ಬೆಳಗಾವಿ ಕಾರ್ಯಕ್ರಮದಲ್ಲಿ ʼಜೈ ಮಹಾರಾಷ್ಟ್ರʼ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಶಾಸಕ ಅಭಯ್ ಪಾಟಿಲ್, ಪಾಲಿಕೆ ಮೇಯರ್ ಸವಿತಾ ಕಾಂಬಳೆ ಹಾಗೂ ಉಪಮೇಯರ್ ಆನಂದ ಚವ್ಹಾಣ್ ವಿರುದ್ಧ ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷ ಮಹದೇವ ತಳವಾರ ಟಿಳಕವಾಡಿಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಬೆಳಗಾವಿ ನೆಲದಲ್ಲಿ ʼಜೈ ಮಹಾರಾಷ್ಟ್ರʼ ಎಂದು ಘೋಷಣೆ ಕೂಗಿ ನಾಡದ್ರೋಹ ಎಸಗಲಾಗಿದೆ. ಅಲ್ಲದೆ, ಪಾಲಿಕೆಯಿಂದ ₹45 ಲಕ್ಷ ಅನುದಾನದಲ್ಲಿ ಛತ್ರಪತಿ ಸಂಬಾಜಿ ಮಹಾರಾಜರ ಮೂರ್ತಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಶಾಸಕ ಅಭಯ್ ಪಾಟೀಲ್ ಅನಧಿಕೃತವಾಗಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಮೂರ್ತಿ ಲೋಕಾರ್ಪಣೆ ವೇಳೆ ಜೈ ಮಹಾರಾಷ್ಟ್ರ ಎಂದು ಮಹಾರಾಷ್ಟ್ರ ಸಚಿವ ಶಿವೇಂದ್ರ ರಾಜೆ ಬೋಸಲೆ ಘೋಷಣೆ ಕೂಗಿದ್ದಾರೆ. ಈ ವೇಳೆ ಬಿಜೆಪಿ ಶಾಸಕರು, ಮೇಯರ್, ಉಪ ಮೇಯರ್ ಚಪ್ಪಾಳೆ ತಟ್ಟಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅಪಮಾನ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಮಹದೇವ ತಳವಾರ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಬಾಣಂತಿಯನ್ನು ಮನೆಯಿಂದ ಹೊರ ಹಾಕಿ ಅಮಾನವೀಯತೆ ಮೆರೆದ ಫೈನಾನ್ಸ್ ಕಂಪೆನಿ
ದೂರು ಸ್ವೀಕೃತ ಪ್ರತಿ ನೀಡಿ, ಜನಪ್ರತಿನಿಧಿಗಳ ವಿರುದ್ಧ ದೂರು ನೀಡಿರುವ ಹಿನ್ನೆಲೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
