ನಕ್ಸಲರು ಮುಖ್ಯಮಂತ್ರಿಯವರ ಕಚೇರಿಗೆ ಬಂದು ಶರಣಾಗತರಾಗಿರುವುದರಲ್ಲಿ ತಪ್ಪೇನಿದೆ? ನಕ್ಸಲರ ಪರಿವರ್ತನೆಗೆ ಸರ್ಕಾರ ಅವಕಾಶ ಕೊಟ್ಟಿದೆ. ನಕ್ಸಲ್ ಚಟುವಟಿಕೆಗೆ ಬರಬಾರದು ಎಂಬ ಸಂದೇಶ ಇಡೀ ಸಮಾಜಕ್ಕೆ ತಲುಪಬೇಕು. ಮುಖ್ಯಮಂತ್ರಿಯವರ ಮುಂದೆ ಶರಣಾದಾಗ ರಾಜ್ಯದಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಶಾಸಕ ಸುನೀಲ್ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಜಾಸ್ತಿ ಇದೆ. ಎಎನ್ಎಫ್ ಕಾರ್ಕಳದಲ್ಲಿ ಇದೆಯಲ್ಲವೇ? ನಕ್ಸಲರು ಶರಣಾದಾಗ ಶಸ್ತ್ರಾಸ್ತ್ರಗಳು ಇರಲಿಲ್ಲ. ಶಸ್ತ್ರಾಸ್ತ್ರಗಳನ್ನು ಬಿಟ್ಟು ಬಂದಿದ್ದಾರೆ. ಎಲ್ಲಿ ಎಸೆದು ಬಂದಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ” ಎಂದರು.
“ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶೇ. 99ರಷ್ಟು ಕೊನೆಯಾಗಿದೆ. ಶರಣಾಗತರಾದ ನಕ್ಸಲರಲ್ಲಿ ತಮಿಳುನಾಡು, ಕೇರಳ ರಾಜ್ಯದವರು ಇದ್ದಾರೆ. ನಮ್ಮ ಮುಖ್ಯಮಂತ್ರಿಯವರು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಶರಣಾದ ನಕ್ಸಲಿಗರ ಮೇಲೆ ಬೇರೆ ರಾಜ್ಯಗಳಲ್ಲಿ ಪ್ರಕರಣಗಳಿವೆ. ಆ ರಾಜ್ಯದ ಸರ್ಕಾರಗಳು ಸಹ ತೀರ್ಮಾನ ಕೈಗೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾವೋವಾದಿಗಳು ಮುಖ್ಯವಾಹಿನಿಗೆ ಮರಳುತ್ತಿರುವುದು ಸ್ವಾಗತಾರ್ಹ
ಶಾಸಕಾಂಗ ಪಕ್ಷದ ಸಭೆಯ ಅಜೆಂಡ ಗೊತ್ತಲ್ಲ
“ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಜೆಂಡ ಏನಿದೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಎಸ್ಸಿ, ಎಸ್ಟಿ ಸಮಾವೇಶದ ಕುರಿತು ಕರೆದಿದ್ದ ಸಭೆ ಮುಂದೂಡಲು ಅನೇಕ ಕಾರಣಗಳಿವೆ. ಎಐಸಿಸಿ ವರಿಷ್ಠರು ಭಾಗವಹಿಸುವುದಾಗಿ ತಿಳಿಸಿದ್ದರಿಂದ ಮುಂದೂಡಲಾಗಿದೆ. ಎಐಸಿಸಿ ನಮ್ಮ ಮೇಲೆ ನಂಬಿಕೆ ಇಟ್ಟಿಲ್ಲ ಎಂಬ ಪ್ರಶ್ನೆ ಈಗ ಬರುವುದಿಲ್ಲ. ನೀವೆ (ಮಾಧ್ಯಮಗಳು) ಬೆಳಗ್ಗೆ ಒಂದು, ಸಂಜೆ ಒಂದು ನಂಬಿಕೆಯ ಪ್ರಶ್ನೆ ಹುಟ್ಟು ಹಾಕುತ್ತಿದ್ದೀರಿ” ಎಂದರು.
“ಪ್ರಧಾನ ಕಾರ್ಯದರ್ಶಿಗಳಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಅವರು ನನ್ನ ಹತ್ತಿರ ಮಾತನಾಡಿದ್ದಾರೆ. ಗೌಪ್ಯ ಸಭೆ ಏನು ಇಲ್ಲ. ನಮ್ಮ ಸಮಸ್ಯೆಗಳನ್ನು ಚರ್ಚಿಸಬೇಕು ಅಂತ ಸಭೆ ಸೇರುತ್ತಿದ್ದೇವೆ. ಅದಕ್ಕೆ ನೀವೆ ಬನ್ನಿ ಎಂದು ಕರೆದಿದ್ದೇನೆ. ಅವರು ದಿನಾಂಕ ಸೂಚಿಸುವುದಾಗಿ ತಿಳಿಸಿದ್ದಾರೆ. ನಂತರ ಸಭೆ ಮಾಡುತ್ತೇವೆ” ಎಂದು ತಿಳಿಸಿದರು.
“ಸಮಾವೇಶದ ಬಗ್ಗೆ ಯಾವ ಆತಂಕನೂ ಇಲ್ಲ. ಯಾರು ಆತಂಕ ಪಡುವ ಅಗತ್ಯತೆಯೂ ಇಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷದಿಂದ ಹೊರತಾಗಿ ಸಮಾವೇಶ ಮಾಡುತ್ತೇವೆ ಎಂದು ನಾನು ಎಲ್ಲೂ ಹೇಳಿಲ್ಲ. ನಾನಾ ವಿಶ್ಲೇಷಣೆಗಳಿಗೆ ಉತ್ತರಿಸಲು ಆಗುತ್ತದೆಯೇ? ಒಬ್ಬೊಬ್ಬರು ಒಂದೊಂದು ರೀತಿಯ ವಿಶ್ಲೇಷಣೆ ಮಾಡುವುದು ಸಹಜ. ಡಿ.ಕೆ.ಶಿವಕುಮಾರ್ ಅವರು ನನಗೆ ಆತಂಕವಿದೆ ಎಂದು ಎಲ್ಲಾದರು ಹೇಳಿದ್ದಾರೆಯೇ? ಸುಮ್ಮನೆ ಹೇಳುವುದು ಬೇಡ. ನಿನ್ನೆ ಇಡೀ ದಿನ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಪತ್ರಿಕಾಗೋಷ್ಠಿ ನಡೆಸಿದ್ದೇವೆ. ನನಗೆ ನಿಮ್ಮ ಆತಂಕ ಇದೆ ಅಂತ ಅವರು ಹೇಳೇ ಇಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.