ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯ ವಿಚಾರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ, “ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ” ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಮಾತನಾಡಿದ ಶಾಸಕರು, “ರಾಜ್ಯದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆಯಾಗಿಲ್ಲ. ಡೀಸೆಲ್, ಆಯಿಲ್, ಟೈರ್ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಸರ್ಕಾರ ಅನಿವಾರ್ಯವಾಗಿ ಟಿಕೆಟ್ ದರ ಏರಿಕೆ ಮಾಡಿದೆ. ಪ್ರತಿ ದಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದು ಕೋಟಿ ನಷ್ಟದಲ್ಲಿದೆ. ಹೊಸ ಬಸ್ಗಳನ್ನು ಈಗಾಗಲೇ ಖರೀದಿ ಮಾಡಿದ್ದೇವೆ. ಕಳೆದ ಐದಾರು ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ. ಈಗ ಐದನೂರು ಹೊಸ ಬಸ್ ಖರೀದಿ ಮಾಡಿದ್ದೇವೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರ ಬಸ್ ಟಿಕೆಟ್ ದರ ಶೇ. 15 ಏರಿಕೆ ಮಾಡಿದ್ದು ಸರಿಯಿದೆ. ಕೆಲ ವರ್ಷಗಳ ಹಿಂದೆಯೇ ಟಿಕೆಟ್ ದರ ಏರಿಕೆಯಾಗಬೇಕಿತ್ತು. ಈಗ ಏರಿಕೆಯಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಅಂಬೇಡ್ಕರ್ಗೆ ಅವಮಾನ: ಅಮಿತ್ ಶಾ ಹೇಳಿಕೆ ಖಂಡಿಸಿ ಜ.7ರಂದು ‘ದೇವದುರ್ಗ ಬಂದ್’
ಜನರ ಸೇವೆಗೆ ಬಸ್ ಖರೀದಿ ಮಾಡಿದಾಗ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ. ಡೀಸೆಲ್ ₹50 ಇದ್ದಾಗ ಇದೇ ಟಿಕೆಟ್ ದರ ಇತ್ತು. ಆದರೆ ಈಗ ಡೀಸೆಲ್ ದರ ಏರಿಕೆಯಾಗಿದೆ. ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಕಳೆದ ಬಿಜೆಪಿ ಸರ್ಕಾರ ಕೆಎಸ್ಆರ್ಟಿಸಿಯನ್ನು ನಷ್ಟಕ್ಕೆ ದೂಡಿದ್ದಾರೆ’ ಎಂದು ಬಿಜೆಪಿ ವಿರುದ್ಧ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದರು.