ಬಡವರು, ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರ ಪರವಾಗಿ ಹೋರಾಟಕ್ಕಿಳಿದು, ಸಶಸ್ತ್ರ ಹೋರಾಟದ ಹಾದಿ ತುಳಿದಿದ್ದವರು ಮಾವೋವಾದಿ ಹೋರಾಟಗಾರರು. ತುಳಿತಕ್ಕೊಳಗಾದ ಸಮುದಾಯಗಳ ವಿಚಾರಗಳಲ್ಲಿ ಸರ್ಕಾರಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಹಾಗೂ ದಮನಗಳ ವಿರುದ್ಧ ಸಿಡಿದೆದ್ದಿದ್ದ ಹಲವಾರು ಮಂದಿ ನಕ್ಸಲ್ ಹೋರಾಟದ ಹಾದಿ ಹಿಡಿದಿದ್ದರು.
ಆದರೆ, ಹೋರಾಟದ ಉದ್ದೇಶ ಸರಿಯಿದ್ದರೂ, ಸಶಸ್ತ್ರ ಹೋರಾಟವು ಪ್ರಜಾತಾಂತ್ರಿಕವಲ್ಲ ಎಂಬುದನ್ನು ನಕ್ಸಲ್ ಹೋರಾಟಗಾರರು ಅರಿತಿದ್ದಾರೆ. ನಕ್ಸಲ್ ಹೋರಾಟವನ್ನು ತೊರೆದು, ಮುಖ್ಯವಾಹಿನಿಯಲ್ಲಿ ಜನರ ಜೊತೆಗೂಡಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿರುವುದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ರಚನೆಯಾದ ‘ಶಾಂತಿಗಾಗಿ ನಾಗರಿಕ ವೇದಿಕೆ’.
ನಾಡು ತೊರೆದು ಕಾಡುಗಳಲ್ಲಿ ಸಶ್ತ್ರಾಸ್ತ್ರಗಳನ್ನಿಡಿದು ಹೋರಾಟ ನಡೆಸುತ್ತಿರುವ ಮಾವೋವಾದಿ ಹೋರಾಟಗಾರರನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ‘ಶಾಂತಿಗಾಗಿ ನಾಗರಿಕ ವೇದಿಕೆ’ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. 2014ಕ್ಕೂ ಹಿಂದಿನಿಂದಲೂ ಮಾವೋವಾದಿ ಹೋರಾಟಗಾರರನ್ನು ಸಂಪರ್ಕಿಸಿ, ಅವರ ಮನವೊಲಿಸಿ, ಸರ್ಕಾರ ಮತ್ತು ನಕ್ಸಲ್ ಹೋರಾಟಗಾರರ ನಡುವೆ ಸಂಪರ್ಕ ಸಾಧಿಸಿ, ಅವರನ್ನು ಮುಖ್ಯವಾಹಿನಿಗೆ ತರುತ್ತಿದೆ.
‘ಶಾಂತಿಗಾಗಿ ನಾಗರಿಕ ವೇದಿಕೆ’ಯ ಆರಂಭದಲ್ಲಿ ನಾಡಿನ ಸಾಕ್ಷಿಪ್ರಜ್ಞೆಗಳಾದ ಎಚ್.ಎಸ್ ದೊರೆಸ್ವಾಮಿ, ದೇವನೂರ ಮಹಾದೇವ, ಎ.ಕೆ ಸುಬ್ಬಯ್ಯ, ಬರಗೂರು ರಾಮಚಂದ್ರಪ್ಪ, ಜಿ ರಾಮಕೃಷ್ಣ, ಗೌರಿ ಲಂಕೇಶ್, ಶಿವಸುಂದರ್, ಪ್ರೊ ವಿ.ಎಸ್ ಶ್ರೀಧರ್, ನಗರಗೆರೆ ರಮೇಶ್ ಹಾಗೂ ನಗರಿ ಬಾಬಯ್ಯ ಇದ್ದರು. ಈ ವೇದಿಕೆಯು 2014ರಲ್ಲಿಯೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ತರುವ ಮೂಲಕ ‘ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ವಿಶೇಷ ಪ್ಯಾಕೇಜ್’ ರಚನೆ ಮಾಡುವಂತೆ ಮಾಡಿತು.
ಸರ್ಕಾರವು ನಕ್ಸಲ್ ಹೋರಾಟಗಾರರ ಹೋರಾಟ ಮಾದರಿಯನ್ನು ವಿರೋಧಿಸುತ್ತಲೇ, ಅವರು ಎತ್ತುತ್ತಿರುವ ಪ್ರಶ್ನೆಗಳನ್ನು ಗಂಭಿರವಾಗಿ ಪರಿಗಣಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಮುಂದಾಯಿತು. ಶಾಂತಿಗಾಗಿ ನಾಗರಿಕ ವೇದಿಕೆ’ಯ ಪ್ರಯತ್ನದ ಫಲವಾಗಿ ಆರಂಭದಲ್ಲಿ ಮುಖ್ಯವಾಹಿನಿಗೆ ಬಂದರವರು ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್.
ಆ ನಂತರದಲ್ಲಿ, ಕರ್ನಾಟಕದಲ್ಲಿರುವ ಎಲ್ಲ ನಕ್ಸಲ್ ಹೋರಾಟಗಾರರನ್ನು ಪ್ರಜಾತಾಂತ್ರಿಕ ಹೋರಾಟದ ಹಾದಿಗೆ ಕರೆತರಲು ವೇದಿಕೆಯು ಸರ್ಕಾರದೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲು ಆರಂಭಿಸಿತು. ಅದಕ್ಕಾಗಿಯೇ, ವೇದಿಕೆಯ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳುಳ್ಳ ‘ಶರಣಾಗತಿ ಮತ್ತು ಪುನರ್ವಸತಿ ಸಮಿತಿ’ಯನ್ನು ಅಧಿಕೃತವಾಗಿ 2015ರಲ್ಲಿ ಸಿದ್ದರಾಮಯ್ಯ ಸರ್ಕಾರ ನೇಮಿಸಿತು.
ಸಮಿತಿಯಲ್ಲಿ ವೇದಿಕೆಯ ಪರವಾಗಿ ಎಚ್.ಎಸ್ ದೊರೆಸ್ವಾಮಿ, ಎ.ಕೆ ಸುಬ್ಬಯ್ಯ ಹಾಗೂ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಇದ್ದರು. ಹಲವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ನೇಮಿಸಿದ್ದ ಸಮಿತಿ ಕೆಲಸ ಮಾಡಲಾರಂಭಿಸಿತ್ತು. ಆದರೆ, ಗೌರಿ ಲಂಕೇಶ್ ಹತ್ಯೆ ಮತ್ತು ಎಚ್.ಎಸ್ ದೊರೆಸ್ವಾಮಿ, ಎ.ಕೆ ಸುಬ್ಬಯ್ಯ ಅವರು ಸಾವನ್ನಪ್ಪಿದ ಬಳಿಕ ಸಮಿತಿ ನಿಷ್ಕ್ರಿಯವಾಯಿತು. ನಂತರ, ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಮಿತಿಗೆ ಮರುನೇಮಕ ಮಾಡುವ ಹಾಗೂ ಸಮಿತಿಯನ್ನು ಸಕ್ರಿಯಗೊಳಿಸಲು ನಿರ್ಲಕ್ಷಿಸಿತು.
ಆದಾಗ್ಯೂ, ಸರ್ಕಾರ ನೇಮಿಸಿದ್ದ ಸಮಿತಿ ಇಲ್ಲದಿದ್ದರೂ, ‘ಶಾಂತಿಗಾಗಿ ನಾಗರಿಕ ವೇದಿಕೆ’ ಸಕ್ರಿಯವಾಗಿ ಕೆಲಸ ಮಾಡಿದೆ. ಮಾವೋವಾದಿ ಹೋರಾಟಗಾರನ್ನು ನಿರಂತರವಾಗಿ ಸಂಪರ್ಕಿಸುತ್ತಿದೆ.ಸಶಸ್ತ್ರ ಹೋರಾಟದಲ್ಲಿನ ತೊಡಕುಗಳು ಮತ್ತು ಮುಖ್ಯವಾಹಿನಿಗೆ ಬರುವುದರ ಅಗತ್ಯಗಳ ಬಗ್ಗೆ ಚರ್ಚಿಸಿ, ಅವರ ಮನವೊಲಿಸುವ ಕೆಲಸ ಮಾಡುತ್ತಲೇ ಬಂದಿದೆ. ಜೊತೆಗೆ, ಸರ್ಕಾರ ನೇಮಿಸಿದ್ದ ಸಮಿತಿಗೆ ಮರುಜೀವ ತುಂಬುಂತೆ ಸರ್ಕಾರವನ್ನೂ ಒತ್ತಾಯಿಸಿದೆ.
ಈ ವರದಿ ಓದಿದ್ದೀರಾ?: ನಕ್ಸಲ್ ಶರಣಾಗತಿ | ನಿರುದ್ಯೋಗ, ಮಹಿಳಾ ದೌರ್ಜನ್ಯ ತಡೆ; 18 ಹಕ್ಕೊತ್ತಾಯಗಳ ಪತ್ರ ಬರೆದ ಮಾವೋವಾದಿ ಹೋರಾಟಗಾರರು!
ಪರಿಣಾಮವಾಗಿ, ಸರ್ಕಾರ ಈಗ ನಿಷ್ಕ್ರಿಯಗೊಂಡಿದ್ದ ಸಮಿತಿಯನ್ನು ಸಕ್ರಿಯಗೊಳಿಸಿದೆ. ಸಮಿತಿಗೆ ಹೋರಾಟಗಾರರ ಪರವಾಗಿ ಬಂಜಗೆರೆ ಜಯಪ್ರಕಾಶ್, ಕೆ.ಪಿ ಶ್ರೀಪಾಲ್ ಹಾಗೂ ಪಾರ್ವತೀಶ್ ಬಿಳಿದಾಳೆ ಅವರನ್ನು ನೇಮಿಸಿಕೊಂಡಿದೆ. ಜೊತೆಗೆ, ಶರಣಾಗತಿಯ ಮೂಲಕ ಮುಖ್ಯವಾಹಿನಿ ಬರಲು ಇಚ್ಚಿಸುವ ನಕ್ಸಲ್ ಹೋರಾಟಗಾರಿಗೆ ಅವಕಾಶ ನೀಡುತ್ತಿದೆ. ಸರ್ಕಾರದ ಎದುರು ಶರಣಾಗುವಂತೆ ಕರೆ ಕೊಡುತ್ತಿದೆ.
‘ಶಾಂತಿಗಾಗಿ ನಾಗರಿಕ ವೇದಿಕೆ’ಯ ನಿರಂತರ ಪ್ರಯತ್ನದಿಂದಾಗಿ ಇದೀಗ ಮತ್ತೆ ಆರು ಮಂದಿ ಮಾವೋವಾದಿ ಹೋರಾಟಗಾರರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಬುಧವಾರ ಅವರನ್ನು ಮುಖ್ಯವಾಹಿನಿಗೆ ಕರೆತರುವ ಕಾರ್ಯಕ್ರಮವೂ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.
ಪ್ರಸ್ತುತ, ‘ಶಾಂತಿಗಾಗಿ ನಾಗರಿಕ ವೇದಿಕೆ’ಯಲ್ಲಿ ಪ್ರೊ. ವಿ.ಎಸ್ ಶ್ರೀಧರ್, ಪ್ರೊ. ನಗರಗೆರೆ ರಮೇಶ್, ಪ್ರೊ. ನಗರಿ ಬಾಬಯ್ಯ, ಎನ್ ವೆಂಕಟೇಶ್, ಬಿ.ಟಿ ಲಲಿತಾ ನಾಯ್ಕ್, ತಾರಾ ರಾವ್, ನೂರ್ ಶ್ರೀಧರ್ ಹಾಗೂ ಕೆ.ಎಲ್ ಅಶೋಕ್ ಇದ್ದಾರೆ.