುಂತಾದ ಮಹಾತ್ಮರು ಮೈನೆರೆದವರನ್ನೇ ಮದುವೆಯಾಗಲಿಲ್ಲೆ?”

“ವ್ಯಾಖ್ಯಾನ ಕೊಡುವಿರೇನು ಎಂ.ಎ. ಪಂಡಿತರೆ? ಕೊಡುವದಾದರೆ ಚನ್ನಾಗಿ ಎದ್ದುನಿಂತು ‘ಮಹಿಳೆಯರೆ, ಸಭ್ಯಗೃಹಸ್ಥರೆ,’ ಎಂದು ಉಪಕ್ರಮಿಸಿ ಗಳಿಗೆ ಎರಡುಗಳಿಗೆ ವ್ಯಾಖ್ಯಾನ ಕೊಡು. ನಿನ್ನ ಪರೀಕ್ಷೆಯಾಗಿ ಹೋಗಲಿ.”

”ಅಂತಃಕರಣದ ಅಕ್ಕನೆಂದು ನಿನ್ನ ಮುಂದೆ ಹೊಟ್ಟೆ ತೋಡಿಕೊಂಡರೆ ಭಾಮಕ್ಕಾ, ನೀನು ನಗೆಯಾಡುವಿಯಾ?” ಎಂದು ಮಾಧವನು ಹೀನಸತ್ವನಾಗಿ ನುಡಿದನು.

“ಅಪ್ಪಾ, ಈ ಮಾತಿನಲ್ಲಿ ನನಗೇನೂ ತಿಳಿಯದು. ಅವರಿದ್ದಾರೆ (ಅವರೆಂದರೆ ಗಂಡ), ಬೇಕಾದಂಥ ಕರ್ತಾಪುರುಷನಾದ ನಿಮ್ಮಣ್ಣನಿದ್ದಾನೆ. ನೀನಾದರೂ ದೊಡ್ಡ ಪರೀಕ್ಷೆಕೊಟ್ಟವನು. ಮೂರೂ ಮಂದಿ ಕಲೆತು ಬೇಕಾದ್ದು ಮಾಡಿರಿ. ಕೊಡಿಸೆಂದರೆ ಕನ್ಯಾ ಕೊಡಿಸಲಿಕ್ಕೆ ನಾನು ಸಿದ್ದಳು.”

WhatsApp Image 2025 01 11 at 12.09.02

ಸಾಯಂಕಾಲಕ್ಕೆ ನಾನೂ ಮಾಧವರಾಯನೂ ಶೇಷಗಿರಿನಾಯಕರೂ ಕಲೆತು ಬಹಳೊತ್ತು ವಿಚಾರ ಮಾಡಿದೆವು. ಮಾಧವರಾಯನೆಷ್ಟು ಮಾಡಿದರೂ ತನ್ನ ಹಟ ಬಿಡಲಿಲ್ಲ. ಆಗ ನಾಯಕರು ಅಂದದ್ದು: “ನೋಡಿರಿ ಮಾಧವರಾಯರೆ, ನಿಮ್ಮ ಹಿರಿಯರನ್ನು ಹೇಗಾದರೂ ಮಾಡಿ ಒಡಂಬಡಿಸುವೆವು. ಆದರೆ ಚಂದ್ರಭಾಗೆಯನ್ನು ನೀವು ಚನ್ನಾಗಿ ಇಟ್ಟುಕೊಂಡು ಸಂಸಾರ ಮಾಡುವದು ನಿಶ್ಚಯವೇ? ಏನು ಮೂರನೆಯದೊಂದು ಹೆಣ್ಣು ಗಂಟು ಹಾಕಿರೆಂದು ಹೇಳುವಿರೋ?”

“ನಾನು ಕೇವಲ ಮೂರ್ಖನೆಂದು ನೀವು ತಿಳಿದು ಹೀಗೆ ಮಾತಾಡುವಿರೇನು ನಾಯಕರೇ?”

“ಕನ್ಯಾ ಮನಸ್ಸಿಗೆ ಬಂದಿರುವದೇನು?”

“ಚಂದ್ರಭಾಗೆಯಂಥ ಸುಂದರಿಯು ಮನಸ್ಸಿಗೆ ಬಂದಳೇನೆಂದು ಕೇಳಬೇಕೆ? ಅವಳಲ್ಲಿ ತೆಗೆಯುವಂಥದೇನೂ ಇಲ್ಲ. ತೊಳೆದ ಮುತ್ತು!” ಎಂದು ಮಾಧವನು ಮೋರೆ ಹಿಗ್ಗಿಸಿ ಹೇಳಿದನು.

”ಇದಕ್ಕೂ ಇನ್ನೇನು ಹೇಳಬೇಕು ನಾಯಕರೆ? ನಿಮಗೆ ಸಮಾಧಾನವಾಯಿತಷ್ಟೆ?” ಎಂದು ನಾನು ಕೇಳಿದೆನು.

”ವೆಂಕಟರಾಯರೆ, ನೀವು ಕನ್ನೆಯನ್ನು ಚೆನ್ನಾಗಿ ನೋಡಿರುವಿರಷ್ಟೆ?” ಎಂದು ನಾಯಕರು ನನ್ನನ್ನು ಕೇಳಿದರು.

“ನೋಡಿದಂತಾಗಿದೆ. ಮುಖ್ಯ ಮಾಧವನ ಮನಸ್ಸಿಗೆ ಬಂದಮೇಲೆ ಆಗಿಹೋಯಿತು. ಆದರೂ ಕರಿಸಿರಿ, ಇನ್ನೊಮ್ಮೆ ನೋಡೋಣ.”

“ಯಾರು! ಗುಂಡಕ್ಕನನ್ನು ಹೀಗೆ ಕರೆದುಕೊಂಡು ಬರಬಾರದೆ!” ಎಂದು ನಾಯಕರು ತಮ್ಮ ಹೆಂಡತಿಗೆ ಹೇಳಿದರು.

ಗುಂಡಕ್ಕನೆಂಬ ಹೆಸರು ಕೇಳಿದಾಕ್ಷಣವೇ ನಾನು ಚಕಿತನಾದೆನು. ಮಾಧವನ ಮೋತಿಯಂತೂ ಹುಚ್ಚಿಟ್ಟಿತು. ”ಗುಂಡಕ್ಕನಾರು?” ಎಂದು ನಾನು ಕೇಳಿದೆನು.

”ಮತ್ತಾವ ಗುಂಡಕ್ಕ? ನಿಮ್ಮ ಅನುಜರ ಪ್ರೀತಿಯ ಹೆಂಡತಿಯೇ ಅವಳು. ಈಗ ವಿನೋದಕ್ಕಾಗಿ ಚಂದ್ರಭಾಗಾ ಎಂಬ ಹೆಸರಿಟ್ಟುಕೊಂಡಿದ್ದಾಳೆ” ಎಂದು ನಾಯಕರು ಗಹಗಹಿಸಿ ನಗುತ್ತ ನುಡಿದರು.

ಭಾಮಕ್ಕನು ಗುಂಡಕ್ಕನನ್ನು (ನಮ್ಮ ಮನೆಯ ಹೆಸರು ಲಲಿತಾ) ಕರಕೊಂಡು ಬಂದು ನಮ್ಮೆಲ್ಲರಿಗೂ ನಮಸ್ಕಾರ ಮಾಡಹೇಳಿದಳು.

ಆ ದಿವಸ ನಮಗೆಲ್ಲರಿಗೂ ಮಿತಿಮೀರಿದ ಆನಂದವಾಯಿತು. ಹಿರಿಯರ ಎದೆಯ ಮೇಲಿದ್ದ ದೊಡ್ಡ ಕಲ್ಲು ಇಳಿದಂತಾಗಿ ಅವರು ಸಮಾಧಾನದ ಉಸುರ್ಗರೆದರು. ಬೆಂಗಳೂರಲ್ಲಿಯೇ ಫಲಶೋಭನದ ಪ್ರಸ್ತವಾಗತಕ್ಕದ್ದು. ಸುಬ್ಬರಾಯರಿಗೆ ತಾರು ಕಳಿಸಿದ್ದೇವೆ. ಮುಹೂರ್ತವು ಅನಾಯಾಸವಾಗಿ ನಾಳಿನ ಇಂಗ್ರಜೀ ‘ನ್ಯೂ ಇಯರ್ಸ್ ಡೇ’ದ ದಿವಸ ಹೊರಟಿದೆ. ಸಂಪಾದಕರೆ, ಈ ಮಹೋತ್ಸವದ ದಿವಸವೇ ನೀವಾದರೂ ನಿಮ್ಮ ಡಿಸೆಂಬರದ ಸಂಚಿಕೆಯನ್ನು ಹೊರಡಿಸಿದರೆ ಬಹಳೇ ಒಳ್ಳೇದಾಗುವದು.

(ಕೃಪೆ: ಮಲ್ಲಿಗೆ ಮಾಸಪತ್ರಿಕೆ. “ತೊಳೆದ ಮುತ್ತು”, ಮನೋಹರ ಗ್ರಂಥಮಾಲೆ, ಧಾರವಾಡ, 1952)

Kerur Vasudevacharya

ಕೆರೂರರ ‘ತೊಳೆದ ಮುತ್ತು’

ಕನ್ನಡ ನವೋದಯದ ಆರಂಭಕಾರರಲ್ಲಿ ಇನ್ನೊಬ್ಬ ಮುಖ್ಯ ಲೇಖಕರು ದಿ. ಕೆರೂರ ವಾಸುದೇವಾಚಾರ್ಯರು (1866-1921). ಸಾಮಾನ್ಯವಾಗಿ ಶ್ರೀನಿವಾಸರಿಗಿಂತ ಮುಂಚೆ ಕನ್ನಡದಲ್ಲಿ ಸಣ್ಣಕತೆಗಳನ್ನು ಬರೆದವರೆಂದು ಇವರ ಹೆಸರನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ನಿಜವಲ್ಲ. ಶ್ರೀನಿವಾಸರ ಸಣ್ಣಕತೆಗಳು ಮೊದಲು ಪ್ರಕಟವಾಗತೊಡಗಿದ್ದು 1911ರಲ್ಲಿ. ಕೆರೂರರ ಕತೆಗಳು ಪ್ರಕಟವಾದದ್ದು 1913ರಿಂದ 1917ರ ನಡುವಿನ ಅವಧಿಯಲ್ಲಿ. ಆದರೆ ಶ್ರೀನಿವಾಸರಿಗಿಂತ ಎರಡು ವರ್ಷ ತಡವಾಗಿ ಬರೆಯಲು ಆರಂಭಿಸಿದರೂ, ಶ್ರೀನಿವಾಸರು ತಮ್ಮ ಹತ್ತು ಕತೆಗಳ ಮೊದಲ ಸಂಕಲನವನ್ನು ಪ್ರಕಟಿಸುವುದಕ್ಕಿಂತ (1920) ಮೂರು ವರ್ಷ ಮುಂಚೆಯೇ, ಐದೇ ವರ್ಷಗಳ ಅವಧಿಯಲ್ಲಿ ಕೆರೂರರು 35ರಷ್ಟು ಕಥೆಗಳನ್ನು ಬರೆದು ಪ್ರಕಟಿಸಿದ್ದು ಮಾತ್ರ ವಿಶೇಷವಾಗಿದೆ.

ಕೆರೂರರ ಎಲ್ಲಾ ಕಥೆಗಳೂ ಧಾರವಾಡದಿಂದ ಹೊರಡುತ್ತಿದ್ದ, ಕೆಲವು ದಿವಸ ಅವರೇ ಸಂಪಾದಕರೂ ಆಗಿದ್ದ, ”ಸಚಿತ್ರ ಭಾರತ” ಮಾಸಪತ್ರಿಕೆಯಲ್ಲಿ ಪ್ರಕಟವಾದವು. ನಂತರ 1952ರಲ್ಲಿ ”ಪ್ರೇಮವಿಜಯ”, ”ಬೆಳಗಿದ ದೀಪಗಳು”, ”ತೊಳೆದ ಮುತ್ತು” ಎಂಬ ಮೂರು ಸಂಪುಟಗಳಲ್ಲಿ ಪುಸ್ತಕರೂಪದಲ್ಲಿ ಬಂದವು. ಈ ಕಥೆಗಳನ್ನು ಕಾಲ್ಪನಿಕ, ಐತಿಹಾಸಿಕ, ಸಾಮಾಜಿಕ, ಪತ್ತೇದಾರಿ, ಚಾರಿತ್ರಿಕ ಎಂದು ವಿಂಗಡಿಸಲಾಗಿದೆ. ಮೊದಲ ಸಂಕಲನದಲ್ಲಿ ಹನ್ನೊಂದು ಕಾಲ್ಪನಿಕ ಮತ್ತು ಐತಿಹಾಸಿಕ ಕಥೆಗಳಿವೆ. ಎರಡನೆಯದರಲ್ಲಿ ಒಂಬತ್ತು ಚಾರಿತ್ರಿಕ ಕಥೆಗಳಿವೆ. ಮೂರನೆಯದರಲ್ಲಿ ಹನ್ನೆರಡು ಸಾಮಾಜಿಕ ಕಥೆಗಳೂ, ಮೂರು ಪತ್ತೇದಾರಿ ಕಥೆಗಳೂ ಇವೆ. ಪತ್ತೇದಾರಿ ಕಥೆಗಳು ಆರ್ಥರ್ ಕಾನನ್ ಡಾಯಲ್‌ನ ಕಥೆಗಳ ರೂಪಾಂತರಗಳಾಗಿವೆ. ಇಲ್ಲಿಯ ಸರಲಾಕ್ಷ ಹುಲಿ ಮೀಸೆ ಎಂಬ ಪತ್ತೇದಾರನ ಹೆಸರು ಕೂಡ ಷರ್ಲಾಕ್ ಹೋಮ್ಸ್‌ನ ರೂಪಾಂತರವಾಗಿದೆ. ಚಾರಿತ್ರಿಕ ಕಥೆಗಳು ಹೆಚ್ಚು-ಕಡಿಮೆ ಐತಿಹಾಸಿಕ ಸಂಗತಿಗಳ ನೇರ ನಿರೂಪಣೆಗಳಾಗಿವೆ. ಆದರೂ ‘ನರಗುಂದದ ಸಾವಿತ್ರೀಬಾಯಿ’ಯಂಥ ಕಥೆಗಳಲ್ಲಿ ಬರುವ ಹೃದಯಸ್ಪರ್ಶಿಯಾದ ಆತ್ಮಹತ್ಯೆಯ ಪ್ರಸಂಗದಂಥ ಕಡೆ ನಿರೂಪಣೆ ಮಾನವೀಯ ಆಸಕ್ತಿಯನ್ನು ಪಡೆದುಕೊಳ್ಳುತ್ತದೆ. ಕೆರೂರರ ಮುಖ್ಯ ಬರವಣಿಗೆಯನ್ನು ಅವರ ಕಾಲ್ಪನಿಕ ಹಾಗೂ ಸಾಮಾಜಿಕ ಕಥೆಗಳಲ್ಲಿ ಕಾಣಬಹುದಾಗಿದೆ.

ಕೆರೂರರೇ ತಮ್ಮ ಕಥೆಗಳನ್ನು ‘ಸಂಪೂರ್ಣಕಥೆ’ಗಳೆಂದು ಕರೆದಿದ್ದಾರೆ. ಇದಕ್ಕೆ ಇದೇ ಹೆಸರಿನ ಮರಾಠೀ ಕಥೆಗಳ ಪ್ರಭಾವವೇ ಕಾರಣವೆಂದು ಒಂದು ಅಭಿಪ್ರಾಯವಿದೆ. ಈ ಕಥೆಗಳು ಆಧುನಿಕ ಸಣ್ಣಕತೆಯ ರಚನಾಕ್ರಮದಿಂದ ಸ್ವಲ್ಪಮಟ್ಟಿಗೆ ಭಿನ್ನವಾಗಿವೆಯೆಂಬುದು ನಿಜ. ಆಧುನಿಕ ಸಣ್ಣಕತೆಗಳ ಆಕರ್ಷಕ ಆರಂಭವಾಗಲಿ (arresting begining), ಅನಿರೀಕ್ಷಿತ ಮುಕ್ತಾಯವಾಗಲಿ (surprise ending) ಇಲ್ಲಿ ಕಾಣುವುದಿಲ್ಲ. ಬದಲಾಗಿ ಜಾನಪದ ಕತೆಗಳಲ್ಲಿಯಂತೆ ನಿಧಾನವಾದ ಆರಂಭ ಮತ್ತು ತರ್ಕಬದ್ಧವಾದ ಬೆಳವಣಿಗೆ, ಮುಕ್ತಾಯಗಳಿವೆ. ಇದರ ಜೊತೆಗೆ, ಭಾಗಶಃ ಪ್ರಕಟವಾಗುತ್ತಿದ್ದ ಧಾರಾವಾಹೀ ಕಾದಂಬರಿಗಳ ಮಾಸಿಕ ಕಂತುಗಳಿಂದ ಇವುಗಳನ್ನು ಪ್ರತ್ಯೇಕಿಸಲು, ‘ಒಂದೇ ಭಾಗದಲ್ಲಿ ಪ್ರಕಟವಾಗುವ ಸಂಪೂರ್ಣ ಕಥೆ’ ಎಂಬ ಅರ್ಥದಲ್ಲಿಯೂ ಈ ಹೆಸರನ್ನು ಬಳಸಿರುವ ಸಾಧ್ಯತೆ ಇದೆ.

ಕೆರೂರರ ಕಥೆಗಳಲ್ಲಿ ಆ ಕಾಲದ ಸುಧಾರಣಾವಾದದ ಪ್ರಭಾವವು ಎದ್ದು ಕಾಣುತ್ತದೆ. ವಿಧವಾವಿವಾಹ, ಸ್ತ್ರೀ-ಶಿಕ್ಷಣ, ಸ್ತ್ರೀ-ಪುರುಷರ ಸಮಾನತೆ, ಪ್ರೇಮ ವಿವಾಹ ಇತ್ಯಾದಿ ವಿಷಯಗಳಲ್ಲಿ ಅವರು ಆಧುನಿಕತೆಯ ಪರವಾಗಿದ್ದಾರೆ; ಆದರೆ ಎಲ್ಲೂ ‘ಅತಿ’ಯನ್ನು ಒಪ್ಪುವುದಿಲ್ಲ. ಅನೇಕ ಸಲ ಈ ವಿಷಯಗಳ ಮೇಲೆ ದೀರ್ಘ ವಾದ-ವಿವಾದಗಳನ್ನು ತಮ್ಮ ಕಥೆಗಳಲ್ಲಿ ಸೇರಿಸಿದ್ದಾರೆ. ಕೆಲವು ಸಲ ಇವು ಬೇಸರ ತರಿಸುವಷ್ಟು ಉದ್ದವಾಗುವದೂ ಇದೆ. ಮತ್ತೆ ಕೆಲವು ಸಲ ವಿಷಯಾಂತರಕ್ಕೂ ಎಡೆಗೊಡುತ್ತವೆ. ಆದರೆ ಒಟ್ಟಿನಲ್ಲಿ ಕೆರೂರರ ಸುಧಾರಣಾವಾದದ ಸ್ವರೂಪ ಸರಳವಾದುದಾಗಿದೆ. ಅವರ ಪರಿಹಾರಗಳೂ ಅಷ್ಟೇ ಸರಳವಾಗಿವೆ. ಸಂಧಿಕಾಲದ ಸಮಸ್ಯೆಗಳಲ್ಲಿನ ಮಾನವೀಯ ಸೂಕ್ಷ್ಮಗಳನ್ನು ಅವರ ಬರವಣಿಗೆ ಅಷ್ಟಾಗಿ ಗ್ರಹಿಸಿಲ್ಲ. ಇದೇ ಹೊತ್ತಿಗೆ ಬರೆಯಲು ಆರಂಭಿದ ಶ್ರೀನಿವಾಸರ ಕಥೆಗಳಿಗೆ ಹೋಲಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ.

ಕೆರೂರರ ಬರವಣಿಗೆಯಲ್ಲಿ ನಾಟಕೀಯತೆ ಹೆಚ್ಚು, ಸನ್ನಿವೇಶಗಳ ಕಲ್ಪನೆ, ಸಂಭಾಷಣೆ, ಪಾತ್ರಚಿತ್ರಣದಲ್ಲಿಯ ಆಕಸ್ಮಿಕ ತಿರುವುಗಳು ಮುಂತಾದವುಗಳಲ್ಲಿ ಆ ಕಾಲದ ಕಂಪನೀ ನಾಟಕಗಳ ಪ್ರಭಾವ ಇದ್ದಂತಿದೆ. ಮೇಲಾಗಿ ಸ್ವತಃ ಕೆರೂರರೇ ನಾಟಕಕಾರರಾಗಿದ್ದರೆಂಬುದನ್ನು ಇಲ್ಲಿ ನೆನೆಯಬಹುದು. ಅದರಲ್ಲೂ ವಿಶೇಷವಾಗಿ ಅವರ ಕೆಲವು ಕಥೆಗಳಲ್ಲಿ ಪಾಶ್ಚಾತ್ಯ ವೈನೋದಿಕಗಳ ಪ್ರಭಾವ ಒಡೆದುಕಾಣುವಂತಿದೆ. ಅವರು ಷೇಕ್ಸ್‌ಪಿಯರ್ ಮತ್ತ ಗೋಲ್ಡ್‌ ಸ್ಮಿಥ್‌ರ ಕೆಲವು ವೈನೋದಿಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದೂ ಇದಕ್ಕೊಂದು ಕಾರಣವಾಗಿರಬಹುದು. ಅದೇನಿದ್ದರೂ, “ಮನೆಮನೆಯ ಸಮಾಚಾರ”, ”ಗೃಹಕಥಾ”ದಂಥ ಕತೆಗಳಲ್ಲಿ ಬರುವ ತಲೆಗೇರಿದ ಹೆಂಡತಿಗೆ ಬುದ್ಧಿಗಲಿಸಿ ಹಾದಿಗೆ ತರುವ ಸನ್ನಿವೇಶಗಳಲ್ಲಿ ಈ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ.

ಕೆರೂರರದು ವಸ್ತುನಿಷ್ಠವಾದ ಬರವಣಿಗೆಯಲ್ಲ. ಪಾತ್ರಗಳ ಸ್ವಭಾವ ನಾಟ್ಯಮಯವಾದ ಸನ್ನಿವೇಶಗಳಲ್ಲಿ ತಾನಾಗಿ ಪ್ರಕಟವಾಗುವಂತಿದ್ದರೂ ಅವರು ಅವುಗಳ ಗುಣಸ್ವಭಾವವನ್ನು ವಾಚ್ಯವಾಗಿಯೂ ವಿಮರ್ಶಿಸುತ್ತಾರೆ. “ಎಂಥ ಅಭದ್ರವಾದ ಪತ್ರವಿದು! ಅಶಿಕ್ಷಿತನೂ ತಿಳಿಗೇಡಿಯೂ ಮೇಲೆ ದುರ್ಮಾರ್ಗಿಯೂ ಆದ ಮೂರ್ಖನ ವಿಚಾರಗಳನ್ನು ಕಂಡಿರಾ?” (ಪ್ರಕೃತಿ ಬಲ) ಎಂಬಂಥ ಮಾತುಗಳು ಅವರ ಬರವಣಿಗೆಯಲ್ಲಿ ಸಾಕಷ್ಟು ಸಿಗುತ್ತವೆ. ಸನ್ನಿವೇಶಗಳ ಇಂಗಿತಾರ್ಥದ ವಿಷಯದಲ್ಲೂ ಅವರದು ಇದೇ ಧೋರಣೆ. ಆಗಾಗ ಅನುಕೂಲ ಮಾಡಿಕೊಂಡು ಜೀವನದ ಬಗೆಗೆ ಸಾಮಾನೀಕೃತ ತಾತ್ವಿಕ ಚಿಂತನೆಗಳನ್ನೂ ಸೇರಿಸಿದ್ದಾರೆ. ಅನೇಕ ಕಡೆ ಕಥೆಗಾರ ನಿರೂಪಣೆಯಲ್ಲಿ ಸ್ವತಃ ಪ್ರವೇಶಿಸುವದೂ ಉಂಟು. ಆದರೆ ಬರವಣಿಗೆಯ ಇಂಥ ರೂಢಿಗಳನ್ನೂ ಕೂಡ ಕೆರೂರರು ಜಾಣತನದಿಂದ ಉಪಯೋಗಿಸಿಕೊಳ್ಳಬಲ್ಲವರಾಗಿದ್ದರು. ಉದಾಹರಣೆಗೆ ಈ ಮಾತು ನೋಡಿ: “ಸುಭದ್ರೆಯ ಮುಖದಲ್ಲಿ ಮಂದಹಾಸವು ತೋರಿತು. ಪತಿಯ ಭುಜದ ಮೇಲೆ ಒಯ್ಯಾರದಿಂದ ತನ್ನ ಮುಖವನ್ನಿಟ್ಟು ಕಥೆಗಾರನಿಗೆ ತನ್ನ ವಿಲಾಸಮಂದಿರವನ್ನು ಬಿಟ್ಟು ಹೊರಗೆ ಹೋಗಲು ಸೂಚಿಸಿದಳು.” (ಮನೆಮನೆಯ ಸಮಾಚಾರ)

ಭಾಷೆಯ ದೃಷ್ಟಿಯಿಂದ ಕೆರೂರರ ಬರವಣಿಗೆಯಲ್ಲಿ ಕನ್ನಡ ಗದ್ಯದ ಆರಂಭ ಕಾಲದ ವಿಷಮತೆಗಳು ಅಲ್ಲಲ್ಲಿ ಕಾಣುತ್ತವೆ. ಕೆಲವು ಸಲ ಅತಿ ಸಂಸ್ಕೃತ ಪದಪುಂಜಗಳೂ, ಅವುಗಳ ಮಗ್ಗುಲಲ್ಲೇ ಅತಿ ಗ್ರಾಮ್ಯವಾದ ಒರಟು ಪ್ರಯೋಗಗಳೂ ಒಟ್ಟಿಗೇ ಬರುತ್ತವೆ. ಆದರೆ ಸಾಮಾನ್ಯವಾಗಿ ಕೆರೂರರ ಬರವಣಿಗೆ ಆಡುಮಾತಿಗೆ ಹತ್ತಿರವಾಗಿ, ಉತ್ತರ ಕರ್ನಾಟಕದ ವಿಶಿಷ್ಟವಾದ ನುಡಿಗಟ್ಟು, ಪಡೆನುಡಿ, ಗಾದೆಗಳನ್ನು ದಿಟ್ಟತನದಿಂದ ಬಳಸಿಕೊಳ್ಳುವ ರೀತಿಯಿಂದ ಆಕರ್ಷಿಸುತ್ತದೆ.

ಪಂಜೆಯವರಿಗೆ ಹೋಲಿಸಿದಾಗ ಕೆರೂರರ ಬರವಣಿಗೆಯಲ್ಲಿ ಹಿತಮಿತ, ನಯ ಕಡಿಮೆ ಎನಿಸುತ್ತದೆ. ಆದರೆ ಕೆರೂರರ ಕಥೆಗಳ ವಸ್ತು ಮತ್ತು ಭಾಷೆಗಳಲ್ಲಿ ಪಂಜೆಯವರಲ್ಲಿ ಇಲ್ಲದ ಗಟ್ಟಿತನ ಕಾಣುತ್ತದೆ.

‘ತೊಳೆದ ಮುತ್ತು’ ಕೆರೂರರ ಬರವಣಿಗೆಯ ಎಲ್ಲಾ ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಅಚ್ಚುಕಟ್ಟಾದ ಕಥೆ. ಇದು ಮೊದಲು ಪ್ರಕಟವಾದದ್ದು 1913ರಲ್ಲಿ. ಅನೇಕ ವಿಷಯಗಳಲ್ಲಿ ಕೆರೂರರು ಸುಧಾರಣಾ ವಾದದ ಪರವಾಗಿದ್ದರೂ ಈ ಕಥೆಯಲ್ಲಿ ಪಾಶ್ಚಾತ್ಯ ರೀತಿ-ನೀತಿಗಳ ಅಂಧ ಅನುಕರಣೆಯನ್ನು ವಿಡಂಬಿಸಿದ್ದಾರೆ. ಇಲ್ಲಿ ಹಿರಿಯರ ಒತ್ತಾಯಕ್ಕೆ ಮದುವೆಯಾಗಿ, ಹೆಂಡತಿಯ ಮುಖವನ್ನೂ ನೋಡದೆ, ಅವಳ ಹೆಸರು ಗುಂಡಕ್ಕ ಎಂದು ಕೇಳಿ ಅವಳ ಬಗ್ಗೆ ಸುಮ್ಮಸುಮ್ಮನೇ ತಿರಸ್ಕಾರವನ್ನು ಬೆಳೆಸಿಕೊಂಡ, ಮದುವೆಯ ವಿಷಯದಲ್ಲಿ ಪಾಶ್ಚಾತ್ಯರಲ್ಲಿಯಂತೆ ಮದುವೆಯ ವಯಸ್ಸು, ಪರಸ್ಪರ ಪ್ರೀತಿ ಇತ್ಯಾದಿಗಳ ಬಗ್ಗೆ ಅಪ್ರಬುದ್ಧ ವಿಚಾರಗಳನ್ನು ಹೊಂದಿದ ಸುಶಿಕ್ಷಿತ ಯುವಕನೊಬ್ಬ ಬೇರೆ ಮದುವೆ ಮಾಡಿಕೊಳ್ಳಬೇಕೆಂಬವರೆಗೂ ಯೋಚಿಸುತ್ತಾನೆ. ನಂತರ ಒಬ್ಬ ಸುಂದರ ಹುಡುಗಿಯನ್ನು ನೋಡಿ ಮೆಚ್ಚಿ ಅವಳನ್ನು ಮದುವೆಯಾಗಲು ಪ್ರಯತ್ನಿಸುವಾಗ ಅವಳೇ ತಾನು ಮೊದಲು ಮದುವೆಯಾಗಿರುವ ಹೆಂಡತಿಯೆಂದೂ, ಅವನ ಅಕ್ಕ-ಭಾವಂದಿರು ಉದ್ದೇಶಪೂರ್ವಕವಾಗಿ ಹಂಚಿಕೆ ಹೂಡಿ ಈ ಪ್ರಸಂಗವನ್ನು ಏರ್ಪಡಿಸಿದ್ದರೆಂದೂ ಕೊನೆಗೆ ತಿಳಿದು ಬರುತ್ತದೆ.

ಒಂದು ವಿನೋದಕಥೆ ಎಂದು ನೋಡಿದಾಗ ಕಥೆ ಸಾಕಷ್ಟು ತೃಪ್ತಿ ಕೊಡುತ್ತದೆ. ಮಾಧವರಾಯನ ಮದುವೆಯ ಕಾಲದಲ್ಲಿಯ ಅವನ ಹೆಂಡತಿಯ ಅವಸ್ಥೆಯ ವರ್ಣನೆ ಕೆರೂರರ ಸ್ವಭಾವಜನ್ಯ ವಿನೋದಬುದ್ಧಿಗೊಂದು ಸಾಕ್ಷಿಯಾಗಿದೆ. ಅದೇ ಮುಂದೆ ಮಾಧವರಾಯನ ಹಟಮಾರಿತನದ ನಿರ್ಣಯಕ್ಕೆ ಒಂದು ಸೊಗಸಾದ ಕಾರಣವಾಗುತ್ತದೆ. ಶೇಷಗಿರಿರಾಯನ ಮನೆಯಲ್ಲಿ ಪಾಶ್ಚಾತ್ಯ ಆಚಾರ-ವಿಚಾರಗಳನ್ನು ಕುರಿತು ನಡೆಯುವ ಚರ್ಚೆ ಅಪ್ರಾಸಂಗಿಕವೆಂಬಂತೆ ಕಂಡರೂ ಅದು ಮಾಧವರಾಯನ ಪಾಶ್ಚಾತ್ಯ ರೀತಿ-ನೀತಿಗಳ ಅನುಕರಣೆಯನ್ನು ಕುರಿತ ಅಪ್ರಬುದ್ಧ ವಿಚಾರಗಳ ಮೇಲೆ ಬೆಳಕು ಚೆಲ್ಲುವದರಿಂದ ಸಂವಿಧಾನದಲ್ಲಿ ಮಹತ್ವದ್ದಾಗಿದೆ. ಮದುವೆಯ ವಯಸ್ಸು, ವಿವಾಹಪೂರ್ವದಲ್ಲಿ ಗಂಡು-ಹೆಣ್ಣುಗಳ ಪರಸ್ಪರ ಮೆಚ್ಚಿಗೆಯ ವಿಷಯಗಳಲ್ಲಿ ಅವನು ತಳೆದಿರುವ ಧೋರಣೆಯೂ ಹೀಗೇ ಅಪ್ರಬುದ್ಧವಾಗಿದೆಯೆಂದು ಈ ಚರ್ಚೆ ಸೂಚಿಸುತ್ತದೆ. ಅವನಿಗೆ ಪಾಶ್ಚಾತ್ಯ ಜೀವನವಿಧಾನವನ್ನು ಭಾರತೀಯ ಪರಿಸರದಲ್ಲಿ ಎಷ್ಟುಮಟ್ಟಿಗೆ ಅನುಸರಿಸಲು ಸಾಧ್ಯ ಎಂಬ ವಿವೇಚನೆಯೇ ಇಲ್ಲ. ಅಂತೆಯೇ ಕೊನೆಗೆ ತಾನು ಸಾರಾಸಾರ ವಿಚಾರವಿಲ್ಲದೆ ಒಲ್ಲೆನೆಂದು ಬಿಟ್ಟಿದ್ದ ಹೆಂಡತಿಯನ್ನೇ ಬೇರೆ ಹುಡುಗಿಯೆಂದು ಭಾವಿಸಿ ಮೆಚ್ಚಿ ಮದುವೆಯಾಗಲು ಪ್ರಯತ್ನಿಸುವ ಪ್ರಸಂಗ ಅವನ ಅಪ್ರಬುದ್ಧ ವಿಚಾರಗಳ ವಿಡಂಬನೆಯಾಗುತ್ತದೆ.

ಈ ಕಥೆ ಒಂದು ಕಾಲದ ಸಾಮಾಜಿಕ ಸ್ಥಿತ್ಯಂತರಗಳಿಗೆ ಸಂಬಂಧಿಸಿದಂತೆ ಕೆಲವು ವಿವರಗಳ ಮೇಲೆ ಬೆಳಕು ಚೆಲ್ಲುವದರ ಮೂಲಕವೂ ಮಹತ್ವದ್ದಾಗುತ್ತದೆ. ಪಾಶ್ಚಾತ್ಯರ ಆಚಾರ-ವಿಚಾರಗಳ ಅನುಕರಣೆಯ ವಿಷಯವಂತೂ ಕಥೆಯ ಮುಖ್ಯ ವಸ್ತುವೇ ಆಗಿದೆ. ಇದರ ಜೊತೆಗೆ ಆನುಷಂಗಿಕವಾಗಿ ಬರುವ ಇನ್ನೊಂದು ಮಹತ್ವದ ವಿವರವೆಂದರೆ ಸಾಂಪ್ರದಾಯಿಕ ಹಿಂದೂ ವಿವಾಹವ್ಯವಸ್ಥೆಯಲ್ಲಿನ ಹೆಣ್ಣಿನ ಅಸಹಾಯ ಸ್ಥಿತಿ. ಪುಣ್ಯಕ್ಕೆ ಇಲ್ಲಿಯ ಗುಂಡಕ್ಕ ಅಸಾಧಾರಣ ಚೆಲುವೆಯಾಗಿದ್ದು, ಗಂಡನ ಮನಸ್ಸನ್ನು ಗೆದ್ದುಕೊಳ್ಳುವಷ್ಟು ಕಾಲಾವಕಾಶ ಅವಳಿಗೆ ಸಿಕ್ಕಿತ್ತು; ಅದೂ ಕೂಡ ಕಥೆಯ ವಿನ್ಯಾಸ ವೈನೋದಿಕದ್ದಾದ್ದರಿಂದ. ಬದಲಾಗಿ, ಅವಳ ಗಂಡ ಆತುರದಿಂದ ಇನ್ನೊಬ್ಬಳನ್ನು ಮದುವೆಯಾಗಿದ್ದರೆ? ಈ ವ್ಯವಸ್ಥೆಯಲ್ಲಿ ಗಂಡ ಮೆಚ್ಚಿ ಒಪ್ಪಿದರೆ ಹೆಂಡತಿ, ಇಲ್ಲವಾದರೆ ಅಸಹಾಯ ಅನಾಥೆ; ಗಂಡಿನ ಮರ್ಜಿಯೇ ಈ ವಿಷಯದಲ್ಲಿ ಕೊನೆಯದು ಎಂಬಂಥ ಸ್ಥಿತಿಯೊಂದರ ಬಗ್ಗೆ ಕಥೆಯಲ್ಲಿ ಸೂಚನೆಯಿದೆ. ಆದರೆ ಕಥೆಯ ವಿನೋದದ ಧಾಟಿಯಲ್ಲಿ ಈ ಪ್ರಶ್ನೆ ಏಳಲಾರದು. ಮದುವೆಗೆ ಸಂಬಂಧಿಸಿದ ಇನ್ನೊಂದು ವಿವರವೆಂದರೆ ಆ ಕಾಲದಲ್ಲಿ ಬ್ರಾಹ್ಮಣರಲ್ಲಿ ಹುಡುಗಿ ಮೈನೆರೆಯುವ ಮುಂಚೆಯೇ ವಿವಾಹವಾಗಬೇಕೆಂಬ ಕಡ್ಡಾಯ. ಸುಧಾರಣಾವಾದಿಗಳು ಇದನ್ನು ಒಪ್ಪದೆ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದರು. ಆದರೆ ಇವರ ಮದುವೆ ಮಾಡುವದೇ ಕಷ್ಟವಾಯಿತು. ಸಂಪ್ರದಾಯಸ್ಥರು ಮೈನೆರೆದ ಹುಡುಗಿಯರನ್ನು ಒಪ್ಪಲಿಲ್ಲ. ಸುಧಾರಣಾವಾದಿಗಳು ಕಡಿಮೆ ಸಂಖ್ಯೆಯಲ್ಲಿದ್ದರು. ಹೀಗಾಗಿ ಇಂಥವರು ಮದುವೆಯಾಗದೇ ಉಳಿಯಬೇಕಾದ ಪರಿಸ್ಥಿತಿ ಬಂತು. ಈ ವಿವರ ಮುಖ್ಯ ಕಥೆಯ ಒಂದು ಭಾಗವಾಗಿ ಬರುವದಿಲ್ಲ. ಕೇವಲ ಒಂದು ಸಾಂದರ್ಭಿಕ ಬಿಡಿ ವಿಚಾರವಾಗಿ ಬರುತ್ತದೆ. ಈ ಕಥೆ ಹಿಂದೂ ವಿವಾಹ ಕಾಯಿದೆ ಜಾರಿಗೆ ಬರುವ ಮುಂಚಿನದು. ಅಂತೆಯೇ ಇಲ್ಲಿ ಮಾಧವರಾಯನ ಪುನರ್ವಿವಾಹದ ವಿಚಾರ ಬಂದಿದೆ. ಹಾಗೆಯೇ ಇಂಥ ಆತುರದ ಪ್ರಯತ್ನಗಳಿಂದಾಗಬಹುದಾದ ವ್ಯರ್ಥಹಾನಿಗಳ ಪ್ರಸ್ತಾಪವೂ ಇದೆ.

ಕಥೆಯ ಕೊನೆಯಲ್ಲಿ ಬರುವ ಒಂದು ತುಂಟುತನದ ಮಾತು ಮತ್ತೊಮ್ಮೆ ಕಥೆಯ ವಿನೋದದ ಧಾಟಿಯನ್ನು ನೆನಪು ಮಾಡಿಕೊಡುವಂತಿದೆ. ಬಹುಶಃ “ಸಚಿತ್ರಭಾರತ” ಮಾಸಿಕ ಆಗ ನಿಯಮಿತವಾಗಿ ಬರುತ್ತಿರಲಿಲ್ಲವೆಂದು ಕಾಣುತ್ತದೆ. ಅದಕ್ಕಾಗಿಯೇ ಏನೋ, ಜನೇವರಿ ತಿಂಗಳಲ್ಲಾದರೂ ಡಿಸೆಂಬರದ ಸಂಚಿಕೆ ಪ್ರಕಟವಾಗಲೆಂದು ಕತೆಗಾರರು ಒಂದು ಮರ್ಮದ ಮಾತನ್ನು ಸೇರಿಸಿ ಕಥೆ ಮುಗಿಸಿದ್ದಾರೆ. ಆಗಿನ್ನೂ ಕೆರೂರರು ಆ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿರಲಿಲ್ಲ.

(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ದೇವುಡು ಅವರ ಕತೆ | ಮೂರು ಕನಸು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X