ಜನವರಿ ತಿಂಗಳ ಆರಂಭದಲ್ಲಿ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಹತ್ಯೆಗೀಡಾದ ಪತ್ರಕರ್ತ ಮುಖೇಶ್ ಚಂದ್ರಕರ್ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೆರವು ನೀಡುವುದಾಗಿ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಘೋಷಿಸಿದ್ದಾರೆ.
ಛತ್ತೀಸ್ಗಢದ ಪತ್ರಕರ್ತ ಮುಖೇಶ್ ಚಂದ್ರಕರ್ (33) ಅವರು ಜನವರಿ 1ರಂದು ನಾಪತ್ತೆಯಾಗಿದ್ದರು. ಜನವರಿ 3ರಂದು ಬಿಜಾಪುರ ಪಟ್ಟಣದಲ್ಲಿ ರಸ್ತೆ ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಜಮೀನಿನಲ್ಲಿರುವ ಸೆಪ್ಟಿಕ್ ಟ್ಯಾಂಕ್ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಮುಖೇಶ್ ಅವರನ್ನು ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರೆ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಅವರನ್ನು ಜನವರಿ 5ರಂದು ಹೈದ್ರಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆರೋಪಿ ಸುರೇಶ್ ಅವರ ಸಹೋದರ ರಿತೇಶ್ ಮತ್ತು ದಿನೇಶ್ ಹಾಗೂ ಕೆಲಸಗಳ ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆ ಎಂಬವರನ್ನೂ ಬಂಧಿಸಲಾಗಿದೆ.
ಆರೋಪಿ ಸುರೇಶ್ ಚಂದ್ರಕರ್, ಹತ್ಯೆಗೀಡಾದ ಪತ್ರಕರ್ತನ ಸಂಬಂಧಿ ಎಂದು ಹೇಳಲಾಗಿದೆ. ಬಿಜಾಪುರದಲ್ಲಿ ಸುರೇಶ್ ನಡೆಸುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಮುಖೇಶ್ ವರದಿ ಪ್ರಕಟಿಸಿದ್ದರು. ಆ ಕಾರಣಕ್ಕಾಗಿ, ಅವರನ್ನು ಹತ್ಯೆ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿರುವುದಾಗಿ ವರದಿಯಾಗಿದೆ.
“ಮೃತ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೆರವು ನೀಡಲಾಗುವುದು. ಪತ್ರಕರ್ತರಿಗಾಗಿ ಕಟ್ಟಡ ನಿರ್ಮಿಸಲಾಗುವುದು. ಆ ಕಟ್ಟಡಕ್ಕೆ ಮುಖೇಶ್ ಅವರ ಹೆಸರಿಡಲಾಗುವುದು” ಎಂದು ಮುಖ್ಯಮಂತ್ರಿ ಸಾಯಿ ಹೇಳಿದರು.