ರಾಯಚೂರು ನಗರದ ಸಿಯಾತಲಾಬ್ ಬಡಾವಣೆಯ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್)ಯಿಂದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಆಚರಿಸಿದರು.
ಸಾಂಸ್ಕೃತಿಕ ಸಂಘಟನೆಯ ರಾಯಚೂರು ಜಿಲ್ಲಾ ಸಂಚಾಲಕಿ ಸರೋಜ ಗೋನವಾರ್ ಮಾತನಾಡಿ, “ರಾಜ್ಯ ಸಮಿತಿಯಿಂದ ಜನವರಿ 3ರಿಂದ 18ರವರೆಗೆ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಾಚರಣೆಯನ್ನು ಮಹಿಳಾ ಶಿಕ್ಷಣ, ಉದ್ಯೋಗ, ಆರೋಗ್ಯ, ಭದ್ರತೆ ಖಾತ್ರಿಗಾಗಿ ಒತ್ತಾಯಿಸಲಾಗುತ್ತಿದೆ. ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಹಾಗೂ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರನ್ನು ಪ್ರತಿಯೊಬ್ಬ ಹೆಣ್ಣು ಮಗಳೂ ನೆನಪಿಸಿಕೊಳ್ಳಲೇಬೇಕು” ಎಂದು ಹೇಳಿದರು.
“ಸಾವಿತ್ರಿಬಾಯಿ ಫುಲೆಯವರು ಚಿಕ್ಕ ವಯಸ್ಸಿನಲ್ಲೇ ತನ್ನ ಪತಿ ಜ್ಯೋತಿಬಾ ಫುಲೆಯವರಿಂದ ಶಿಕ್ಷಣವನ್ನು ಕಲಿತು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಅವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಶಿಕ್ಷಣದ ಅರಿವೇ ಇರದ ಕಾಲದಲ್ಲಿ ಮನುವಾದವನ್ನು ಮೆಟ್ಟಿನಿಂತು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಕೇವಲ ನಾಲ್ಕು ವರ್ಷಗಳಲ್ಲಿ 18 ಶಾಲೆಗಳನ್ನು ತೆರೆದರು. ಸಮಾನತೆಯನ್ನು ಪಡೆಯಬೇಕಾದರೆ ಶಿಕ್ಷಣ ಬಹಳ ಮುಖ್ಯವೆಂಬುದು ಅರಿವಾದ ಕೂಡಲೇ ಸಾವಿತ್ರಿಬಾಯಿ ಫುಲೆಯವರು ಅದನ್ನು ತಮ್ಮ ಜೀವನದ ಗುರಿಯಾಗಿ ಒಪ್ಪಿಕೊಂಡರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅವೈಜ್ಞಾನಿಕ ಸೇತುವೆ ನಿರ್ಮಾಣದ ವಿರುದ್ಧ ರಸ್ತೆ ತಡೆ ಪ್ರತಿಭಟನೆ; 40ಕ್ಕೂ ಅಧಿಕ ಮಂದಿ ಬಂಧನ
“ಇಂದು ಶಿಕ್ಷಣ ವ್ಯಾಪಾರೀಕರಣವಾಗಿದೆ. ಬಡವರ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಅಸಾಧ್ಯವಾಗಿದೆ. ಇಂತಹ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆಯವರ ಶ್ರಮ, ಧೈರ್ಯ, ಸಾಹಸಗಳನ್ನು ಮೆಚ್ಚಲೇಬೇಕಾಗಿದೆ. ಇಂತಹ ಅವರ ಆದರ್ಶ ಗುಣಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಕವಿತಾ, ನಾಗವೇಣಿ, ಅನ್ನಪೂರ್ಣ, ರಂಗಮ್ಮ ಇದ್ದರು.