ಗುತ್ತಿಗೆಗೆ ನೀಡಿದ್ದ ಹೋಟೆಲ್ಅನ್ನು ಅವಧಿಗೂ ಮುನ್ನವೇ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರು ತೆಲುಗು ನಟರಾದ ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ, ನಿರ್ಮಾಪಕ ಡಿ.ಸುರೇಶ್ ಸೇರಿದಂತೆ ಅವರ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನ್ಯಾಯಾಲಯದ ನಿರ್ದೇಶನದಂತೆ ನಟರು ಸೇರಿದಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪಿತೂರಿ, ಅತಿಕ್ರಮಣ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿ ಜನವರಿ 11ರಂದು ಫಿಲ್ಮ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
2014ರಲ್ಲಿ ದಗ್ಗುಬಾಟಿ ಕುಟುಂಬವು ಫಿಲ್ಮ್ ನಗರದ ಫ್ಲ್ಯಾಟ್ನಲ್ಲಿ ಭೂಮಿಯನ್ನು ಗುತ್ತಿಗೆಗೆ ನೀಡಿತ್ತು. ನೋಂದಾಯಿತ ಗುತ್ತಿಗೆ ಪತ್ರ ನೀಡಿದ ನಂತರ ಅಲ್ಲಿ ಹೋಟೆಲ್ ತೆರೆಯಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಕೇಜ್ರಿವಾಲ್ಗೆ ಇರಲಿ ಎಚ್ಚರ
ಗುತ್ತಿಗೆ ಪತ್ರದ ಅವಧಿ ಚಾಲ್ತಿಯಲ್ಲಿದ್ದರು ಕೂಡ ವೆಂಕಟೇಶ್ ಸೇರಿದಂತೆ ದಗ್ಗುಬಾಟಿ ಕುಟುಂಬಸ್ಥರು ಹೋಟೆಲ್ ತೆರವುಗೊಳಿಸಲು ಪ್ರಯತ್ನಿಸಿದ್ದರು. ನಂತರ ಅವರ ವಿರುದ್ಧ ತಡೆಯಾಜ್ಞೆಗಾಗಿ ಸಿಟಿ ಸಿವಿಲ್ ನ್ಯಾಯಾಲಯದ ಮೊರೆಹೋಗಿದ್ದೆವು. ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿದೆ. ಹೀಗಿದ್ದರೂ ದಗ್ಗುಬಾಟಿ ಕುಟುಂಬಸ್ಥರು ಹೋಟೆಲ್ಅನ್ನು ಕೆಡವಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ದೂರುದಾರ ನಾಂಪಲ್ಲಿ ಕೋರ್ಟ್ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
