ಹೆರಿಗೆಗಾಗಿ ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಪತಿಯೊಬ್ಬ, ಮಗು ಹುಟ್ಟಿದ ಮರುದಿನವೇ ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಮೈಸೂರು ನಗರದಲ್ಲಿ ನಡೆದಿದೆ.
ಶಿವಗೋಪಾಲಯ್ಯ(35) ಮೃತ ದುರ್ದೈವಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ಶಿವಗೋಪಾಲಯ್ಯ ತನ್ನ ಪತ್ನಿಯನ್ನು ಹೆರಿಗೆಗೆಂದು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗಾಗಿ, ಪತ್ನಿಯ ಆರೈಕೆಗಾಗಿ ಕಳೆದ 5-6 ದಿನಗಳಿಂದ ಅವರು ಆಸ್ಪತ್ರೆಯಲ್ಲೇ ತಂಗಿದ್ದರು. ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ಮಲಗುತ್ತಿದ್ದರು.
ಶಿವಗೋಪಾಲಯ್ಯ ಅವರ ಪತ್ನಿ ಅಶ್ವಥಮ್ಮ ಅವರಿಗೆ ಭಾನುವಾರ ಹೆರಿಗೆಯಾಗಿದೆ. ಸಿಸೇರಿಯನ್ ಹೆರಿಗೆ ಮೂಲಕ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು. ತಂದೆಯಾದ ಖುಷಿಯಲ್ಲಿ ಶಿವಗೋಪಾಲಯ್ಯ ರಾತ್ರಿ 10:30ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದರು. ಬೆಳಿಗ್ಗೆ 7ರ ಸುಮಾರಿಗೆ ನೋಡಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ. ತಂದೆಯಾದ ಖುಷಿಯಲ್ಲಿಯಲ್ಲಿದ್ದ ಶಿವಗೋಪಾಲಯ್ಯ ಮಗು ಜನಿಸಿದ ಮರುದಿವೇ ಉಸಿರು ಚೆಲ್ಲಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವವರು ಮತ್ತು ಪರಿಚಾರಕರಿಗೆ ಮೀಸಲಾದ ವಸತಿ ನಿಲಯದ ಸೌಲಭ್ಯವಿದೆ. ಆದರೆ, ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಉಚಿತವಾಗಿ ತಂಗಲು ಅವಕಾಶ ನೀಡಲಾಗಿದೆ. ಕಾರ್ಡ್ ಇಲ್ಲದವರು ₹30 ಕಟ್ಟಬೇಕಾಗುತ್ತದೆ. ಆದರೆ, ಈ ಹಣವನ್ನು ಶಿವಗೋಪಾಲಯ್ಯ ಅವರಿಗೆ ಭರಿಸಲು ಸಾಧ್ಯವಾಗಿಲ್ಲ. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವುದರಿಂದ ಯಾವುದೇ ಕ್ಷಣದಲ್ಲಿ ತಮ್ಮನ್ನು ಕೂಗಬಹುದೆಂದು ತಿಳಿದು ಆಸ್ಪತ್ರೆಯ ಆವರಣದಲ್ಲೇ ಮಲಗುತ್ತಿದ್ದರು ಎಂದು ತಿಳಿದುಬಂದಿದೆ.
“ಈ ಮೂರು ದಿನಗಳಲ್ಲಿ ಆಸ್ಪತ್ರೆಯ ಶಿವಗೋಪಾಲಯ್ಯ ಅವರು ಉತ್ತಮ ಸ್ನೇಹ ಬೆಳೆಸಿಕೊಂಡಿದ್ದರು. ಶಿವಗೋಪಾಲಯ್ಯ ಬಳಿ ಹಣವಿರಲಿಲ್ಲ. ಊಟಕ್ಕೂ ಹಣವಿರಲಿಲ್ಲ. ಅವರಿಗೆ ನಾವೇ ಸಹಾಯ ಮಾಡಿದ್ದೆವು. ವೈದ್ಯರೊಬ್ಬರು ಹಾಲಿನ ಪುಡಿ ಖರೀದಿಗೆ ಹಣ ನೀಡಿದ್ದರು. ಮಗು ಹುಟ್ಟಿದ್ದಕ್ಕೆ ಬಹಳ ಸಂತೋಷದಲ್ಲಿದ್ದರು. ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ನೆಲದ ಮೇಲೆ ಮಲಗುತ್ತಿದ್ದ, ಪತ್ನಿ ಹಾಗೂ ಮಗುವನ್ನು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ” ಎಂದು ಅಟೆಂಡರ್ ಸುರೇಶ್ ಭಾವುಕರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಶೋಕಪುರಂ ನಿಲ್ದಾಣದವರೆಗೆ ರೈಲುಗಳ ವಿಸ್ತರಣೆ; ಸ್ಥಳೀಯರ ವಿರೋಧ
“ವಸತಿ ನಿಲಯದ ಸೌಲಭ್ಯಗಳು ಲಭ್ಯವಿದ್ದರೂ ಶಿವಗೋಪಾಲಯ್ಯ ಅವರು ಅದನ್ನು ಬಳಸದಿರಲು ನಿರ್ಧರಿಸಿದ್ದರು. ಈ ದುರಂತದ ಬಗ್ಗೆ ನಮಗೆ ಇಂದು ಬೆಳಿಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ, ವರದಿಗಳು ಬಂದ ನಂತರ ನಿಖರವಾದ ಕಾರಣ ತಿಳಿದುಬರಲಿದೆ” ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕಿ ಡಾ. ಕೆ ಆರ್ ದಾಕ್ಷಾಯಿಣಿ ಹೇಳಿದ್ದಾರೆ.
ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಅಶ್ವಥಮ್ಮ ಅವರಿಗೆ ಪತಿಯ ಸಾವಿನ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಮಗುವಿನ ಆಗಮನದಿಂದ ಸಂಭ್ರಮದಲ್ಲಿರಬೇಕಿದ್ದ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ.