ಭಾರತದಲ್ಲಿ ಹಿಂದುತ್ವವಾದಿ, ಕೋಮುವಾದಿ ಭಯೋತ್ಪಾದಕತೆ ಹೆಚ್ಚುತ್ತಿದೆ. ಕೋಮು ದ್ವೇಷವನ್ನು ಹರಡಲಾಗುತ್ತಿದೆ. ಇಂತಹ ಸಮಯದಲ್ಲಿ, ಹಿಂದುತ್ವ ಕೋಮುವಾದಿ ಸಂಘಟನೆ ಶ್ರೀರಾಮ ಸೇನೆಯು ತನ್ನ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡುತ್ತಿದೆ. ಬಾಗಲಕೋಟೆಯಲ್ಲಿ 186 ಹಿಂದುತ್ವವಾದಿ ಕಾರ್ಯಕರ್ತರಿಗೆ ಆರು ದಿನಗಳ ಬಂದೂಕು ಬಳಸುವ ಬಗ್ಗೆ ತರಬೇತಿ ನೀಡಿದೆ. ಗನ್ ತರಬೇತಿ ನೀಡಿದ್ದ ಆರೋಪದ ಮೇಲೆ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿದಂತೆ 27 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
2024ರ ಡಿಸೆಂಬರ್ 9ರಿಂದ ಆರು ದಿನಗಳ ಕಾಲ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಹಿಂದುತ್ವವಾದಿ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಲಾಗಿತ್ತು. ತರಬೇತಿ ನೀಡುತ್ತಿರುವ ಕೆಲಸ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತರಬೇತಿಯನ್ನು ಸಮರ್ಥಿಸಿಕೊಂಡಿದ್ದ ಕುಲಕರ್ಣಿ, “ಏರ್ಗನ್ ಮೂಲಕ ಸ್ವ-ರಕ್ಷಣೆ ತರಬೇತಿ ನೀಡಿದ್ದೇವೆ. ಪ್ರತಿವರ್ಷ ಆಯ್ದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ಸವಾಲು ಎದುರಿಸಲು ಯುವಕರನ್ನು ಸಜ್ಜು ಮಾಡಿದ್ದೇವೆ. ಸ್ವ-ಸುರಕ್ಷೆಗಾಗಿ ವಿವಿಧ ರಕ್ಷಾ ತರಬೇತಿ ನೀಡಲಾಗಿದೆ” ಎಂದು ಹೇಳಿಕೊಂಡಿದ್ದರು.
ಆದಾಗ್ಯೂ, ಸಂಘಟನೆಯೊಂದು ತನ್ನ ಕಾರ್ಯಕರ್ತರಿಗೆ ಬಂದೂರು ತರಬೇತಿ ನೀಡುವುದು ಕಾನೂನು ಬಾಹಿರ. ಮಾತ್ರವಲ್ಲದೆ, ಹಿಂಸಾಚಾರ, ಹಿಂಸೆ, ಭಯೋತ್ಪಾದನೆಗಾಗಿ ನಡೆಸುವ ಸಂಚು, ತಂತ್ರವೆಂದು ಆಕ್ರೋಶ ವ್ಯಕ್ತವಾಗಿತ್ತು.
ಇದೀಗ, ಶ್ರೀರಾಮ ಸೇನೆಯ 27 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಸದ್ಯ, ದೇಶಾದ್ಯಂತ ಕೋಮು ಹಿಂಸಾಚಾರಗಳು ಹೆಚ್ಚುತ್ತಿವೆ. ಪ್ರಧಾನಿ ಮೋದಿಯೂ ಸೇರಿದಂತೆ ಹಲವಾರು ಬಲಪಂಥೀಯರ ರಾಷ್ಟ್ರ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ, ದ್ವೇಷ ಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ. ಹಲ್ಲೆ, ದಾಳಿಗಳ ಬಗ್ಗೆಯೂ ಕೆಲವು ಹಿಂದುತ್ವವಾದಿ ಮುಖಂಡರು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ಬಳಿಕ ಕೆಲವು ಹಿಂದುತ್ವವಾದಿಗಳು ತಮ್ಮ ಮುಂದಿನ ಗುರಿ ಕಾಶಿ, ಮಥುರಾ, ಸಂಭಲ್, ಶ್ರೀರಂಗಪಟ್ಟಣದಲ್ಲಿರುವ ಮಸೀದಿಗಳು ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ, ಬಂದೂಕು ತರಬೇತಿಗಳು ನಡೆಯುತ್ತಿರುವುದು ಕಳವಳ, ಆಘಾತ ಹುಟ್ಟುಹಾಕಿವೆ.