ನೈಜ ಧರ್ಮದ ತಳಹದಿ ಮೇಲೆ ರಾಜಕಾರಣ ನಡೆಯಬೇಕು. ಆದರೆ ರಾಜಕಾರಣಿಗಳು ಹೇಳಿದಂತೆ ಮಠಾಧೀಶರು ಕೇಳುವ ಸ್ಥಿತಿಯಿದೆ. ಬಹಳಷ್ಟು ಸ್ವಾಮೀಜಿಗಳು ರಾಜಕಾರಣಿಗಳ ಹಿಂಬಾಲಕರಾಗಿ ಹೋಗುತ್ತಿದ್ದಾರೆ. ಹೀಗಾಗಿ ನಮ್ಮನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದರು.
ಹುಲಸೂರ ಪಟ್ಟಣದ ಶ್ರೀ ಗುರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ʼಆದರ್ಶಗಳಿಂದ ಬದುಕಲು ಬಿಡದಿರುವ ವಾತಾವರಣ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ನಡೆಯುತ್ತಿದೆ. ಧರ್ಮ ಮತ್ತು ರಾಜಕೀಯ ಪರಸ್ಪರ ಬೆರೆತರೆ ತುಂಬಾ ಅಪಾಯಕಾರಿʼ ಎಂದರು.
ʼಲಿಂಗಾಯತರು ಇಷ್ಟಲಿಂಗ ಧಾರಣೆ ಮಾಡಿಕೊಂಡು ದೇಹವೇ ದೇವಾಲಯ ಎಂದು ಭಾವಿಸಬೇಕು. ದೇವರನ್ನು ಹುಡುಕಿಕೊಂಡು ತೀರ್ಥಯಾತ್ರೆಗೆ ಹೋಗುವ ಗುಡಿ ಸಂಸ್ಕೃತಿ ಲಿಂಗಾಯತರು ಬಿಡಬೇಕು. ನಮ್ಮ ಧರ್ಮವನ್ನು ಅರ್ಥೈಸಿಕೊಂಡು ಅದರ ಹಾದಿಯಲ್ಲಿ ನಡೆಯಲು ಪ್ರಯತ್ನಿಸಬೇಕು. ಶರಣರ ದೃಷ್ಠಿಯಲ್ಲಿ ʼಸ್ಥಾವರʼ ಎಂದರೆ ಚಲನೆಯಿಲ್ಲದಿರುವುದು, ಜಡವಾದದ್ದು, ʼಜಂಗಮʼ ಎಂದರೆ ಚೈತನ್ಯ, ಆಚಾರ ಒಳಗೊಂಡಿರುವುದು ಎಂದರ್ಥ. ನಿಮ್ಮ ಗುಡಿಯಲ್ಲಿರುವ ದೇವರಿಗೆ ಜೀವವಿಲ್ಲ. ಹೀಗಾಗಿ ಅದು ವರ, ಶಾಪ ಕೊಡಲು ಸಾಧ್ಯವಿಲ್ಲʼ ಎಂದು ವಿಶ್ಲೇಷಿಸಿದರು.
ʼದೇವರು ಇಲ್ಲದಿರುವ ಜಾಗವೇ ಇಲ್ಲ. ದೇವರು ಸರ್ವವ್ಯಾಪಿ, ಸರ್ವಶ್ರೇಷ್ಠನಾಗಿದ್ದಾನೆ. ಇಂತಹ ತತ್ವಗಳು ಯಾರು ಅರ್ಥೈಸಿಕೊಳ್ಳುತ್ತಾರೊ ಅವರು ಯಾವುದೇ ಗುಡಿ-ಗೋಪುರ, ತೀರ್ಥಕ್ಷೇತ್ರಗಳಿಗೆ ಸುತ್ತುವ ಅಗತ್ಯವಿಲ್ಲ. ದೇವಾಲಯದಲ್ಲಿ ಕೊಡುವ ತೀರ್ಥ-ಪ್ರಸಾದಕ್ಕಿಂತ ಮನೆಯಲ್ಲಿನ ಶುದ್ಧ ನೀರು, ತಾಯಿ ಮಾಡುವ ಅಡುಗೆ ನಿಜವಾದ ಮಹಾಪ್ರಸಾದ ಎಂದು ತಿಳಿದುಕೊಳ್ಳುವ ಎಚ್ಚರ ಬರಬೇಕಾಗಿದೆʼ ಎಂದು ಕರೆ ನೀಡಿದರು.

ʼನಮಗೆ ನಮ್ಮ ಮಠಗಳೇ ಶತ್ರುಗಳಾಗಿವೆ. ಅನೇಕ ಮಠಗಳಲ್ಲಿ ಹೋಮ-ಹವನ, ಯಜ್ಞ-ಯಾಗ ಹಾಗೂ ವೈಭವದ ಪೂಜೆ ನಡೆಯುತ್ತಿವೆ. ಮಠಾಧೀಶರು ಮೊದಲು ಕರ್ಮಠತನ ಕೈಬಿಟ್ಟು ಶುದ್ಧ ಬಸವತತ್ವವನ್ನು ಜಾರಿಗೊಳಿಸಲು ಸಂಕಲ್ಪ ಮಾಡಬೇಕು. ಆವಾಗ ಭಕ್ತರು ನಮ್ಮನ್ನು ಅನುಕರಣೆ ಮಾಡುತ್ತಾರೆ. ಆದರೆ ʼಹೊತ್ತು ಬಂದಂಗ್ ಕೊಡೆ ಹಿಡಿʼ ಎಂಬಂತೆ ಎಲ್ಲರಿಗೂ ʼಜೈʼ ಎನ್ನುವ ದ್ವಂದ್ವ ಮನೋಭಾವ ಕಾವಿಧಾರಿಗಳಲ್ಲಿದೆʼ ಎಂದು ಹೇಳಿದರು.
ವಿಜಯಪುರದ ಸಾಹಿತಿ ಜೆ.ಎಸ್.ಪಾಟೀಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼದೇವಾಲಯಗಳು ಸುಲಿಗೆಯ ಕೇಂದ್ರಗಳಾಗಿರುವುದನ್ನು ಅರಿತ ಬಸವಾದಿ ಶರಣರು ಅಂಗೈಯಲ್ಲಿ ಲಿಂಗ ಇಡುವ ಮೂಲಕ ದೇವರನ್ನು ದೇಹಾಲಯಕ್ಕೆ ತಂದು ಕೊಟ್ಟಿದ್ದಾರೆ. ಆದರೆ ಲಿಂಗಾಯತರು ಬರಬರುತ್ತಾ ಬಹುದೇವತಾ ಆರಾಧನೆಯ ಮಂದಿರ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇದು ಸರಿಯಾದ ಮಾರ್ಗ ಅಲ್ಲ’ ಎಂದರು.
‘ಲಿಂಗಾಯತ ಮಠ, ಶಿಕ್ಷಣ ಸಂಸ್ಥೆಗಳು ಹಾಗೂ ವಚನ ಸಾಹಿತ್ಯ ವಿನಾಶಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಇದನ್ನು ಅರಿತು ಲಿಂಗಾಯತರು ಎಚ್ಚರವಹಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅತ್ಯಾಚಾರದ ಬೆದರಿಕೆ : 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಸಮಾರಂಭದಲ್ಲಿ ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿದರು.
ಅಭಿನವ ಸ್ವಾಮೀಜಿ, ಸಾಯಗಾಂವ ಶಿವಾನಂದ ಸ್ವಾಮೀಜಿ, ಜನವಾಡ ಮಲ್ಲಿಕಾರ್ಜುನ ಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಲತಾ ಹಾರಕುಡೆ, ಮಂಜು ರಬಕವಿ, ಶೇಖರ ಇಮ್ಮಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.